ವಿದ್ಯುತ್ ಕೊರತೆ ಮಧ್ಯೆ ಕಲ್ಲಿದ್ದಲು ಕಳ್ಳಾಟ – ಕಳ್ಳರ ಪಾಲಾಗುತ್ತಿದೆ ಟನ್‌ಗಟ್ಟಲೇ ಕಲ್ಲಿದ್ದಲು

Public TV
1 Min Read

ರಾಯಚೂರು: ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಲು (Coal) ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತ ಎನ್ನುವ ಮಾತು ಒಂದೆಡೆಯಾದರೆ, ವಿದ್ಯುತ್ ಕೇಂದ್ರಗಳಿಗೆ ಸಂಪೂರ್ಣವಾಗಿ ತಲುಪಬೇಕಾದ ಕಲ್ಲಿದ್ದಲು ಕಳ್ಳ ಮಾರ್ಗದಲ್ಲಿ ಕಂಡವರ ಪಾಲಾಗುತ್ತಿದೆ. ರಾಯಚೂರು (Raichuru) ಒಂದರಲ್ಲೇ ಪ್ರತಿನಿತ್ಯ ಟನ್‌ಗಟ್ಟಲೇ ಕಲ್ಲಿದ್ದಲು ಖಾಸಗಿಯವರ ಕೈ ಸೇರುತ್ತಿದೆ.

ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಇಡೀ ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಸರಬರಾಜು ಮಾಡುತ್ತಿವೆ. ಈಗ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಹಿಂದೆ ಬಿದ್ದಿವೆ. ಇದರ ಹಿಂದೆ ಕಲ್ಲಿದ್ದಲು ಕಳ್ಳಾಟ ನಡೆಯುತ್ತಿರುವುದು ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ. ಇದನ್ನೂ ಓದಿ: ಸುರಂಗದೊಳಗೆ ಸಿಲುಕಿ 10 ದಿನ – ಪೈಪ್ ಮೂಲಕ ಕ್ಯಾಮೆರಾ ಕಳುಹಿಸಿ ಕಾರ್ಮಿಕರ ಮೊದಲ ವೀಡಿಯೋ ಸೆರೆ

ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಸರಬರಾಜಾಗುವ ಕಲ್ಲಿದ್ದಲನ್ನ ಸಂಪೂರ್ಣವಾಗಿ ಬಳಕೆ ಮಾಡದೆ, ಅಲ್ಪ ಪ್ರಮಾಣದ ಕಲ್ಲಿದ್ದನ್ನ ಉಳಿಸಿ ಕಳುಹಿಸುತ್ತಿರುವುದು ಬಯಲಾಗಿದೆ. ಈ ಅಲ್ಪ ಪ್ರಮಾಣದ ಕಲ್ಲಿದ್ದಲೇ ಈಗ ನೂರಾರು ಟನ್ ಇದ್ದು, ಲಕ್ಷಾಂತರ ರೂಪಾಯಿ ಗೋಲ್ ಮಾಲ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ರೈಲ್ವೇ ಇಲಾಖೆ ಕಲ್ಲಿದ್ದಲು ಸಾಗಣೆ ಮಾಡುವ ವ್ಯಾಗನಗಳ ಸ್ವಚ್ಚತೆಗಾಗಿ ಗುತ್ತಿಗೆದಾರರಿಗೆ ಟೆಂಡರ್ ಕರೆದಿತ್ತು. ಆದೋನಿ ಮೂಲದ ಗುತ್ತಿಗೆದಾರನಿಗೆ ಗುತ್ತಿಗೆ ನೀಡಿತ್ತು. ಟೆಂಡರ್‌ನಲ್ಲಿ ಅಳಿದುಳಿದ ಕಲ್ಲಿದ್ದಲು ಹಾಗೂ ಇತರೆ ವಸ್ತುಗಳನ್ನ ಸ್ವಚ್ಛ ಮಾಡಲು ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ಸ್ವಚ್ಛತೆ ಹೆಸರಲ್ಲಿ ಗುತ್ತಿಗೆದಾರ ಪ್ರತಿನಿತ್ಯ ಟನ್‌ಗಟ್ಟಲೇ ಗುಣಮಟ್ಟದ ಕಲ್ಲಿದ್ದಲು ಪಡೆಯುತ್ತಿದ್ದಾನೆ. ಸ್ಟಾಕ್ ಯಾರ್ಡ್ನಲ್ಲಿ ನೂರಾರು ಟನ್ ಕಲ್ಲಿದ್ದಲು ಸಂಗ್ರಹವಾಗಿದೆ. ಗುಣಮಟ್ಟದ ಕಲ್ಲಿದ್ದಲನ್ನ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಂಪೂರ್ಣ ಬಳಸಿಕೊಳ್ಳದೆ ಹೊರಗಡೆ ಕಳುಹಿಸುತ್ತಿರುವುದು ಅಕ್ರಮದ ಜಾಡು ಕಂಡುಬರ್ತಿದೆ. ಇದನ್ನೂ ಓದಿ: ಸತ್ತೇ ಹೋಗಿದ್ದೇನೆ ಎಂದು ಬಿಂಬಿಸಿ ತಲೆಮರೆಸಿಕೊಂಡಿದ್ದ ರೌಡಿ ಬಂಧನ

ಕಲ್ಲಿದ್ದಲು ರೇಕ್‌ನ ವ್ಯಾಗನಾರ್‌ಗಳ ಸ್ವಚ್ಛತೆ ಹೆಸರಲ್ಲಿ ಟನ್‌ಗಟ್ಟಲೇ ಕಲ್ಲಿದ್ದಲು ಮಾಯಾವಾಗುತ್ತಿದೆ. ಇಡೀ ರಾಜ್ಯ ವಿದ್ಯುತ್ ಕೊರತೆ ಎದುರಿಸುತ್ತಿದ್ದರೆ ಇಲ್ಲಿ ಕಲ್ಲಿದ್ದಲಿನ ಕಳ್ಳ ದಂಧೆ ನಡೆಯುತ್ತಿರೋದು ಸ್ಪಷ್ಟವಾಗಿದೆ.

Share This Article