ಪತ್ನಿ ಸೋದರನಿಗೆ ಕಿಡ್ನಿ ಕೊಟ್ಟಿದ್ದಕ್ಕೆ ತಲಾಖ್ ಕೊಟ್ಟ..!

Public TV
2 Min Read

– ಮದುವೆಯಾಗಿ 25 ವರ್ಷ ಕಳೆದಿತ್ತು
– ಕಿಡ್ನಿ ಕೊಟ್ಟಿದ್ದಕ್ಕೆ 40 ಲಕ್ಷ ಕೇಳು ಅಂದಿದ್ದ ಪತಿರಾಯ

ಲಕ್ನೋ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸೋದರನಿಗೆ ಪತ್ನಿ ಕಿಡ್ನಿ ದಾನ ಮಾಡಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾರೆ. ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಗೊಂಡ ಜಿಲ್ಲೆಯ ಬೈರಿಯಾಹಿ ಗ್ರಾಮದಲ್ಲಿ ನಡೆದಿದ್ದು, ಸೌದಿ ಅರೇಬಿಯಾದಲ್ಲಿದ್ದ (Saudi Arabia) ಪತಿ ವಾಟ್ಸಪ್ ಕಾಲ್‍ನಲ್ಲಿದ್ದಾಗಲೇ ತಲಾಖ್ (Talaq), ತಲಾಖ್, ತಲಾಖ್ ಎಂದಿದ್ದಾನೆ.

ಘಟನೆಯ ವಿವರ: ಬೈರಿಯಾಹಿ ಗ್ರಾಮದಲ್ಲಿ ವಾಸಿಸುತ್ತಿದ್ದ ತರನ್ನುಂ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಸ್ವಂತ ಸೋದರನಿಗೆ ತನ್ನ ಒಂದು ಕಿಡ್ನಿಯನ್ನು ದಾನವಾಗಿ ನೀಡಿದ್ದಾಳೆ. ಈ ವಿಚಾರ ಕೇಳುತ್ತಿದ್ದಂತೆಯೇ ಪತಿರಾಯ ರೊಚ್ಚಿಗೆದ್ದಿದ್ದಾನೆ. ಕಿಡ್ನಿ ಕೊಟ್ಟಿದ್ದಕ್ಕೆ 40 ಲಕ್ಷ ರೂಪಾಯಿ ಹಣ ಕೇಳು ಎಂದು ಹೇಳಿದ್ದಾನೆ. ಆದರೆ ತರನ್ನುಂ ಇದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ವಾಟ್ಸಪ್ ಕಾಲ್ ನಲ್ಲೇ (Whatsapp) ತ್ರಿವಳಿ ತಲಾಖ್ ನೀಡಿದ್ದಾನೆ. ಇದನ್ನೂ ಓದಿ: ಅಜಿತ್ ಪವಾರ್, ಶಿಂಧೆಯ ಪೈಕಿ ಯಾರು ಮೊದಲು ಬರುತ್ತಾರೋ ಕಾದುನೋಡಿ – ಕರ್ನಾಟಕ ಕಾಂಗ್ರೆಸ್‌ ಬಗ್ಗೆ ಹೆಚ್‌ಡಿಕೆ ಬಾಂಬ್‌

ತಲಾಖ್ ನೀಡಿದ ಬಳಿಕ ಪತಿ ಮನೆಯವರು ಆಕೆಯನ್ನು ಮನೆಯಿಂದ ಹೊರಹಾಕಿದ್ದು, ಈಗ ಆಕೆ ತವರಿಗೆ ವಾಪಸ್ ಬಂದಿದ್ದಾಳೆ. 25 ವರ್ಷದ ಹಿಂದೆ ಈಕೆಯನ್ನು ಮೊಹಮ್ಮದ್ ರಶೀದ್ ವಿವಾಹವಾಗಿದ್ದ. ಆದರೆ ಮದುವೆಯಾಗ 5 ವರ್ಷದ ಬಳಿಕವೂ ಸಂತಾನ ಪ್ರಾಪ್ತಿಯಾಗಿಲ್ಲ ಎಂದು ರಶೀದ್ ಎರಡನೇ ಮದುವೆಯಾಗಿದ್ದ. ಬಳಿಕ ಆತ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ತೆರಳಿದ್ದ.

ಮೊದಲು ಒಪ್ಪಿ, ಬಳಿಕ ಹಣಕ್ಕೆ ಒತ್ತಾಯ!: ಈ ನಡುವೆ ತರನ್ನುಂ ಹಿರಿಯ ಸೋದರ ಮೊಹಮ್ಮದ್ ಶಾಕಿರ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ. ಒಂದೂವರೆ ವರ್ಷದ ಹಿಂದೆಯೇ ನಾನು ವಿಚಾರವನ್ನು ಪತಿ ರಶೀದ್‍ಗೆ ತಿಳಿಸಿದ್ದೆ. ಆಗ ತನ್ನ ಪತಿ ಕಿಡ್ನಿ ದಾನ ಮಾಡಲು ಒಪ್ಪಿದ್ದ ಎಂದು ತರನ್ನುಂ ಹೇಳುತ್ತಿದ್ದಾಳೆ.

ಆದರೆ ಸೋದರ ಚಿಕಿತ್ಸೆ ಮುಗಿಸಿ ವಾಪಸ್ ಬಂದ ಮೇಲೆ ಪತಿ 40 ಲಕ್ಷ ರೂಪಾಯಿ ಕೇಳು ಎಂದು ಒತ್ತಾಯಿಸಿದ್ದ. ಆದರೆ ಇದಕ್ಕೆ ನಿರಾಕರಿಸಿದ್ದಕ್ಕೆ ಆತ ವಾಟ್ಸಪ್ ಕಾಲ್ ಮೂಲಕವೇ ತಲಾಖ್ ಹೇಳಿದ್ದಾನೆ ಎಂದು ತರನ್ನುಂ ಹೇಳಿದ್ದಾಳೆ. ಇದರಿಂದ ಗಾಬರಿಗೊಂಡ ತರನ್ನುಂ ತಕ್ಷಣವೇ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾಳೆ. ರಶೀದ್ ಭಾರತಕ್ಕೆ ವಾಪಸ್ ಬರುತ್ತಿದ್ದಂತೆಯೇ ಕಾನೂನು ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

Share This Article