ಮಂಡ್ಯದಲ್ಲಿ ಕಾವು ಪಡೆದ ರಾಜಕೀಯ – ಕನಕಪುರದ ಬಂಡೆ ಮದ್ದೂರಿನಲ್ಲಿ ಸ್ಪರ್ಧೆ?

Public TV
3 Min Read

ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಸಂಕ್ರಾಂತಿ ಮುಗಿಯುತ್ತಿದ್ದ ಹಾಗೆ ರಾಜಕೀಯ ಬೆಳವಣಿಗೆ ಗರಿಗೆದರಿವೆ. ಕನಕಪುರದ ಬಂಡೆ ಡಿ.ಕೆ ಶಿವಕುಮಾರ್‌ ಮದ್ದೂರಿನಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಶುರುವಾಗಿದೆ.

ಒಂದು ಕಡೆ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ರಾಜ್ಯ ರಾಜಕೀಯದ ಎಂಟ್ರಿ ಕುರಿತು ಸುಳಿವು ನೀಡಿದ್ರೆ, ಮತ್ತೊಂದೆಡೆ ರೆಬಲ್ ಲೇಡಿ ಮಾದರಿಯಲ್ಲಿ ಸ್ವಾಭಿಮಾನದ ಹೆಸರಿನ ಮೂಲಕ ಎಲ್.ಆರ್.ಶಿವರಾಮೇಗೌಡ (L. R. Shivarame Gowda)  ಕಹಳೆ ಊದಲು ಮುಂದಾಗಿದ್ದಾರೆ. ಇದರ ನಡುವೆ ಜಾತಿ ಹಾಗೂ ಸಿಎಂ ಅಸ್ತ್ರ ಬಳಸಿಕೊಂಡು ಮಂಡ್ಯದಲ್ಲಿ ಕನಕಪುರದ ಬಂಡೆ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಸಾಕಷ್ಟು ಸದ್ದು ಮಾಡುತ್ತಿದೆ.

ಒಕ್ಕಲಿಗ ಜಾತಿ ಹಾಗೂ ಸಿಎಂ ಅಸ್ತ್ರವನ್ನು ಮುಂದಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಒಂದು ಲೆಕ್ಕಾಚಾರ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ (H.D Kumarswamy) ಮುಖ್ಯಮಂತ್ರಿ ಆಗ್ತಾರೆ ಎಂದು ಒಕ್ಕಲಿಗ ಸಮೂದಾಯ ಮಂಡ್ಯ ಜಿಲ್ಲೆಯ 7 ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ರು. ಇದೀಗ ಡಿಕೆಶಿ ಸಹ ಅದೇ ಹಾದಿಯಲ್ಲಿ ಹೊರಟಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರುಚರಣ್ ಹಾಗೂ ಕಾಂಗ್ರೆಸ್‍ನ ನಾಯಕರು ಡಿಕೆಶಿ ಅವರಿಗೆ ಮದ್ದೂರಿನಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ. ಡಿಕೆ ಸಹ ಎರಡು ಮೂರು ದಿನಗಳ ನಂತರ ನಿರ್ಧಾರ ಹೇಳ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈವರೆಗೂ ನಾನು ತಟಸ್ಥವಾಗಿದ್ದೇನೆ, ಸ್ಪರ್ಧೆ ಬಗ್ಗೆ ಮುಂದೆ ತೀರ್ಮಾನ: ಸುಮಲತಾ

 

 

 

 

 

 

 

 

ಒಂದು ಕಡೆ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ನೀಡುತ್ತಿದ್ರೆ, ಇನ್ನೊಂದೆಡೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ನಾಗಮಂಗಲ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸ್ವಾಭಿಮಾನದ ಹೆಸರಿನಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಕ್ಷೇತ್ರದ್ಯಾಂತ ಓಡಾಡುತ್ತಿದ್ದಾರೆ. ನಾಗಮಂಗಲ ಕ್ಷೇತ್ರದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಾಭಿಮಾನಿ ಪರ್ವ ಕಾರ್ಯಕ್ರಮ ನಡೆಸಿ ಜನರಿಗೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಾ ಇದೀನಿ ನನ್ನ ಬೆಂಬಲಿಸಿ ಎಂದು ಜನರಲ್ಲಿ ಕೇಳಿಕೊಳ್ಳುತ್ತಾ ಇದ್ದಾರೆ. ಈ ನಡುವೆ ಶಿವರಾಮೇಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು (D.K Shivakumar) ಭೇಟಿಯಾಗಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ ಶಿವರಾಮೇಗೌಡ ಕಾಂಗ್ರೆಸ್‍ನಿಂದ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಮಂಡ್ಯ ರಾಜಕೀಯದಲ್ಲಿ ಓಡಾಡುತ್ತಿದೆ.

ರಾಜ್ಯ ಮಾತ್ರವಲ್ಲ ಇಂಡಿಯಾದ ರಾಜಕೀಯ ಚಿತ್ರಣ ಬೇರೆ ಆದ್ರೆ ಸಕ್ಕರೆ ನಾಡು ಮಂಡ್ಯದ ರಾಜಕೀಯವೇ ಬೇರೆ. ಇದಕ್ಕೆ ಉದಾಹರಣೆಗೆ ಎಂದ್ರೆ ಕಳೆದ ಲೋಕಸಭಾ ಚುನಾವಣೆಯೇ ಸಾಕ್ಷಿ. ಇದೀಗ ಅಂತಹದೊಂದು ಜಿದ್ದಾಜಿದ್ದಿನ ರಾಜಕಾರಣಕ್ಕೆ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಸಾಕ್ಷಿಯಾಗಲು 2023ರ ವಿಧಾನಸಭಾ ಚುನಾವಣೆಯ ವೇದಿಕೆ ಸಜ್ಜುಗೊಳ್ಳುತ್ತಿದೆ. ಸದ್ಯ ಎಂಪಿಯಾಗಿ ರಾಷ್ಟ್ರ ರಾಜಕೀಯದಲ್ಲಿ ಆಕ್ಟೀವ್ ಆಗಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸುಳಿವನ್ನು ನೀಡುತ್ತಿದ್ದಾರೆ. ಸದ್ಯ ಪಕ್ಷೇತರವಾಗಿ ಉಳಿದಿರುವ ಸುಮಲತಾ ಅಂಬರೀಶ್ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಲೆಕ್ಕಾಚಾರವನ್ನು ಸುಮಲತಾ ಹಾಕಿಕೊಂಡಂತೆ ಕಾಣುತ್ತಿದೆ. ಸುಮಲತಾ ಅಂಬರೀಶ್ ಅವರು ಎಂಎಲ್‍ಎ ಚುನಾವಣೆಯ ಸ್ಪರ್ಧೆಯನ್ನು ತಳ್ಳಿ ಹಾಕುತ್ತಿಲ್ಲ. ನಾನು ಎಂಪಿಯಾಗಿ ಬರಬೇಕು ಅಂದುಕೊಂಡಿರಲಿಲ್ಲ, ಅದೇ ರೀತಿ ಮುಂದೆ ಸಂದರ್ಭಕ್ಕೆ ಅನುಗುಣವಾಗಿ ನಾನು ತೀರ್ಮಾನ ಮಾಡುತ್ತೇನೆ ಎಂದು ಸುಮಲತಾ ಹೇಳಿದ್ದಾರೆ. ಇನ್ನೊಂದೆಡೆ ಸುಮಲತಾ ಎಂಎಲ್‍ಎ ಚುನಾವಣೆ ಸ್ಪರ್ಧೆಯ ಸಂಬಂಧ ಇನ್ನೇರಡು ದಿನಗಳಲ್ಲಿ ಸಭೆಯನ್ನು ಸುಮಲತಾ ಬೆಂಬಲಿಗರು ಮಾಡ್ತಾ ಇದ್ದಾರೆ. ಇವೆಲ್ಲವನ್ನು ನೋಡಿದ್ರೆ ಸುಮಲತಾ ಅಂಬರೀಶ್ ಅವರು ಎಂಎಲ್‍ಎ ಎಲೆಕ್ಷನ್ ಸ್ಪರ್ಧೆ ಮಾಡುವುದು ಖಚಿತ ಎಂದು ಅನ್ನಿಸುತ್ತಿದೆ. ಇದನ್ನೂ ಓದಿ: ನಮ್ಮಪ್ಪ ಸಿದ್ರಾಮಯ್ಯ ಅಂತ ಹೆಸರಿಟ್ಟಿಲ್ವಾ, ಸಿದ್ರಾಮುಲ್ಲಾ ಅನ್ನೋಕೆ ಇವನ್ಯಾರು: ಸಿ.ಟಿ.ರವಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಒಟ್ಟಾರೆ ಮಂಡ್ಯದಲ್ಲಿ ರಾಜಕೀಯದ ಕಾವು ರಣ-ರಣ ಎನ್ನುತ್ತಿದ್ದು, ಸುಮಲತಾ, ಶಿವರಾಮೇಗೌಡ, ಡಿಕೆ ಮಂಡ್ಯ ರಾಜಕೀಯಕ್ಕೆ ಮತ್ತಷ್ಟು ಮೆರಗು ನೀಡಿದ್ದಾರೆ. ಮುಂದೆ ಸಕ್ಕರೆ ನಾಡಿನ ರಾಜಕೀಯ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *