ಸಂಜು ವೆಡ್ಸ್ ಗೀತಾ 2: ಸ್ವಿಟ್ಜರ್‌ಲ್ಯಾಂಡ್‌ ಅನುಭವ ಬಿಚ್ಚಿಟ್ಟ ಟೀಮ್

Public TV
2 Min Read

ನಾಲ್ಕು ತಿಂಗಳ‌ ಹಿಂದೆ ಪ್ರಾರಂಭವಾಗಿದ್ದ ನಾಗಶೇಖರ್ ಅವರ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2′ (Sanju Weds Geeta 2) ಚಿತ್ರದ ಚಿತ್ರೀಕರಣ ಪ್ರಮುಖ ಘಟ್ಟಕ್ಕೆ ಬಂದಿದೆ. ಇದೇ ತಿಂಗಳು ಚಿತ್ರತಂಡ ಸ್ವಿಟ್ಜರ್‌ಲ್ಯಾಂಡ್ (Switzerland) ಗೆ ಹೋಗಿ 2 ಹಾಡುಗಳನ್ನು ಚಿತ್ರೀಕರಿಸಿಕೊಂಡು ಬಂದಿದೆ. ಈವರೆಗೆ ನಡೆಸಿದ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಳ್ಳಲೆಂದು ನಿರ್ದೇಶಕ‌ ನಾಗಶೇಖರ್ ಹಾಗೂ ತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಅಶೋಕ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಿಟ್ಜರ್‌ಲ್ಯಾಂಡ್ ಶೂಟಿಂಗ್ ದೃಶ್ಯಗಳ ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ನಾಗಶೇಖರ್ ಹಿಂದೆ ಸಂಜು ವೆಡ್ಸ್ ಗೀತಾ ಸಿನಿಮಾ ಮಾಡುವಾಗ ಆದ ಅನುಭವಗಳನ್ನು ಮೆಲುಕು ಹಾಕಿದರು. ಅಲ್ಲದೆ ಈ ಚಿತ್ರ ಅದಕ್ಕಿಂತ ಚೆನ್ನಾಗಿ, ವೈಭವಯುತವಾಗಿ ಮೂಡಿಬರುತ್ತಿದೆ. ಇತ್ತೀಚೆಗಷ್ಟೇ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹಾಡುಗಳ ಶೂಟಿಂಗ್ ಮಾಡಿಕೊಂಡು ಬಂದಿದ್ದೇವೆ. ನಂತರ ಮುಂಬಯಿ, ಹೈದರಾಬಾದ್ ಶೂಟಿಂಗ್ ಮಾಡಿ, 2024ರ ಏಪ್ರಿಲ್ 1ರಂದು ಚಿತ್ರವನ್ನು  ರಿಲೀಸ್ ಮಾಡುವ ಯೋಜನೆಯಿದೆ.

ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸಿನಿಂದಲೇ  ಭಾಗ ಎರಡು ಇಷ್ಟು ಅದ್ದೂರಿಯಾಗಿ ಮೂಡಿಬರುತ್ತಿದೆ. ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರೆ. ನನ್ನ‌ ಈ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್‌ಮೆಟ್ ಕುಮಾರ್ ಕೈಜೋಡಿಸಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅದ್ಭುತವಾದ  ಟ್ಯೂನ್‌ಗಳನ್ನು ಮಾಡಿಕೊಟ್ಟಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಇಬ್ಬರೂ ಅದ್ಭುತ ಅಭಿನಯ ನೀಡಿದ್ದಾರೆ.

2024ರ ಬ್ಲಾಕ್‌ಬಸ್ಟರ್ ಚಿತ್ರವಾಗಿ ಸಂಜು ವೆಡ್ಸ್ ಗೀತಾ ಮೂಡಿಬರಲಿದೆ. ಇಂಥ ಒಳ್ಳೆ ನಿರ್ಮಾಪಕರು ನಮ್ಮ ಚಿತ್ರಕ್ಕೆ ಸಿಕ್ಕಿದ್ದಾರೆ. ಯಾವುದಕ್ಕೂ ಹಿಂದೇಟು ಹಾಕಲ್ಲ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ನಿರ್ದೇಶಕ ಎಸ್.ಮಹೇಂದರ್, ನಟ ಶರಣ್ ಆಗಮಿಸಿ ನಾಗಶೇಖರ್ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು. ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ ಅಲ್ಲಿ ಕೊರೆಯುವ ಚಳಿ ಇತ್ತು. ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ ಎಂದು ಹೇಳಿದರು.

ನಾಯಕಿ ರಚಿತಾ ರಾಮ್ (Rachita Ram) ಮಾತನಾಡಿ  ತುಂಬಾ ಶೇಡ್ಸ್ ಇರುವಂಥ ಗೀತಾ ಪಾತ್ರ ನನ್ನದು. ಸಿನಿಮಾ ಅಂದ್ರೆ ಖುಷಿ, ಕಷ್ಟ ಎರಡೂ ಇರುತ್ತೆ. ನಾವಿ ಹೋಗಿದ್ದೇ ಡಿಸೆಂಬರ್ ಚಳಿಯಲ್ಲಿ. ನಾಗಶೇಖರ್ ಏನಾ ಮಾಡಿದರೂ ಪ್ಲಾನ್ಡ್ ಆಗಿ ಮಾಡ್ತಾರೆ. ನಮಗೆ ನೇಚರ್ ಕೂಡ ತುಂಬಾ ಸಪೋರ್ಟ್ ಮಾಡಿತು. ಅಲ್ಲಿ ಮಾಡಿದ ಎರಡು ಹಾಡುಗಳೂ ತುಂಬಾ ಚೆನ್ನಾಗಿ ಬಂದಿವೆ. ಲೊಕೇಶನ್ ಅದ್ಭುತ. ಸತ್ಯ ಹೆಗಡೆ ಸರ್ ಬೇರೆ ಬೇರೆ ಆ್ಯಂಗಲ್‌ನಲ್ಲಿ ಶೂಟ್ ಮಾಡಿದ್ದಾರೆ. ಎಮೋಷನಲ್ ಸೀನ್ಸ್ ಇನ್ಟೆನ್ಸ್ ಆಗಿ ಬಂದಿದೆ ಎಂದರು.

 

ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮ ಚಿತ್ರದಲ್ಲಿ 5 ಸುಂದರ ಹಾಡುಗಳಿಗೆ ಸಂಗೀತ ನೀಡಿದ್ದು, ಕವಿರಾಜ ಸಾಹಿತ್ಯ ಬರೆದಿದ್ದಾರೆ. ನಿರ್ಮಾಪಕ ಚಲವಾದಿ ಕುಮಾರ್‌ ಮಾತನಾಡಿ,  ನಾಗಶೇಖರ್ ಮತ್ತು ನಾನು ಎಂಜಿನಿಯರಿಂಗ್ ಕ್ಲಾಸ್‌ಮೆಟ್ಸ್. ಸ್ಕ್ರಿಪ್ಟ್ ನಲ್ಲೂ ನಾನು ಜೊತೆ ಕುಳಿತಿದ್ದೆ. ಸಿನಿಮಾ ತುಂಬಾ ಚೆನ್ನಾಗಿ ಬರುತ್ತಿದೆ ಎಂದರು. ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Share This Article