ಪತಿಗೆ ಮಗು ತೋರಿಸಲು ಇಷ್ಟವಿಲ್ಲದಿದ್ದರಿಂದ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ: ತಪ್ಪೊಪ್ಪಿಕೊಂಡ ಸೇಠ್

Public TV
2 Min Read

ಪಣಜಿ: 4 ವರ್ಷದ ಪುತ್ರನನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಬಿದ್ದ ಸಿಇಓ ಸುಚನಾ ಸೇಠ್‌ (Suchana Seth) ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಗೋವಾ ಪೊಲೀಸರ ವಿಚಾರಣೆಯ ವೇಳೆ ಮಗುವನ್ನು (4 Year Son Murder Case) ತಾನೇ ಕೊಂದಿರುವುದಾಗಿ ಆಕೆ ಹೇಳಿದ್ದಾಳೆ. ಅಲ್ಲದೆ ಕಾರಣವನ್ನು ಕೂಡ ಸುಚನಾ ವಿವರಿಸಿದ್ದಾಳೆ.

ಸೇಠ್‌ ಹೇಳಿದ್ದೇನು..?: ವಿಚ್ಛೇದನ (Divorce) ಕೋರ್ಟ್ ನಲ್ಲಿತ್ತು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನ ವಿಡೀಯೋ ಕಾಲ್ ಮೂಲಕ ತೋರಿಸಬೇಕಿತ್ತು. ಆದರೆ ಗಂಡನಿಗೆ ಮಗುವನ್ನು ತೋರಿಸುವುದಕ್ಕೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೂ ಕೂಡ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿತ್ತು ಎಂದಿದ್ದಾಳೆ.

ಇದೇ ನೋವಿನಲ್ಲಿ ಕೈ ಕುಯ್ದ ಆತ್ಮಹತ್ಯೆಗೆ ಯತ್ನಿಸಿದೆ, ಆದರೆ ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನು ಮಾಡಬೇಕೆಂದು ತೋಚದೆ ಸೂಟ್ ಕೇಸ್ ನಲ್ಲಿ ಮಗುವಿನ ಬಾಡಿ ಹಾಕಿ ಪರಾರಿಯಾಗಲು ಯತ್ನಿಸಿದೆ ಎಂದು ವಿವರಿಸಿದ್ದಾಳೆ. ಇದನ್ನೂ ಓದಿ: ಅಪಾರ್ಟ್‌ಮೆಂಟ್‌‌ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬೆಂಗ್ಳೂರಿನ CEO ಸಿಕ್ಕಿಬಿದ್ದ ರೋಚಕ ಕಥೆ ಓದಿ

ನಡೆದಿದ್ದೇನು..?: ಬೆಂಗಳೂರು ಕಂಪನಿಯ CEO ಆಗಿರುವ ಸುಚನಾ ಸೇಠ್‌  ಗೋವಾದಲ್ಲಿ ಸರ್ವಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗ ಇದ್ದಳು. ಜನವರಿ 8 ರಂದು ಅಪಾರ್ಟ್‌ ಮೆಂಟ್‌ ಸಿಬ್ಬಂದಿ ಜೊತೆ ನಾನು ಬೆಂಗಳೂರು ಹೋಗಬೇಕು ಟ್ಯಾಕ್ಸ್‌ ಬುಕ್‌ ಮಾಡುವಂತೆ ಹೇಳಿದ್ದಾಳೆ. ಆಗ ಅವರು ಟ್ಯಾಕ್ಸ್‌ ಬದಲು ವಿಮಾನದಲ್ಲಿ ಪ್ರಯಾಣಿಸುವಂತೆ ಸೂಚಿಸುತ್ತಾರೆ. ಇದಕ್ಕೊಪ್ಪದ ಸೇಠ್‌ ನಾನು ಟ್ಯಾಕ್ಸಿಯಲ್ಲೇ ಹೋಗಬೇಕು ಎಂದು ಹಠಕ್ಕೆ ಬಿದ್ದಿದ್ದಾಳೆ. ಅಂತೆಯೇ ಸಿಬ್ಬಂದಿ ಟ್ಯಾಕ್ಸಿ ಬುಕ್‌ ಮಾಡುತ್ತಾರೆ.

ಇತ್ತ ಸೇಠ್‌ ರೂಂ ಖಾಲಿ ಮಾಡುತ್ತಿದ್ದಂತೆಯೇ ಸಿಬ್ಬಂದಿ ಕ್ಲೀನ್‌ ಮಾಡಲು ಹೋದಾಗ ಬಟ್ಟೆಯಲ್ಲಿ ರಕ್ತದ ಕಲೆಗಳನ್ನು ಕಂಡು ಗಾಬರಿಗೊಳ್ಳುತ್ತಾರೆ. ಕೂಡಲೇ ಪೊಲೀಸರಿಗೂ ಮಾಹಿತಿ ರವಾನಿಸುತ್ತಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸೇಠ್‌ಗೆ ಕರೆ ಮಾಡಿ ಮಗ ಹಾಗೂ ರಕ್ತದ ಕಲೆಯ ಬಗ್ಗೆ ವಿಚಾರಿಸುತ್ತಾರೆ. ಆಗ ಆಕೆ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾಳೆ. ಸೇಠ್‌ ಹೇಳಿಕೆಯಿಂದ ಮತ್ತಷ್ಟು ಅನುಮಾನಗೊಂಡು ಗೋವಾ ಪೊಲೀಸರು ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಹತ್ತಿರದ ಪೊಲೀಸ್‌ ಠಾಣೆಗೆ ತೆರಳುವಂತೆ ಸೂಚಿಸುತ್ತಾರೆ. ಹೀಗಾಗಿ ಚಿತ್ರದುರ್ಗದ ಐಮಂಗಲ ಪೊಲೀಸ್‌ ಠಾಣೆಯಲ್ಲಿ ಸೇಠ್‌ ಬಣ್ಣ ಬಯಲಾಗಿದೆ.

Share This Article