ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕುವ ಕನಕಗಿರಿ ಮತದಾರರು

Public TV
3 Min Read

ಕೊಪ್ಪಳ: ಜಿಲ್ಲೆಯ ಕನಕಗಿರಿ (Kanakagiri) ವಿಧಾನಸಭೆ ಕ್ಷೇತ್ರದ ಮತದಾರರು ಅವರ ಕ್ಷೇತ್ರದ ಅಭ್ಯರ್ಥಿಗೆ ಮಣೆ ಹಾಕಿದ್ದೇ ಹೆಚ್ಚು. ಇನ್ನೂ ಕಳೆದ 2008ರಲ್ಲಿ ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರ ಆದಾಗಿನಿಂದ ಹೊರ ಜಿಲ್ಲೆಯ ಅಭ್ಯರ್ಥಿಗಳ ದರ್ಬಾರ್ ಶುರುವಾಗಿದೆ.

ಹೌದು, ಕಳೆದ 1978ರಲ್ಲಿ ಕನಕಗಿರಿ ವಿಧಾನಸಭೆ ಕ್ಷೇತ್ರ ರಚನೆ ಆಗಿದೆ. ಕನಕಗಿರಿ ಪಟ್ಟಣದ ಸುತ್ತಲಿನ ಅಖಂಡ ರಾಯಚೂರು ಜಿಲ್ಲೆಯ ಗಂಗಾವತಿ, ಸಿಂಧನೂರು ಮತ್ತು ಕುಷ್ಟಗಿ ತಾಲೂಕಿನ ಗ್ರಾಮ ಒಳಗೊಂಡು ಕ್ಷೇತ್ರ ರೂಪುಗೊಂಡಿತ್ತು. ಈ ಕ್ಷೇತ್ರದಲ್ಲಿ ನಾಗಪ್ಪ ಸಾಲೋಣಿ ಹೊರತಾಗಿ ಉಳಿದವರೆಲ್ಲ ಬೇರೆ ಕಡೆಯಿಂದ ಬಂದು ವಿಜಯ ಮಾಲೆ ಧರಿಸಿಕೊಂಡಿದ್ದಾರೆ.

ಕ್ಷೇತ್ರದ ಮೊದಲ ಶಾಸಕರಾಗಿ ಗಂಗಾವತಿಯ ಎಂ ನಾಗಪ್ಪ ಕಾಂಗ್ರೆಸ್‌ನಿಂದ ಆಯ್ಕೆ ಆಗಿದ್ದಾರೆ. ನಂತರ 1983 ಮತ್ತು 1985ರಲ್ಲಿ ಅದೇ ಗಂಗಾವತಿ ಮೂಲದ ಶ್ರೀರಂಗದೇವರಾಯ ಕನಕಗಿರಿ ಕ್ಷೇತ್ರ ಪ್ರತಿನಿಧಿಸಿದ್ದರೆ, 1989ರಲ್ಲಿ ಮತ್ತದೇ ಗಂಗಾವತಿ ಮೂಲದ ಮಲ್ಲಿಕಾರ್ಜುನ ನಾಗಪ್ಪ ಕನಕಗಿರಿ ಕ್ಷೇತ್ರದಿಂದ ಗೆದ್ದಿದ್ದಾರೆ.

ಸ್ಥಳೀಯ ಅಭ್ಯರ್ಥಿ ಎಂಬ ವ್ಯಾಪಕ ಪ್ರಚಾರದೊಂದಿಗೆ 1994ರಲ್ಲಿ ಕಾರಟಗಿ ಮೂಲದ ಸಾಲೋಣಿ ನಾಗಪ್ಪ ಆಯ್ಕೆಯಾಗಿದ್ದಾರೆ. ಜನತಾದಳದಿಂದ ಕನಕಗಿರಿ ಶಾಸಕರಾಗುವ ಮೂಲಕ ಕಾಂಗ್ರೆಸ್‌ನ ಹಿಡಿತ ತಪ್ಪಿಸಿದ್ದಾರೆ. ಅಷ್ಟೇ ಅಲ್ಲದೇ ಕನಕಗಿರಿ ಕ್ಷೇತ್ರದ ಮೇಲೆ ನೆರೆ ತಾಲೂಕಿನವರ ಹಿಡಿತ ತಪ್ಪಿಸಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಂದೆ ನಡೆದ 1999ರ ಚುನಾವಣೆಯಲ್ಲಿಯೂ ಮತ್ತೆ ಕನಕಗಿರಿ ಮತದಾರರು ಹೊರ ಕ್ಷೇತ್ರದ ಮಲ್ಲಿಕಾರ್ಜುನ ನಾಗಪ್ಪರನ್ನು ಆಯ್ಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಲ್ಲಿಕಾರ್ಜುನ ನಾಗಪ್ಪ ಎಸ್‌ಎಂ ಕೃಷ್ಣ ಅವರ ಕ್ಯಾಬಿನೆಟ್‌ನಲ್ಲಿ ಮಂತ್ರಿ ಆಗಿದ್ದಾರೆ. ನಂತರ 2004ರಲ್ಲಿಯೂ ನೆರೆಯ ಗಂಗಾವತಿ ಕ್ಷೇತ್ರ ವ್ಯಾಪ್ತಿಯ ಕೇಸರಹಟ್ಟಿ ಗ್ರಾಮದ ಜಿ ವೀರಪ್ಪ ಕನಕಗಿರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ನೆರೆ ಜಿಲ್ಲೆ ದರ್ಬಾರ್: ಪಕ್ಕದ ಕ್ಷೇತ್ರದ ನಾಯಕ ಹಿಡಿತದಲ್ಲಿದ್ದ ಕನಕಗಿರಿ ಕ್ಷೇತ್ರ 2008ರ ನಂತರ ನೆರೆ ಜಿಲ್ಲೆಯ ನಾಯಕರ ವಶವಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಾಗಿ 2008ರಲ್ಲಿ ಕನಕಗಿರಿ ವಿಧಾನಸಭೆ ಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ.

2008ರ ಚುನಾವಣೆ ವೇಳೆ ಮತದಾನಕ್ಕೆ ಕೇವಲ 2 ತಿಂಗಳು ಬಾಕಿ ಇರುವಾಗ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಶಿವರಾಜ್ ತಂಗಡಗಿ. ಬಾಗಲಕೋಟೆ ಜಿಲ್ಲೆ ಇಳಕಲ್‌ನಿಂದ ಬಂದು, ಬಿಜೆಪಿ ಟಿಕೆಟ್‌ಗೆ ಪೈಪೋಟಿ ಮಾಡಿದ್ದ ತಂಗಡಗಿ, ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕೊಪ್ಪಳ ಜಿಲ್ಲೆಯವರೇ ಆದ ಶ್ಯಾಮಣ್ಣ ನಾರಿನಾಳ ಬಿಜೆಪಿಯಿಂದ, ಮುಕುಂದ್ ರಾವ್ ಭವಾನಿಮಠ ಕಾಂಗ್ರೆಸ್‌ನಿಂದ ಕಣದಲ್ಲಿದ್ದರೂ ಕನಕಗಿರಿ ಮತದಾರರು ಆಯ್ಕೆ ಮಾಡಿದ್ದು ಮಾತ್ರ ನೆರೆ ಜಿಲ್ಲೆಯ ಶಿವರಾಜ್ ತಂಗಡಗಿ (Shivaraj Tangadagi) ಅವರನ್ನು. ಇದನ್ನೂ ಓದಿ: ಜಾತಿ ಬಲ ಇಲ್ಲದಿದ್ದರೂ, ಅಭಿವೃದ್ಧಿ ನಂಬಿ ಗೆದ್ದು ಸಚಿವರಾದ ಬಿ.ಸಿ. ನಾಗೇಶ್

 

ಶಿವರಾಜ್ ತಂಗಡಗಿ ಭೋವಿ ಸಮುದಾಯಕ್ಕೆ ಸೇರಿದ್ದು, ಕನಕಗಿರಿ ಕ್ಷೇತ್ರದಲ್ಲಿ ಸ್ವ ಜಾತಿ ಮತ ಇರೋದು ಕೇವಲ 4 ಸಾವಿರ ಮಾತ್ರ. ಆದಾಗ್ಯೂ 2 ಬಾರಿ ಸತತವಾಗಿ ಆಯ್ಕೆ ಆಗಿದ್ದಲ್ಲದೇ ಎರಡೂ ಅವಧಿಯಲ್ಲಿ ಕ್ಯಾಬಿನೆಟ್ ಮಂತ್ರಿ ಆಗಿದ್ದು ಶಿವರಾಜ್ ತಂಗಡಗಿ ಹೆಚ್ಚುಗಾರಿಕೆ.

ಹಾಲಿ ಶಾಸಕರದ್ದು ನೆರೆ ಜಿಲ್ಲೆ: 2018ರಲ್ಲಿ ಶಾಸಕರಾಗಿ ಆಯ್ಕೆ ಆಗಿರೋ ಬಸವರಾಜ ದಡೆಸುಗೂರ (Basavaraj Dadesugur) ಕೂಡಾ ರಾಯಚೂರು ಜಿಲ್ಲೆಯವರು. ಸದ್ಯ ನಡೆಯುತ್ತಿರುವ 2023ರ ವಿಧಾನಸಭೆ ಚುನಾವಣೆಯಲ್ಲೂ ಕನಕಗಿರಿ ಕ್ಷೇತ್ರದಲ್ಲಿ ಬೇರೆ ಜಿಲ್ಲೆಯವರದ್ದೇ ದರ್ಬಾರ್ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆಯ ಶಿವರಾಜ್ ತಂಗಡಗಿ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಬಸವರಾಜ ದಡೆಸುಗೂರ ಸೇರಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಟಿಕೆಟ್‌ಗೆ ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಬಹುತೇಕರು ಮತ್ತದೇ ನೆರೆ ಜಿಲ್ಲೆಯವರು.

ರಾಯಚೂರು ಜಿಲ್ಲೆಯ ಗಾಯಿತ್ರಿ ಛಲವಾದಿ, ಹಾಲಿ ಬೆಂಗಳೂರಿನಲ್ಲಿರೋ ಯಾದಗಿರಿ ಜಿಲ್ಲೆಯ ಡಿಎಂ ಧರ್ಮಣ್ಣ, ಬಳ್ಳಾರಿ ಜಿಲ್ಲೆಯ ರಾಜಗೋಪಾಲ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳು.

ಕೆಆರ್‌ಪಿಪಿ ಘೋಷಿತ ಅಭ್ಯರ್ಥಿ ಡಾ. ಚಾರುಲ್ ದಾಸರಿ ಬಳ್ಳಾರಿ ಜಿಲ್ಲೆಯವರು. ಜೆಡಿಎಸ್ ಕೂಡ ರಾಯಚೂರು ಜಿಲ್ಲೆಯ ಉಮೇಶ್ ಉಮಲೂಟಿ ಅವರನ್ನು ಅಭ್ಯರ್ಥಿ ಅಂತಾ ಹೇಳಿಕೊಂಡಿತ್ತು. ಆದರೆ ಕಳೆದ 15 ದಿನದಿಂದ ಕನಕಗಿರಿ ವಿಧಾನಸಭೆ ಕ್ಷೇತ ವ್ಯಾಪ್ತಿಯ ಹುಲಿಹೈದರ ಗ್ರಾಮದ ಹನುಮೇಶ ಹುಳ್ಕಿಹಾಳ ಜೆಡಿಎಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಪುತ್ರ ಶೀಘ್ರವೇ ಕಾಂಗ್ರೆಸ್‌ಗೆ ಸೇರ್ಪಡೆ

Share This Article
Leave a Comment

Leave a Reply

Your email address will not be published. Required fields are marked *