ಹೆಂಡತಿ, ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನ

Public TV
2 Min Read

ಬೆಂಗಳೂರು: ಹೆಂಡತಿ ಹಾಗೂ ಮಕ್ಕಳಿಗೆ ವಿಷವುಣಿಸಿ (Poison) ಬಳಿಕ ತಾನೂ ಕೈ ಕುಯ್ದುಕೊಂಡು ವ್ಯಕ್ತಿ ಆತ್ಮಹತ್ಯೆಗೆ (Suicide) ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ನಗರದ ಕೋಣನಕುಂಟೆಯ (Konanakunte) ವಡ್ಡರಪಾಳ್ಯದಲ್ಲಿ ಘಟನೆ ನಡೆದಿದ್ದು, ಅಲ್ಲಿನ ನಿವಾಸಿ ನಾಗೇಂದ್ರ ಪತ್ನಿ ಹಾಗೂ ಮಕ್ಕಳನ್ನು ಸಾಯಿಸಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ. ಪತ್ನಿ ವಿಜಯ (28), ಮಕ್ಕಳಾದ ನಿಶಾ (7) ಹಾಗೂ ದೀಕ್ಷಾ (5) ಮೃತ ದುರ್ದೈವಿಗಳಾದರೆ ನಾಗೇಂದ್ರನ ಸ್ಥಿತಿ ಚಿಂತಾಜನಕವಾಗಿದೆ.

 

ನಾಗೇಂದ್ರ ಕ್ಯಾನ್ಸರ್ ಪೀಡಿತನಾಗಿದ್ದು, ಬುಧವಾರ ರಾತ್ರಿ ತನ್ನ ಪತ್ನಿ ಹಾಗೂ ಮಕ್ಕಳಿಗೆ ಊಟದಲ್ಲಿ ತಿಗಣೆ ಔಷಧಿ ಹಾಗೂ ಇಲಿ ಔಷಧಿ ಬೆರೆಸಿದ್ದ. ಬಳಿಕ ವಿಷವನ್ನು ತಾನೂ ಕುಡಿದಿದ್ದ. ಬೆಳಗ್ಗೆ ವೇಳೆಗೆ ನಾಗೇಂದ್ರ ಪತ್ನಿ ಹಾಗೂ ಮಕ್ಕಳು ಸಾವನ್ನಪ್ಪಿದ್ದು, ತಾನು ಮಾತ್ರ ಬದುಕುಳಿದಿದ್ದ. ಇದರಿಂದ ನಾಗೇಂದ್ರ ಮತ್ತೆ ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಘಟನೆ ಬಗ್ಗೆ ಮಾಹಿತಿ ನೀಡಿರುವ ಮೃತ ವಿಜಯ ತಾಯಿ ಸಾಕಮ್ಮ, ಕಳೆದ 8 ವರ್ಷಗಳಿಂದ ಇಬ್ಬರು ಸಂಸಾರ ನಡೆಸುತ್ತಿದ್ದರು. ನಾಗೇಂದ್ರನಿಗೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾದ ಬಳಿಕ ಆತ ಕೆಲಸ ಬಿಟ್ಟಿದ್ದ. ಪತ್ನಿ ವಿಜಯ ಮೆಡಿಕಲ್ ಒಂದರಲ್ಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದಳು. ಕೆಲಸ ಬಿಟ್ಟಿದ್ದ ನಾಗೇಂದ್ರ ಖರ್ಚಿಗೆ ಹಣ ನೀಡುವಂತೆ ಪತ್ನಿಗೆ ಪೀಡಿಸುತ್ತಿದ್ದ ಎಂದು ತಿಳಿಸಿದ್ದಾರೆ.

3 ತಿಂಗಳ ಹಿಂದೆ ನಾಗೇಂದ್ರ ಮಗಳ ಕೈ ಸುಟ್ಟು ವಿಕೃತಿ ಮೆರೆದಿದ್ದ. ಪತಿಯ ಕಿರುಕುಳಕ್ಕೆ ರೋಸಿ ಹೋಗಿದ್ದ ವಿಜಯ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದಳು. ಇತ್ತೀಚೆಗೆ ಆತನ ಕಿರುಕುಳ ಹೆಚ್ಚಾಗಿದ್ದು, ಬುಧವಾರ ರಾತ್ರಿ ಹೆಂಡತಿ ಮಕ್ಕಳಿಗೆ ವಿಷ ಹಾಕಿ ಕೊಲೆ ಮಾಡಿದ್ದಾನೆ ಎಂದು ವಿಜಯ ತಾಯಿ ಸಾಕಮ್ಮ ಆರೋಪಿಸಿದ್ದಾರೆ. ಇದನ್ನೂ ಓದಿ: ಎಷ್ಟೇ ಪೌಡರ್ ಹಾಕಿದ್ರೂ ನೀನು ಬೆಳ್ಳಗಾಗಲ್ಲ – ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

ಘಟನೆ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ನಾಗೇಂದ್ರನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *