1 ಕೆಜಿ ಗಾಂಜಾ ಕಳ್ಳಸಾಗಣೆ ಆರೋಪ – ಭಾರತ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ

Public TV
2 Min Read

ಸಿಂಗಾಪುರ: ಸುಮಾರು 1 ಕೆಜಿ ತೂಕದಷ್ಟು ಗಾಂಜಾವನ್ನು ಕಳ್ಳಸಾಗಣೆ (Cannabis Smuggling) ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿಯನ್ನು (Indian) ಸಿಂಗಾಪುರ (Singapore) ಗಲ್ಲಿಗೇರಿಸಿದೆ.

ಅಂತಾರಾಷ್ಟ್ರೀಯ ಮಟ್ಟದ ವಿರೋಧದ ನಡುವೆಯೂ ಭಾರತ ಮೂಲದ ವ್ಯಕ್ತಿ ತಂಗರಾಜು ಸುಪ್ಪಯ್ಯನನ್ನು (46) ಸಿಂಗಾಪುರದ ಚಾಂಗಿ ಜೈಲು ಸಂಕೀರ್ಣದಲ್ಲಿ ಬುಧವಾರ ಗಲ್ಲಿಗೇರಿಸಲಾಗಿದೆ (Hanging) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2017 ರಲ್ಲಿ ತಂಗರಾಜು 1,017.9 ಗ್ರಾಂ. ಗಾಂಜಾವನ್ನು ಕಳ್ಳಸಾಗಣೆ ಮಾಡುವ ಸಂಚಿನಲ್ಲಿ ತೊಡಗಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ. ಸಿಂಗಾಪುರದ ಕಾನೂನಿನ ಪ್ರಕಾರ ಗಲ್ಲುಶಿಕ್ಷೆಗೆ ಗುರಿಪಡಿಸಲು ಇರುವ ಪ್ರಮಾಣದ 2 ಪಟ್ಟು ಮಾದಕ ವಸ್ತು ಆತನ ಬಳಿ ಸಿಕ್ಕಿತ್ತು. 2018ರಲ್ಲಿ ಆತನಿಗೆ ಮರಣದಂಡನೆ ವಿಧಿಸಲಾಗಿತ್ತು. ಇದನ್ನು ಮೇಲ್ಮನವಿ ನ್ಯಾಯಾಲಯ ಕೂಡಾ ಬಳಿಕ ಎತ್ತಿ ಹಿಡಿದಿತ್ತು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ತಂಗರಾಜುವಿನ ಗಲ್ಲುಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಸಿಂಗಾಪುರ ಸರ್ಕಾರವನ್ನು ಒತ್ತಾಯಿಸಿವೆ. ಆದರೆ ಇವಾವುದಕ್ಕೂ ಕಿವಿಗೊಡದ ಅಲ್ಲಿನ ಸರ್ಕಾರ ತಂಗರಾಜುನನ್ನು ಗಲ್ಲಿಗೇರಿಸಿದೆ. ಇದನ್ನೂ ಓದಿ: 40 ಮಹಿಳೆಯರಿಗೆ ಒಬ್ನೇ ಪತಿ

ತಂಗರಾಜುನನ್ನು ಬಂಧಿಸಲಾದ ಸಂದರ್ಭ ಆತನ ಬಳಿ ಎಲ್ಲಿಯೂ ಡ್ರಗ್ಸ್ ಪತ್ತೆಯಾಗಿರಲಿಲ್ಲ. ಅಮಾಯಕ ವ್ಯಕ್ತಿಯನ್ನು ವಿನಾಕಾರಣ ಕೊಲ್ಲಲಾಗುತ್ತಿದೆ ಎಂದು ಜಿನೀವಾ ಮೂಲದ ಮಾದಕ ವಸ್ತು ನೀತಿಗಳ ಜಾಗತಿಕ ಆಯೋಗದ ಸದಸ್ಯ ರಿಚರ್ಡ್ ಬ್ರಾನ್ಸರ್ ಅವರು ತಮ್ಮ ಬ್ಲಾಗ್‌ನಲ್ಲಿ ಸೋಮವಾರ ಬರೆದಿದ್ದರು. ಆದರೆ ತಂಗರಾಜುವಿನ ತಪ್ಪನ್ನು ಸಮಂಜಸವಾದ ಅನುಮಾನದಾಚೆಗೂ ಸಾಬೀತುಪಡಿಸಲಾಗಿದೆ ಎಂದು ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.

ಜಗತ್ತಿನ ಅತ್ಯಂತ ಕಠಿಣ ಮಾದಕವಸ್ತು ವಿರೋಧಿ ಕಾನೂನುಗಳಿರುವ ದೇಶಗಳಲ್ಲಿ ಸಿಂಗಾಪುರ ಒಂದಾಗಿದೆ. ಅಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಮರಣ ದಂಡನೆ ಶಿಕ್ಷೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಆದರೆ ಸಿಂಗಾಪುರದ ವಾದವನ್ನು ವಿಶ್ವಸಂಸ್ಥೆಗಳ ಮಾನವ ಹಕ್ಕುಗಳ ಹೈ ಕಮಿಷನ್ ಖಂಡಿಸಿದೆ.

ಕಳೆದ 6 ತಿಂಗಳಲ್ಲಿ ಸಿಂಗಾಪುರದಲ್ಲಿ ಜಾರಿಗೊಳಿಸಲಾದ ಮೊದಲ ಮರಣದಂಡನೆ ತಂಗರಾಜುವಿನದ್ದಾಗಿದೆ. 2 ವರ್ಷಗಳ ಅಂತರದ ಬಳಿಕ 2022ರ ಮಾರ್ಚ್‌ನಲ್ಲಿ ಸಿಂಗಾಪುರ ಮರಣದಂಡನೆ ಶಿಕ್ಷೆಯನ್ನು ಮತ್ತೆ ಆರಂಭಿಸಿತು. ಅದರಲ್ಲಿ ಇದು 12ನೇ ಶಿಕ್ಷೆಯಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂದ್ರೆ ಗೂಂಡಾ ರಾಜ್ಯ ಅನ್ನೋ ವಾತಾವರಣವಿತ್ತು – ಸುಮಲತಾ

Share This Article