ಜೀವನದಿ ಕಾವೇರಿ ತೀರ್ಥ ಪ್ರಸಾದ ಇನ್ಮುಂದೆ ಭಕ್ತರ ಮನೆ ಬಾಗಿಲಿಗೆ

Public TV
2 Min Read

ಮಡಿಕೇರಿ: ಕನ್ನಡ ನಾಡಿನ ಜೀವನದಿ ತಲಕಾವೇರಿ (Talacauvery) ಪವಿತ್ರ ತೀರ್ಥವನ್ನು ಪಡೆಯಲು ರಾಜ್ಯ, ದೇಶದ ನಾನಾ ಭಾಗಗಳಿಂದ ಬರುವ ಭಕ್ತರಿಗೆ ಇದೀಗ ದೇವಾಲಯ ಅಡಳಿತ ಮಂಡಳಿ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಕಾವೇರಿ ಭಕ್ತರು ಕಾವೇರಿ (Cauvery) ತೀರ್ಥ ಪ್ರಸಾದವನ್ನು ಮನೆಯಲ್ಲೇ ಕುಳಿತು ಪಡೆಯಲು ಅವಕಾಶ ಕಲ್ಪಿಸಿದೆ.

ಕರ್ನಾಟಕ, ತಮಿಳುನಾಡು ರೈತರ‌ ಪಾಲಿನ ವರದಾತೆ ಕಾವೇರಿ ಮಾತೆಗೆ ನಮಿಸಲು ಪ್ರತಿನಿತ್ಯ ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಅಗಮಿಸುವ ಭಕ್ತರು ಹಲವು ದಿನಗಳಿಂದ ಬೇಡಿಕೆಯೊಂದನ್ನು ಸಲ್ಲಿಸಿದ್ದರು. ಕಾವೇರಿ ಮಾತೆ ತೀರ್ಥ ಪ್ರಸಾದವನ್ನು ತಮ್ಮ ಮನೆಯಲ್ಲೇ ಸಿಕ್ಕುವಂತೆ ಮಾಡಿ ಎಂದು ಕೇಳಿಕೊಂಡಿದ್ದರು. ಇದೀಗ ತಲಕಾವೇರಿ ಹಾಗೂ ಭಗಂಡೇಶ್ವರ ದೇವಾಲಯ ಅಡಳಿತ ಮಂಡಳಿ ಕಾವೇರಿ ಭಕ್ತರಿಗೆ ತೀರ್ಥ ಪ್ರಸಾದವನ್ನು ಅನ್‌ಲೈನ್ ಮೂಲಕ ಭಕ್ತರ ಮನೆ ಬಾಗಿಲಿಗೆ ತಲುಪಿಸಲು ನಿರ್ಧಾರ ಮಾಡಿದೆ. ಇನ್ಮುಂದೆ ಕಾವೇರಿ ಭಕ್ತರು ಮನೆಯಲ್ಲೇ ಕುಳಿತು www.indiapost.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರಸಾದಕ್ಕೆ ಬುಕ್ ಮಾಡಿಕೊಳ್ಳಬಹುದಾಗಿದೆ ಎಂದು ಕೊಡಗು (Kodagu) ಜಿಲ್ಲಾಧಿಕಾರಿ ಸತೀಶ ಪ್ರಸಾದದ ಬೇಡಿಕೆ ಬಗ್ಗೆ ಮಾಹಿತಿ ‌ನೀಡಿದರು. ಇದನ್ನೂ ಓದಿ: ಮಂಡ್ಯ ಕೈ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಕಾರಿಗೆ ಮೊಟ್ಟೆ ಎಸೆದ ಕಾರ್ಯಕರ್ತರು

ಈ ಪ್ರಸಾದಕ್ಕೆ ದೇವಾಲಯ ಅಡಳಿತ ಮಂಡಳಿಯಿಂದ 300 ರೂ. ದರ ನಿಗದಿ ಮಾಡಲಾಗಿದೆ. ಪ್ರಸಾದದಲ್ಲಿ 100 ಎಂಎಲ್ ಕಾವೇರಿ ತೀರ್ಥ, 100 ಗ್ರಾಂ ಪಂಚಕಜ್ಜಾಯ, ತಲಕಾವೇರಿ ಕ್ಷೇತ್ರದ ಕುಂಕುಮ, ಭಗಂಡೇಶ್ವರ ದೇವಾಲಯದಿಂದ ಗಂಧ ಪ್ರಸಾದವನ್ನು ನೀಡಲಾಗುತ್ತದೆ. ದೇಶದಲ್ಲಿ ಎಲ್ಲೇ ಕಾವೇರಿ ಭಕ್ತರು ನೆಲೆಸಿದ್ದರೂ ಪೋಸ್ಟ್ ಆಫೀಸ್​ನಲ್ಲಿ ಈ ಪೇಮೆಂಟ್ ಮುಖಾಂತರ ಬುಕ್​ ಮಾಡಬಹುದಾಗಿದೆ. ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದ ಡೆಲಿವರಿ ಮಾಡಲಾಗುತ್ತದೆ. ಹೆಚ್ಚಾಗಿ ಕಾವೇರಿ ನದಿಯನ್ನು ಆಶ್ರಯಿಸಿಕೊಂಡು ಇರುವ ಕರ್ನಾಟಕ, ತಮಿಳುನಾಡಿನ ಭಕ್ತರು ದೇವಾಲಯದ ಪ್ರಸಾದಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ಕಾವೇರಿ ಭಕ್ತರಿಗೆ ತೀರ್ಥ ಪ್ರಸಾದ ಮನೆಯ ಅಂಗಳಕ್ಕೆ ಬರಲು ಸಿದ್ಧವಾಗಿದೆ.

ದೇಶದ ‌ನಾನಾ ಭಾಗಗಳಲ್ಲಿ ನೆಲೆಸಿರುವ ಕಾವೇರಿ ಭಕ್ತರಿಗೆ ದೇವಾಲಯ ಅಡಳಿತ ಮಂಡಳಿಯಿಂದ ಆನ್‌ಲೈನ್ ಮೂಲಕ ಈ ಪ್ರಸಾದ ಡೆಲಿವರಿ ವ್ಯವಸ್ಥೆ ‌ಮಾಡಿರುವುದರಿಂದ, ಕಾವೇರಿ ಭಕ್ತರು ಜಿಲ್ಲಾಡಳಿತ ಹಾಗೂ ದೇವಾಲಯದ ಅಡಳಿತ ಮಂಡಳಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಕ್ರೆಡಿಟ್ ನಮ್ಮ ಸರ್ಕಾರಕ್ಕೇ ಸಲ್ಲಬೇಕು: ಪ್ರತಾಪ್ ಸಿಂಹಗೆ ಸಿದ್ದು ಟಾಂಗ್

Share This Article
Leave a Comment

Leave a Reply

Your email address will not be published. Required fields are marked *