ನವದೆಹಲಿ: ಮದ್ರಾಸ್ (Madras) ನಲ್ಲಿರುವ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಿಹೆಚ್ಡಿ (PhD) ಓದುತ್ತಿರುವ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದು, ಇದು ಈ ವರ್ಷದಲ್ಲಿ ನಡೆದ ಮೂರನೇ ಘಟನೆಯಾಗಿದೆ.
ಮೃತನನ್ನು ಸಚಿನ್ (32) ಎಂದು ಗುರುತಿಸಲಾಗಿದ್ದು, ಪಶ್ಚಿಮ ಬಂಗಾಳ ಮೂಲದವನಾಗಿದ್ದಾನೆ. ಈತ ಮದ್ರಾಸ್ ಐಐಟಿನಲ್ಲಿ ಪಿಹೆಚ್ಡಿ ವ್ಯಾಸಂಗ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಕೆಲ ಗಂಟೆಗಳ ಹಿಂದೆ ವಿದ್ಯಾರ್ಥಿ ವಾಟ್ಸಪ್ ಸ್ಟೇಟಸ್ (Whatsapp Status) ಹಾಕಿದ್ದಾನೆ. ಅದರಲ್ಲಿ ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನು ಅಲ್ಲ ಎಂದು ಬರೆದುಕೊಂಡಿದ್ದಾನೆ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ದುರ್ಮರಣ
ವಿದ್ಯಾರ್ಥಿ ಈ ರೀತಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದನ್ನು ನೋಡಿದ ಓರ್ವ ಗೆಳೆಯ, ಕೂಡಲೇ ಆತನ ಮನೆಗೆ ಓಡಿದ್ದಾನೆ. ಆದರೆ ಅದಾಗಲೇ ವಿದ್ಯಾರ್ಥಿ ಕುಣಿಕೆಗೆ ಕೊರಳೊಡ್ಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತ ಅಂಬುಲೆನ್ಸ್ ಗೆ ಕರೆ ಮಾಡಿದ್ದು, ಆದರೆ ಅದಾಗಲೇ ಸಚಿನ್ ಮೃತಪಟ್ಟಿದ್ದನು.
ಸಚಿನ್ ಮೃತದೇಹವನ್ನು ರೊಯಪೇಟೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರ್ಷದಲ್ಲಿ ಇದು ಮೂರನೇ ಪ್ರಕರಣವಾಗಿದ್ದು, 2018ರಿಂದ ಇದುವರೆಗೆ ಒಟ್ಟು 11 ಮಂದಿ ಆತ್ಮಹತ್ಯೆಗೆ ಶರಣಾಗಿರುವುದು ವರದಿಯಾಗಿದೆ.