ಸಲ್ಮಾನ್ ಗೆ ಮತ್ತೆ ಜೀವ ಬೆದರಿಕೆ ಹಾಕಿದ ಗ್ಯಾಂಗ್ ಸ್ಟರ್: ಭದ್ರತೆ ಪರಿಶೀಲನೆ

Public TV
1 Min Read

ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan), ಕೋರ್ಟಿನಿಂದ ನೆಮ್ಮದಿ ಸಿಕ್ಕಿದ್ದರೂ, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi)  ಮಾತ್ರ ನೆಮ್ಮದಿ ನೀಡುತ್ತಿಲ್ಲ. ಪದೇ ಪದೇ ನಟನಿಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ. ಮತ್ತೆ ಶಾರುಖ್ ಇ-ಮೇಲ್ ಖಾತೆಗೆ ಸಂದೇಶವೊಂದನ್ನು ಕಳುಹಿಸಿದ್ದು, ವಿದೇಶದಲ್ಲಿ ನೆಲೆಸೋಕೆ ವಿಸಾ ಇರಬಹುದು. ಸಾವಿಗೆ ಇಲ್ಲ ಎಂದು ಬರೆದಿದ್ದಾನೆ.

salman

ಲಾರೆನ್ಸ್ ನಿಂದ ಜೀವ ಬೆದರಿಕೆ (Life Threat) ಮೇಲ್ ಬರುತ್ತಿದ್ದಂತೆಯೇ ಮತ್ತೆ ಪೊಲೀಸ್ ಅಧಿಕಾರಿಗಳು ಸಲ್ಮಾನ್ ಮನೆಯ ಭದ್ರತೆಯನ್ನು ತಪಾಸಣೆ ಮಾಡಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗದಿರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ಮತ್ತಷ್ಟು ಭದ್ರತೆಯನ್ನು ಹೆಚ್ಚಿಸುವ ಕುರಿತಂತೆ ಚರ್ಚಿಸಿದ್ದಾರೆ.

ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಈ ಹಿಂದೆ ಲಾರೆನ್ಸ್ ಸಹಚರರನ್ನು ಬಂಧಿಸಿ ಅಗತ್ಯ ಮಾಹಿತಿಯನ್ನು ಮುಂಬೈ ಪೊಲೀಸ್ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಗಾಬರಿ ಹುಟ್ಟಿಸುವಂತಹ ಹೇಳಿಕೆಗಳು ಆ ಟೀಮ್ ನಿಂದ ಬಂದಿವೆ ಎಂದು ಸುದ್ದಿ ಆಗಿತ್ತು. ಹಾಗಾಗಿ ಈ ಹಿಂದೆಯೂ ಸಲ್ಮಾನ್ ಖಾನ್ ಗೆ ಭಾರೀ ಭದ್ರತೆ ನೀಡಲಾಗಿತ್ತು.

ಸಲ್ಮಾನ್ ಖಾನ್ ಗೆ ಈ ಹಿಂದೆ ಬರೆದ ಪತ್ರದಲ್ಲಿ ಮನೆಯ ಮುಂದೇ ಅವರನ್ನು ಕೊಲ್ಲಲು ಪ್ಲ್ಯಾನ್ ಮಾಡಿರುವ ವಿಷಯವನ್ನು ಲಾರೆನ್ಸ್ ಅಂಡ್ ಟೀಮ್ ಬಹಿರಂಗಪಡಿಸಿತ್ತು. ಈ ಹತ್ಯೆಗಾಗಿ ಗನ್ ಕೂಡ ಖರೀದಿಸಲಾಗಿತ್ತು ಎನ್ನುವ ವಿಷಯವನ್ನು ಬಾಯ್ಬಿಟ್ಟಿದ್ದರು. ಅಲ್ಲದೇ, ಯಾವುದೇ ಕಾರಣಕ್ಕೂ ಸ‍ಲ್ಮಾನ್ ಖಾನ್ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದೂ ಹೇಳಿರುವ ಅಂಶ ಬೆಳಕಿಗೆ ಬಂದಿತ್ತು.

ಪ್ರತಿ ವರ್ಷವೂ ಸಲ್ಮಾನ್ ಖಾನ್ ಮನೆಯ ಮುಂದೆ ನಿಂತು ಅಭಿಮಾನಿಗಳಿಗೆ ಈದ್ ಶುಭಾಶಯ ಹೇಳುವುದನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದ್ದರು. ಆದರೆ, ಈ ಬಾರಿ ಅವರು ಹಾಗೆ ಮಾಡಲಿಲ್ಲ. ಅಭಿಮಾನಿಗಳ ಮಧ್ಯೆಯ ಆಗಂತುಕರು ಬರಬಹುದು ಎನ್ನುವ ಆತಂಕದಿಂದಾಗಿ ವಿಶ್ ಮಾಡಲಿಲ್ಲ. ಮುಂಬೈ ಮತ್ತು ದೆಹಲಿ ಪೊಲೀಸರು ಲಾರೆನ್ಸ್ ಅಂಡ್ ಟೀಮ್ ಬೆನ್ನು ಬಿದ್ದಿದ್ದು, ಹಲವು ಆಘಾತಕಾರಿ ಅಂಶಗಳನ್ನು ಅವರಿಂದ ಪಡೆಯುತ್ತಿದ್ದಾರೆ. ಈ ನಡುವೆ ಲಾರೆನ್ಸ್ ಮತ್ತೊಂದು ಸಂದೇಶವನ್ನು ಕಳುಹಿಸಿ ಮತ್ತಷ್ಟು ನಿದ್ದೆಗೆಡಿಸಿದ್ದಾರೆ.

Share This Article