ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಹಲವು ವರ್ಗಕ್ಕೆ ಶಕ್ತಿ ತುಂಬುವ ಕೆಲಸ: ಹೆಚ್‌ಡಿಕೆ ಬಣ್ಣನೆ

Public TV
1 Min Read

ರಾಮನಗರ: ಕೇಂದ್ರ ಮಧ್ಯಂತರ ಬಜೆಟ್ (Union Budget 2024) ಮಂಡನೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇದು ಚುನಾವಣೆಗೆ ಹೋಗುವ ಸಂದರ್ಭ. ಹಿಂದಿನ ಐದು ವರ್ಷದ ಆಡಳಿತದಲ್ಲಿ ಯಾವ ಯಾವ ವಲಯಕ್ಕೆ ಶಕ್ತಿ ತುಂಬಿದ್ದೇವೆ ಎನ್ನುವ ಮಾಹಿತಿಯನ್ನ ನೀಡಿದ್ದಾರೆ. ಯುವಜನತೆ ಸೇರಿ ಹಲವು ವರ್ಗಕ್ಕೆ ಹೆಚ್ಚಿನ ಆರ್ಥಿಕ ಶಕ್ತಿ ನೀಡುವ ಭರವಸೆ ಕೊಟ್ಟಿದ್ದಾರೆ. ದಾಖಲೆಯ ಮಟ್ಟದಲ್ಲಿ ಉತ್ಪಾದನಾ ಗ್ರಾಫ್ ಮೇಲಕ್ಕೆ ಹೋಗ್ತಿದೆ. ಅದನ್ನ ಪ್ರತಿಯೊಂದು ವರ್ಗದ ಅಭಿವೃದ್ಧಿ ಬಳಸಿಕೊಳ್ಳಲು ಸಿದ್ಧತೆ ಮಾಡಲಾಗಿದೆ. ಹಾಗಾಗಿ ಮುಂದಿನ ಪೂರ್ಣ ಪ್ರಮಾಣದ ಬಜೆಟ್‌ಗೆ ಮಧ್ಯಮ ವರದಿ ಮಂಡನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 6 ಬಜೆಟ್‌, 6 ಸೀರೆ – ಪ್ರತಿ ಬಜೆಟ್‌ನಲ್ಲೂ ಸೀರೆಯಿಂದ್ಲೆ ಸುದ್ದಿಯಾಗ್ತಾರೆ ಕೇಂದ್ರ ಸಚಿವೆ

ಇಂದಿನ ಅವರ ಮಧ್ಯಂತರ ಬಜೆಟ್‌ನಲ್ಲಿ ಪ್ರವಾಸೋದ್ಯಮ, ಮೀನುಗಾರಿಕೆ, ರೈಲ್ವೆ ಹಾಗೂ ಕೃಷಿಗೆ ಆದ್ಯತೆ ಕೊಟ್ಟಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ಉದ್ಯೋಗ ಸೃಷ್ಟಿಗೆ ಚಿಂತನೆ ನಡೆಸಲಾಗಿದೆ. ಕೃಷಿ ಧಾನ್ಯಗಳ ಬೆಳೆಗೆ ಶಕ್ತಿ ತುಂಬುವುದಾಗಿ ಹೇಳಿರೋದು ದೇಶದ ಪ್ರಗತಿಗೆ ದೂರದೃಷ್ಠಿಯಾಗಿದೆ ಎಂದು ಕೇಂದ್ರ ಮಧ್ಯಂತರ ಬಜೆಟನ್ನು ಸ್ವಾಗತಿಸಿದ್ದಾರೆ.

ಬಜೆಟ್ ಮೇಲೆ ಕರ್ನಾಟಕದ ನಿರೀಕ್ಷೆ ವಿಚಾರ ಕುರಿತು ಮಾತನಾಡಿ, ಇದು ಮಧ್ಯಂತರ ಬಜೆಟ್ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಹಾಗಾಗಿ ಚುನಾವಣೆ ಬಳಿಕ ರಾಜ್ಯದ ಸಮಸ್ಯೆಗಳನ್ನ ಚರ್ಚೆ ಮಾಡ್ತೀವಿ. ನನಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಅರಿವಿದೆ. ಎಲ್ಲಿ ಅನ್ಯಾಯವಾಗಿದೆ ಎಲ್ಲವನ್ನೂ ಸರಿಮಾಡುವ ನಿಟ್ಟಿನಲ್ಲಿ ಕೇಂದ್ರದ ಮನವೊಲಿಸುತ್ತೇವೆ. ಪ್ರಾಮಾಣಿಕವಾಗಿ ರಾಜ್ಯದ ಜನತೆ ಪರವಾಗಿ ಧ್ವನಿ ಎತ್ತುತ್ತೇನೆ. ಅದರ ಜೊತೆಗೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾದಾಗ ಕರ್ನಾಟಕಕ್ಕೆ ಆದ ಲೋಪಗಳು ಸರಿಯಾಗುವ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್: ನಳಿನ್ ಕುಮಾರ್ ಕಟೀಲ್

Share This Article