ಜಿನಿವಾದಲ್ಲಿ ನಾಳೆ ‘ಕಾಂತಾರ’ ಸಿನಿಮಾ ಪ್ರದರ್ಶನ : ರಿಷಬ್ ಶೆಟ್ಟಿ ಭಾಗಿ

Public TV
1 Min Read

ವಿಶ್ವಸಂಸ್ಥೆಯ ಮಾನವ ಮಾನವ ಹಕ್ಕುಗಳ ಮಂಡಳಿ(UNHRC) ವಾರ್ಷಿಕ ಸಭೆಯಲ್ಲಿ ಮಾತನಾಡಲು ಈಗಾಗಲೇ ಸ್ವಿಜರ್ಲ್ಯಾಂಡ್‌ನ ಜಿನಿವಾ (Geneva) ತಲುಪಿರುವ ರಿಷಬ್ ಶೆಟ್ಟಿ (Rishabh Shetty), ಆಗಲೇ ಕನ್ನಡದಲ್ಲಿ ಮಾತುಗಳನ್ನೂ ಆಡಿದ್ದಾರೆ. ಮಾತುಗಳ ನಂತರ ನಾಳೆ ಕಾಂತಾರ  (Kantara) ಸಿನಿಮಾದ ಪ್ರದರ್ಶನಕ್ಕೆ ವಿಶ್ವಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್ 17 ರಂದು ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್ ನಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದಾಗಿ ಸಿಜಿಎಪಿಪಿ ನಿರ್ದೇಶಕಿ ಅನಿಂಧ್ಯಾ ಸೇನ್ ಗುಪ್ತ ತಿಳಿಸಿದ್ದಾರೆ.

ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್ ಮತ್ತು ಪಬ್ಲಿಕ್ ಪೊಲೀಸ್‍ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ರಿಷಬ್ ಪರಿಸರ, ಹವಾಮಾನ ಮತ್ತು ಸಂರಕ್ಷಣೆಯ ಕುರಿತು ಹಾಗೂ ಕಾಂತಾರ ಸಿನಿಮಾದ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ನಿರ್ದೇಶಕಿ ಅನಿಂಧ್ಯಾ ಮಾಹಿತಿ ನೀಡಿದ್ದಾರೆ. ಈಗಾಗಲೇ ಮಾತನಾಡುವ ವಿಷಯದ ಮೌಖಿಕ ಸಲ್ಲಿಕೆಯನ್ನು ರಿಷಬ್ ಪೂರ್ಣಗೊಳಿಸಿದ್ದು, ಇನ್ನಷ್ಟೇ ಅವರು ಭಾಷಣವನ್ನು ಮಾಡಬೇಕಿದೆ. ಇದನ್ನೂ ಓದಿ: ಧನಂಜಯ ನಟನೆಯ 25ನೇ ಸಿನಿಮಾ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

ಇಂದು ಕನ್ನಡದಲ್ಲೇ (Kannada) ರಿಷಬ್ ಭಾಷಣ ಮಾಡಲಿದ್ದು, ನಾಳೆ ಸ್ವಿಝರ್ ಲ್ಯಾಂಡ್ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ಕಾಂತಾರ ಸಿನಿಮಾದ ಪ್ರದರ್ಶನದಲ್ಲೂ ಭಾಗಿಯಾಗಲಿದ್ದಾರೆ. ಸಿನಿಮಾ ಪ್ರದರ್ಶನದ ನಂತರ ಅವರೊಂದಿಗೆ ಮಾತುಕತೆಗೂ ಕೂಡ ಸಂಸ್ಥೆಯು ಆಯೋಜನೆ ಮಾಡಿದೆ.

ರಿಷಬ್ ಆಪ್ತರು ಹೇಳುವಂತೆ ಕಾಂತಾರ ಸಿನಿಮಾವನ್ನೇ ಆಧಾರವಾಗಿಟ್ಟುಕೊಂಡು, ಕರ್ನಾಟಕ ಸಂಸ್ಕೃತಿ, ದೈವಾರಾಧನೆ, ಕಾಡಿನ ಜನರ ಬದುಕು ಹೀಗೆ ನಾಡಿ ಭವ್ಯ ಸಂಸ್ಕೃತಿಯ ಕುರಿತು ಮಾತನಾಡಲಿದ್ದಾರಂತೆ. ಜೊತೆಗೆ ಭಾರತೀಯ ಸಿನಿಮಾ ರಂಗ ಬೆಳೆದು ಬಂದ ಬಗೆಯನ್ನೂ ವಿವರಿಸಲಿದ್ದಾರಂತೆ. ವಿಶ್ವಸಂಸ್ಥೆಯ ವೇದಿಕೆಯ ಮೇಲೆ ಭಾರತೀಯ ಸಂಸ್ಕೃತಿಯ ಅನಾವರಣ ರಿಷಬ್ ಮೂಲಕ ಆಗುತ್ತಿದೆ.

ಕಾಂತಾರ ಸಿನಿಮಾದ ಮೂಲಕ ಈಗಾಗಲೇ ಜಗತ್ತಿಗೆ ಕರ್ನಾಟಕದ ಸಂಸ್ಕೃತಿಯನ್ನು ಪರಿಚಯಿಸಿದ ರಿಷಬ್, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹಲವು ರಾಷ್ಟ್ರಗಳ ಪ್ರತಿನಿಧಿಗಳ ಮುಂದೆ ಕರ್ನಾಟಕದ ಅದರಲ್ಲೂ ದಕ್ಷಿಣ ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ರಿಷಬ್ ಹಂಚಿಕೊಳ್ಳಲಿದ್ದಾರೆ. ಈ ವಿಷಯ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದ್ದು, ರಿಷಬ್ ಮಾತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *