ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಲ್ಲನಾಯಕನಕೊಪ್ಪ ಗ್ರಾಮದ ಬಳಿ ಕಾಮುಕನೊಬ್ಬ 9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದಿರುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ಮಲ್ಲಪ್ಪ ಶೆಟ್ಟಣ್ಣನವರ ಹತ್ಯೆಯಾದ ದುರ್ದೈವಿ ಬಾಲಕ. ಸುಭಾಷ ಅಗಸೀಮನಿ ಎಂಬ 40 ವರ್ಷದ ಕಾಮುಕ ಈ ಕೃತ್ಯವೆಸಗಿದ್ದು ಪೊಲೀಸರು ಈಗ ಬಂಧಿಸಿದ್ದಾರೆ.
ನಡೆದಿದ್ದೇನು?: ಮಂಗಳವಾರ ಗ್ರಾಮದ ಹೊರವಲಯದಲ್ಲಿ ದೇವರಿಗೆ ಕುರಿ ಬಲಿ ನೀಡಿದ್ರು. ಗ್ರಾಮದ ಸುಮಾರು ಜನರು ದೇವರಿಗೆ ಪೂಜೆ ಸಲ್ಲಿಸಿ ಮಟನ್ ಊಟ ಮಾಡಿದ್ರು. ಆದ್ರೆ ಬಾಲಕ ಮಲ್ಲಪ್ಪ ಕೂಡಾ ಊಟ ಮಾಡಿದ್ದ. ಆದ್ರೆ ಮರಳಿ ಮಟನ್ ಸಾಂಬಾರ್ ತೆಗೆದುಕೊಂಡು ಹೋಗಲು ಗ್ರಾಮದ ಹೊರಗೆ ಬಂದಿದ್ದ. ಆ ವೇಳೆಯಲ್ಲಿ ಬಾಲಕ ಮಲ್ಲಪ್ಪನನ್ನ ಪುಸುಲಾಯಿಸಿ ಸುಭಾಷ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾನೆ. ರಾಜೀವಗ್ರಾಮದ ಬಳಿ ಇರೋ ಅರಣ್ಯಪ್ರದೇಶದಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅಲ್ಲಿಯೇ ಕತ್ತುಹಿಸುಕಿ ಹತ್ಯೆ ಮಾಡಿದ್ದಾನೆ.
ಮಟನ್ ಸಂಬಾರು ತರಲು ಹೋಗಿದ್ದ ಬಾಲಕ ನಾಪತ್ತೆಯಾಗಿರುವುದನ್ನು ತಿಳಿದ ಜನತೆ ಗ್ರಾಮದ ಹೊರವಲಯದಲ್ಲಿ ಹುಡುಕಾಡಿದ್ದಾರೆ. ಆದ್ರೆ ಬಾಲಕ ಯಾರ ಕಣ್ಣಿಗೂ ಬಿದ್ದಿಲ್ಲ. ಈ ವೇಳೆ ಕೆಲ ಮಕ್ಕಳು ಹಾಗೂ ಗ್ರಾಮದ ಜನರು ಸುಭಾಷ ಅಗಸಿಮನಿಯ ಬೈಕ್ನಲ್ಲಿ ಮಲ್ಲಪ್ಪ ಹೋಗಿದ್ದನ್ನ ಕೊನೆಯದಾಗಿ ನೋಡಿದ್ದೇವೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಈ ವಿಚಾರ ತಿಳಿದು ಗ್ರಾಮದ ಜನರು ಕಟುಂಬದ ಸದಸ್ಯರು ಸುಭಾಷನನ್ನು ವಿಚಾರಣೆ ಮಾಡಿದ್ದಾರೆ. ನಂತ್ರ ಪೊಲೀಸರು ವಿಚಾರಣೆ ಮಾಡಿದಾಗ ಸುಭಾಷ ನಾನೇ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾನೆ. ಇತ್ತ ಇದ್ದ ಒಂದು ಗಂಡು ಮಗನನ್ನ ಕಳೆದುಕೊಂಡಿರೋ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಎರಡು ಮಕ್ಕಳ ತಂದೆಯಾಗಿದ್ದರೂ ಹೀನ ಕೃತ್ಯವೆಸಗಿರುವ ಸುಭಾಷ ವಿರುದ್ಧ ಬಂಕಾಪುರ ಪೊಲೀಸರು ಹಾಗೂ ಸಿಪಿಐ ಸಂತೋಷ ಪವಾರ್ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸಿದ್ದಾರೆ.