ಸಿಎಂ ಅವ್ರೇ ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ- 2018ರ ಪಬ್ಲಿಕ್ ಟಿವಿ ವರದಿ ತೆಗೆದು ಸರ್ಕಾರಕ್ಕೆ ತಿವಿದ ಯತ್ನಾಳ್

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಅಕ್ಕಿ ಪಾಲಿಟಿಕ್ಸ್ (Rice Politics) ಜೋರಾಗಿದೆ. ಕಾಂಗ್ರೆಸ್ ಗ್ಯಾರಂಟಿ (Congress Guarantee) ಗಳಲ್ಲಿ ಒಂದಾದ ಅನ್ನಭಾಗ್ಯ (AnnaBhagya) ಕ್ಕೆ ಅಕ್ಕಿ ಹೊಂದಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹರಸಾಹಸಪುಡತ್ತಿದೆ. ಈ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಪಬ್ಲಿಕ್ ಟಿವಿಯ 2018ರ ವರದಿಯೊಂದನ್ನು ತೆಗೆದು ಕಾಂಗ್ರೆಸ್ ಸರ್ಕಾರಕ್ಕೆ ತಿವಿದಿದ್ದಾರೆ.

ಶಾಲೆಯ ಮಕ್ಕಳ ಊಟವನ್ನು ನೀವು ಕಿತ್ತುಕೊಂಡಿದ್ದು ಈ ರಾಜ್ಯ ಮರೆತಿಲ್ಲ ಎಂದು ಹೇಳುವ ಮೂಲಕ ‘ಕಲ್ಲಡ್ಕ ಶಾಲೆ ಮಕ್ಕಳ ಊಟಕ್ಕೆ ಕಲ್ಲು- ಅಲ್ಪಸಂಖ್ಯಾತರ ಅರೇಬಿಕ್ ಕಾಲೇಜಿಗೆ ಸರ್ಕಾರದಿಂದ ಹಣದ ಹೊಳೆ’ ಎಂಬ ಹೆಡ್‌ಲೈನ್‌ ಇರುವ ಪಬ್ಲಿಕ್‌ ಟಿವಿ ವೆಬ್‌ಸೈಟ್‌ ವರದಿಯನ್ನು ಸ್ಕ್ರೀನ್‍ಶಾಟ್ ತೆಗೆದು ಟ್ವೀಟ್ ಮಾಡಿ ನೆನಪಿಸಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಲ್ಲಡ್ಕ ಶಾಲೆ ಮಕ್ಕಳ ಊಟಕ್ಕೆ ಕಲ್ಲು- ಅಲ್ಪಸಂಖ್ಯಾತರ ಅರೇಬಿಕ್ ಕಾಲೇಜಿಗೆ ಸರ್ಕಾರದಿಂದ ಹಣದ ಹೊಳೆ

ಟ್ವೀಟ್‍ನಲ್ಲೇನಿದೆ..?: ಕೊಟ್ಟಿರುವ ಭರವಸೆಗಳನ್ನು ಈಡೇರಿಸಲಾಗದೆ ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವ ಸಿದ್ದರಾಮಯ್ಯನವರು ಭಾವನಾತ್ಮಕವಾಗಿ ಮಾತನಾಡಲು ಆರಂಭಿಸಿದ್ದಾರೆ. ಅನ್ನ, ಬಡತನ ಹಾಗೂ ಹಸಿವಿನ ಬಗ್ಗೆ ಇಷ್ಟು ಭಾವನಾತ್ಮಕ ನುಡಿಗಳನ್ನು ಮಾಧ್ಯಮದ ಮುಂದೆ ಹೇಳುವಾಗ ಒಮ್ಮೆ ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಶಾಲೆ (Sri Rama Vidya Kendra Kalladka) ಯ ಮಕ್ಕಳ ಅನ್ನವನ್ನು ಕಿತ್ತುಕೊಂಡಾಗ, ಈ ಹಸಿವು, ಬಡತನ ನೆನಪಿಗೆ ಬರಲಿಲ್ಲವಲ್ಲ. ಶಾಲೆಯ ಮಕ್ಕಳ ಊಟವನ್ನು ನೀವು ಕಿತ್ತುಕೊಂಡಿದ್ದು ಈ ರಾಜ್ಯ ಮರೆತಿಲ್ಲ, ಚುನಾವಣೆಗೆ ಮೊದಲು ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸಿ ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪ್ರೊಟೆಸ್ಟ್: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ (Central Government) ಅಕ್ಕಿ ಕೊಡುತ್ತಿಲ್ಲ ಅಂತ ಆರೋಪಿಸಿ ಇಂದು ರಾಜ್ಯ ಸರ್ಕಾರವೇ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆಗೆ ಇಳಿಯುತ್ತಿದೆ. ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಇಡೀ ಮಂತ್ರಿಮಂಡಲ ಬೀದಿಗಿಳಿದು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಂತ್ರಿಗಳು ಮತ್ತು ಜಿಲ್ಲೆಯ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ.

ಬೆಂಗಳೂರಿನ ಫ್ರೀಡಂಪಾರ್ಕ್ (Freedom Park Bengaluru) ನಲ್ಲಿ ಸಿಎಂ, ಡಿಸಿಎಂ, ಬೆಂಗಳೂರು ಮಂತ್ರಿಗಳು, ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ. 10 ಕೆಜಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಹಣ ಕೊಟ್ಟರು ಅಕ್ಕಿ ಕೊಡ್ತಿಲ್ಲ ಅಂತ ಕಾಂಗ್ರೆಸ್ ಆರೋಪಿಸುತ್ತಿದೆ. ಅಕ್ಕಿ ಸ್ಟಾಕ್ ಇದ್ದರೂ ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕೆ ಅಕ್ಕಿ ಕೊಡ್ತಿಲ್ಲ ಅಂತ ಸರ್ಕಾರವೇ ಬೀದಿಗಿಳಿದು ಹೋರಾಟ ನಡೆಸುತ್ತಿದೆ.

 

Share This Article