ಜೆ.ಪಿ ನಡ್ಡಾ ಭೇಟಿಯಾದ ಸುಮಲತಾ- ಬಹುತೇಕ ಬಿಜೆಪಿ ಸೇರ್ಪಡೆ ಖಚಿತ

Public TV
2 Min Read

ಮಂಡ್ಯ: ಕಳೆದ ಲೋಕಸಭಾ ಚುನಾವಣೆ (Loksabha Election) ಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಸ್ವಾಭಿಮಾನದ ಹೆಸರಿನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಸುಮಲತಾ ಅಂಬರೀಶ್ ರಾಜಕೀಯ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ನಾಲ್ಕು ವರ್ಷಗಳಿಂದಲೂ ಯಾವುದೇ ಪಕ್ಷ ಸೇರದೆ ಸ್ವತಂತ್ರವಾಗಿಯೇ ಉಳಿದಿದ್ದ ರೆಬೆಲ್ ಲೇಡಿ, ಇದೀಗ ತೀರ್ಮಾನವೊಂದಕ್ಕೆ ಬಂದಿದ್ದಾರೆ.

2023ರ ಮಹಾಸಮರದ ಹೊಸ್ತಿಲಲ್ಲಿ ಮಂಡ್ಯ ಅಖಾಡ ರಂಗೇರಿದೆ. ಮಂಡ್ಯ ಕಬ್ಜಗೆ ಕಣ್ಣಿಟ್ಟಿರುವ ಬಿಜೆಪಿಗೆ ಪಕ್ಷೇತರ ಸಂಸದೆ ಸುಮಲತಾ (Sumalatha Ambareesh) ಸೇರ್ತಾರೆ. ಈ ಮೂಲಕ ಬಿಜೆಪಿಗೆ ಬಲ ತುಂಬ್ತಾರೆ ಎಂಬ ಸುದ್ದಿಗೆ ಈಗ ಕಾವು ಜೋರಾಗಿದೆ. ದಶಪಥ ಹೆದ್ದಾರಿ ಲೋಕಾರ್ಪಣೆಗೆ ಮೋದಿ ಮಂಡ್ಯಕ್ಕೆ ಆಗಮನ ಹೊತ್ತಲ್ಲೇ ಸುಮಲತಾ ಬಿಜೆಪಿ ಸೇರ್ಪಡೆ ಗೊಳ್ತಾರಾ..? ಅನ್ನೋ ಸುದ್ದಿ ಹರಿದಾಡುತ್ತಿರೋ ಬೆನ್ನಲ್ಲೇ, ಪಾಂಡವಪುರ ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು (C.S Puttaraju), ಹೊಸದೊಂದು ಸುದ್ದಿ ಹರಿದುಬಿಟ್ಟರು. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಭಾಯಿ ಭಾಯಿ, ಕುಟುಂಬದ ಪಕ್ಷಗಳು – ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ :ಜೆಪಿ ನಡ್ಡಾ

ಭಾನುವಾರ ಪ್ರಧಾನಿ (Narendra Modi) ಆಗಮಿಸುತ್ತಿರೋ ಹೊತ್ತಲ್ಲೇ ಪಕ್ಷ ಸೇರ್ಪಡೆಗೆ ಸಂಸದೆ ಸುಮಲತಾ ಬಯಸಿದ್ದರು. ಆದರೆ ಇದು ಸರ್ಕಾರಿ ಕಾರ್ಯಕ್ರಮ ಆಗಿರೋದ್ರಿಂದ ಇಂದೇ ಪಕ್ಷ ಸೇರಲು ಬಯಸಿದ್ದಾರೆ ಅಂತ ಪುಟ್ಟರಾಜು ಹೇಳಿದ್ದಾರೆ. ಈ ಬೆನ್ನಲ್ಲೇ ಇಂದು ಮಧ್ಯಾಹ್ನ 12 ಗಂಟೆಗೆ ಮಂಡ್ಯದ ತಮ್ಮ ನಿವಾಸದಲ್ಲಿ ಸುಮಲತಾ ಸುದ್ದಿಗೋಷ್ಟಿ ಕರೆದಿದ್ದು, ಬಿಜೆಪಿ ಸೇರೋ ಬಗ್ಗೆ ನಿರ್ಧಾರ ಪ್ರಕಟಿಸೋ ಸಾಧ್ಯತೆಗಳಿವೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಗುರುವಾರ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J.P Nadda) ಅವರನ್ನು ಸಂಸದೆ ಸುಮಲತಾ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇಂದು ಆಪ್ತೇಷ್ಠರ ಅಭಿಪ್ರಾಯವನ್ನು ಸುಮಲತಾ ಸಂಗ್ರಹಿಸಲಿದ್ದು, ಆ ನಂತರ ಬಿಜೆಪಿ ಸೇರೋದಾ…? ಅಥವಾ ಬೇಡ್ವಾ…? ಅನ್ನೋದನ್ನು ನಿರ್ಧರಿಸಲಿದ್ದಾರೆ. ಬಿಜೆಪಿಗೆ ಸುಮಲತಾ ಬಂದರೆ ಅನುಕೂಲವಾಗಲಿದೆ ಅನ್ನೋದು ಸುಮಲತಾ ಬೆಂಬಲಿಗರ ಲೆಕ್ಕಾಚಾರವಾಗಿದೆ.

ಸುಮಲತಾ ಬಿಜೆಪಿ ಸೇರಿದ್ರೆ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ಸುಮಲತಾ ಆಪ್ತರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಒಟ್ಟಾರೆ ಇಷ್ಟು ದಿನ ವದಂತಿ ಆಗಿದ್ದ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಇಂದು ಸಂಸದೆ ಅಂತಿಮ ಮುದ್ರೆ ಒತ್ತುತ್ತಾರಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *