ನಟ ವಿಷ್ಣುವರ್ಧನ್ ಅಭಿಮಾನಿಗಳ ಆದರ್ಶ ಯಾತ್ರೆ: ಆಸ್ಟ್ರೇಲಿಯಾ ವಾಸಿ ಬಲರಾಮ್ ನೇತೃತ್ವ

By
1 Min Read

ಆಸ್ಟ್ರೇಲಿಯಾದಲ್ಲಿ ವಾಸವಿರುವ ಅನಿವಾಸಿ ಭಾರತೀಯ ಬಲರಾಮ್ ತಮ್ಮ ನೆಚ್ಚಿನ ನಟ ವಿಷ್ಣುವರ್ಧನ್ ಅವರಿಗಾಗಿ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಗೆ ‘ಆದರ್ಶ ಯಾತ್ರೆ’ ಎಂದು ಹೆಸರಿಟ್ಟಿದ್ದು, ವಿಷ್ಣುವರ್ಧನ್ ಅವರ ಸಾಕಷ್ಟು ಅಭಿಮಾನಿಗಳು ಅವರೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಬಲರಾಮ್ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದರೆ, ವಿಷ್ಣು ಅಭಿಮಾನಿಗಳು ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿಗೆ ಬರಲಿದ್ದಾರೆ.

ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಡಾ.ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ‘ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಆದರ್ಶ ಯಾತ್ರೆ ಪ್ರಾರಂಭಿಸಿದ್ದು, ನಾಳೆ (ಡಿ.25) ಬೆಳಗ್ಗೆ ಏಳು ಗಂಟೆಗೆ ಮೈಸೂರಿನ ಕೋರ್ಟ್ ಆವರಣದಿಂದ ಯಾತ್ರೆ ಪ್ರಾರಂಭವಾಗುತ್ತದೆ. ಬಲರಾಮ್ ಅವರು ಇದರ ನೇತೃತ್ವವಹಿಸಿದ್ದಾರೆ. ಜೊತೆಗೆ ವಿಷ್ಣು ಸೇನಾನಿಗಳು ಕೂಡ ಜೊತೆಯಾಗುತ್ತಿದ್ದಾರೆ. ಇದು ಐದು ದಿನಗಳ ಕಾಲ ನಡೆಯುವ ಯಾತ್ರೆಯಾಗಿದ್ದು ಡಿ.29ಕ್ಕೆ ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣು ಅವರ ಪುಣ್ಯಭೂಮಿಯಲ್ಲಿ ಮುಕ್ತಾಯಗೊಳ್ಳಲಿದೆ. ಪ್ರತಿ ವರ್ಷವೂ ಇದನ್ನು ನಡೆಸುವ ಉದ್ದೇಶ ಹೊಂದಲಾಗಿದೆ’ ಎಂದರು. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

ಇಂಥದ್ದೊಂದು ಆದರ್ಶ ಯಾತ್ರೆ ಶುರು ಮಾಡುವುದಕ್ಕೆ ಕಾರಣವೂ ಇದೆ. ವಿಷ್ಣುವರ್ಧನ್ ಅವರು ಸಿನಿಮಾ ರಂಗಕ್ಕೆ ಬಂದು ಡಿ.30ಕ್ಕೆ ಐವತ್ತು ವರ್ಷಗಳು ತುಂಬುತ್ತಿವೆ. ಅಲ್ಲದೇ, ಅವತ್ತು ಅವರ ಪುಣ್ಯಸ್ಮರಣೆ ಕೂಡ. ನೆಚ್ಚಿನ ನಟನನ್ನು ಸ್ಮರಿಸುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ಉದ್ದೇಶ ಈ ಯಾತ್ರೆಯ ಹಿಂದಿದೆ ಎನ್ನುವುದು ವಿಷ್ಣು ಸೇನಾನಿಗಳ ಮಾತು. ಅಲ್ಲದೇ, ಪ್ರತಿ ವರ್ಷವೂ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಆರೋಗ್ಯಕ್ಕಾಗಿ ನಡೆಯಿರಿ ಎನ್ನುವ ಸಂಕಲ್ಪವನ್ನು ಇದು ಹೊಂದಿದೆಯಂತೆ.

ಆದರ್ಶ ಯಾತ್ರೆಯನ್ನು ಯಶಸ್ವಿಗೊಳಿಸಲು ರಾಜ್ಯದ ನಾನಾ ಮೂಲೆಗಳಿಂದ ವಿಷ್ಣುವರ್ಧನ್ ಅಭಿಮಾನಿಗಳು ತಾವಿದ್ದ ಸ್ಥಳದಿಂದಲೇ ಯಾತ್ರೆಯನ್ನು ಆರಂಭಿಸುತ್ತಿದ್ದು, ಎಲ್ಲರೂ ಡಿಸೆಂಬರ್ 29 ರಂದೇ ಯಾತ್ರೆಯನ್ನು ಮುಗಿಸಲಿದ್ದಾರೆ. ಡಿ.30ಕ್ಕೆ ಪುಣ್ಯಭೂಮಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *