800 ರೂ.ಗಾಗಿ ಗೆಳೆಯನನ್ನೇ ಕೊಂದ ಪಾಪಿ

Public TV
1 Min Read

ಹಾಸನ: ಕೇವಲ 800 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾರಗೊಂಡನಹಳ್ಳಿಯಲ್ಲಿ ನಡೆದಿದೆ.

ಸ್ನೇಹಿತ ಎಂ.ಎನ್.ಮೂರ್ತಿ(50)ಯನ್ನು ಕೊಲೆ ಮಾಡಿ, ಬೆನ್ನಿಗೆ ಕಲ್ಲು ಕಟ್ಟಿ ಬಾವಿಗೆ ಎಸೆಯಲಾಗಿತ್ತು. ಆರಂಭದಲ್ಲಿ ರಾಜಕೀಯ ದ್ವೇಷದಿಂದ ಕೊಲೆ ಮಾಡಿರಬಹುದು ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಇಸ್ಪೀಟ್ ಆಟದಲ್ಲಿ ಹಣ ನೀಡದ್ದಕ್ಕೆ ಮೂರ್ತಿಯನ್ನು ಆರೋಪಿ ನಾಗರಾಜ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಜ.18 ರಂದು ನಾಗರಾಜ ಇಸ್ಪೀಟ್ ಆಟದಲ್ಲಿ ಮೂರ್ತಿ ವಿರುದ್ಧ 800 ರೂ. ಗೆದ್ದಿದ್ದ. ಆದರೆ ಹಣ ನೀಡದೆ ಮೂರ್ತಿ ಆಟ ಮುಂದುವರಿಸುವಂತೆ ಒತ್ತಾಯ ಮಾಡುತ್ತಿದ್ದ. ಮಾತಿಗೆ ಮಾತು ಬೆಳೆದು ಮೂರ್ತಿ ಹಾಗೂ ನಾಗರಾಜ ಕೈ ಕೈ ಮಿಲಾಯಿಸಿದ್ದರು. ಈ ವೇಳೆ ಸಿಟ್ಟಿನಿಂದ ನಾಗರಾಜ ತನ್ನ ಗೆಳೆಯ ಮೂರ್ತಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ, ನಂತರ ಶವಕ್ಕೆ ಕಲ್ಲುಕಟ್ಟಿ ಬಾವಿಗೆ ಎಸೆದಿದ್ದ. ಇದೀಗ ಪ್ರಕರಣ ಬೇಧಿಸಿರುವ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *