ಹೈಕಮಾಂಡ್ ಅಂಗಳದಲ್ಲಿ ಸಿಎಂ ಚೆಂಡು – ಸಿದ್ದು ಅಥವಾ ಡಿಕೆಶಿ ಪರ ಹೆಚ್ಚು ಶಾಸಕರಿದ್ದರೆ ಏನಾಗಬಹುದು?

Public TV
2 Min Read

ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ (Karnataka Election) ನಿರೀಕ್ಷೆಗಿಂತಲೂ ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್ (Congress) ಪಕ್ಷಕ್ಕೆ ಇದೀಗ ಮುಖ್ಯಮಂತ್ರಿ ಆಯ್ಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವೆ ಸಿಎಂ ಹುದ್ದೆಗೆ ನಡೆಯುತ್ತಿರುವ ತೀವ್ರ ಪೈಪೋಟಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಭಾನುವಾರ ನಡೆದ ಸಿಎಲ್‍ಪಿ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಹುದ್ದೆಗೆ ಪಟ್ಟು ಹಿಡಿದ ಕಾರಣ, ನೂತನ ನಾಯಕನ ಆಯ್ಕೆಯನ್ನು ಹೈಕಮಾಂಡ್ ವಿವೇಚನೆಗೆ ಬಿಡಲಾಗಿತ್ತು. ಸದ್ಯ ಹೈಕಮಾಂಡ್ ಅಂಗಳದಲ್ಲಿ ಸಿಎಂ ಆಯ್ಕೆಯ ಚೆಂಡು ಇದೆ. ಭಿನ್ನ, ವಿಭಿನ್ನ ಮಾದರಿಗಳಲ್ಲಿ ಲಾಬಿಗಳು ಮುಂದುವರೆದಿವೆ. ಯಾರೂ ಊಹಿಸಲಾಗದ ರೀತಿಯಲ್ಲಿ ಹೊಸ ಹೊಸ ಆಟಗಳು ಶುರುವಾಗಿವೆ.

 

ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ದೆಹಲಿಗೆ ಹಾರಿದ್ದರೆ ಇತ್ತ ಕಡೆ ಕ್ಷಣದಲ್ಲಿ ಡಿಕೆ ಶಿವಕುಮಾರ್ ಅನಾರೋಗ್ಯದ ನೆಪ ಹೇಳಿ ಮನೆಯಲ್ಲಿ ಉಳಿದಿದ್ದು, ಇಂದು ಡಿಕೆ ಶಿವಕುಮಾರ್‌ ದೆಹಲಿಗೆ ತೆರಳಲಿದ್ದಾರೆ. ಶಿಮ್ಲಾಗೆ ತೆರಳಿರುವ ಸೋನಿಯಾ ಗಾಂಧಿ ಇಂದು ದೆಹಲಿಗೆ ಆಗಮಿಸಲಿದ್ದಾರೆ. ಇಂದು ಡಿಕೆಶಿ ಮತ್ತು ಸಿದ್ದರಾಮಯ್ಯ ಸಮ್ಮುಖದಲ್ಲೇ ಖರ್ಗೆ ನಿವಾಸದಲ್ಲೇ ಬ್ಯಾಲೆಟ್‌ ಬಾಕ್ಸ್‌ ತೆರೆಯಲಾಗುತ್ತದೆ. ಶಾಸಕರು ಯಾರಿಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೋ ಅವರಿಗೆ ಸಿಎಂ ಪಟ್ಟ ಸಿಗುವ ಸಾಧ್ಯತೆಯಿದೆ. ಇದಾದ ಬಳಿಕ ಇಬ್ಬರ ಜೊತೆ ಸಂಧಾನ ಸಭೆ ನಡೆದು ಸಿಎಂ ಯಾರಾಗಬೇಕು ಎಂಬ ನಿರ್ಧಾರ ಅಂತಿಮವಾಗಲಿದೆ. ಇದನ್ನೂ ಓದಿ: ಕಾಂಗ್ರೆಸ್‌ ಒಕ್ಕಲಿಗರನ್ನ ಸಿಎಂ ಮಾಡಲಿ – ಡಿಕೆಶಿ ಪರ ಬ್ಯಾಟ್‌ ಬೀಸಿದ ಮಾಜಿ ಸಚಿವ ಸುಧಾಕರ್‌

ಸಿದ್ದು ಪರ ಹೆಚ್ಚು ಶಾಸಕರ ಒಲವಿದ್ದರೆ ಏನಾಗಬಹುದು?
ಇದು ನನ್ನ ಕೊನೆ ಚುನಾವಣೆಯಾಗಿದ್ದು ನನ್ನನ್ನೇ 5 ವರ್ಷ ಸಿಎಂ ಮಾಡಿ ಎಂದು ಸಿದ್ದು ಪಟ್ಟು ಹಿಡಿಯಬಹುದು. ಡಿಸಿಎಂ ಸೇರಿ ಸಂಪುಟದಲ್ಲಿ ಫ್ರೀ ಹ್ಯಾಂಡ್ ಕೊಡುವಂತೆ ಕೇಳಬಹುದು . ಸಿಎಂ ಸ್ಥಾನದ ವಿಚಾರದಲ್ಲಿ ರಾಜೀ ಸಂಧಾನಕ್ಕೆ ಒಪ್ಪದೇ ಇರಬಹುದು.

 

ಡಿಕೆಶಿ ಪರ ಹೆಚ್ಚು ಶಾಸಕರಿದ್ದರೆ ಏನಾಗಬಹುದು?
ನನ್ನನ್ನೇ 5 ವರ್ಷ ಸಿಎಂ ಮಾಡಿ ಎಂದು ಸಿದ್ದು ಪಟ್ಟು ಹಿಡಿಯಬಹುದು. ಸಿಎಂ ಅವಧಿಯ ಸಂಧಾನಕ್ಕೆ ಸಿದ್ಧವಿಲ್ಲ ಎಂದು ಹಠ ಹಿಡಿದು ಪೂರ್ಣ ಅವಧಿಯ ಸಿಎಂ ಎಂದು ಘೋಷಿಸುವಂತೆ ಬೇಡಿಕೆ ಇಡಬಹುದು.

ಸಂಧಾನ ಸೂತ್ರ ಏನಾಗಬಹುದು?
* ಸಿದ್ದುಗೆ ಬಹುಮತ ಸಿಕ್ಕರೆ ಡಿಕೆ ಅಸಮಾಧಾನ ಶಮನಕ್ಕೆ ಡಿಸಿಎಂ ಸೇರಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರಿಸುವ ಸಾಧ್ಯತೆ.
* 50:50 ಫಾರ್ಮುಲ ಅಡಿ ತಲಾ 2.5 ವರ್ಷದ ಅವಧಿ ನಿಗದಿಪಡಿಸಬಹುದು.
* ಮೊದಲ 2 ವರ್ಷ ಸಿದ್ದರಾಮಯ್ಯ ಕೊನೆಯ 3 ವರ್ಷ ಡಿಕೆಶಿ ಸಂಧಾನದ ಸೂತ್ರ.
* ಡಿಕೆಶಿ ಪಟ್ಟು ಹಿಡಿದರೆ ಲೋಕಸಭಾ ಚುನಾವಣೆವರೆಗೆ ಸಿದ್ದರಾಮಯ್ಯ ಸೂತ್ರ.
* ಡಿಕೆಶಿಗೆ ಹೆಚ್ಚಿನ ಶಾಸಕರ ಬೆಂಬಲವಿದ್ದರೆ ಸಿದ್ದುಗೆ 1 ವರ್ಷ ಅವಕಾಶ ನೀಡುವುದು.
* ಸಿದ್ದುಗೆ ಬಿಟ್ಟು ಕೊಡಲು ಡಿಕೆಶಿ ಒಪ್ಪದಿದ್ದರೆ ಸಿದ್ದು ಮನವೊಲಿಕೆಗೆ ಪ್ರಯತ್ನ.
* ಯಾವುದಾದರು 1 ಅವಧಿಗೆ ಒಪ್ಪಿಕೊಳ್ಳುವಂತೆ ಡಿಕೆಶಿಯನ್ನು ಮನವೊಲಿಸಬಹುದು.

Share This Article