7 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವತಿ ಸಾವು – ಪೊಲೀಸ್ ಮಗ ಅರೆಸ್ಟ್

Public TV
2 Min Read

– ಭರವಸೆಯೊಂದಿಗೆ ಗಂಡನ ಮನೆಗೆ ಕಳುಹಿಸಿದ್ದ ಪೋಷಕರು
– ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಭುವನೇಶ್ವರ: ವರದಕ್ಷಿಣೆಗಾಗಿ ಪತ್ನಿಯನ್ನು ಕೊಂದ ಆರೋಪದ ಮೇಲೆ ಪೇದೆಯ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ವಂದನಾ ಮೃತ ಮಹಿಳೆ. ಒಡಿಶಾದ ತಮಂಡೋ ಪೊಲೀಸ್ ಠಾಣೆಯ ಪೇದೆಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಜಮಿನಿಕಾಂತ್ ಗೋಚಾಯತ್ ಎಂದು ಗುರುತಿಸಲಾಗಿದೆ. ಮೃತ ವಂದನಾಳ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ವರದಕ್ಷಿಣೆಗಾಗಿ ಜಮಿನಿಕಾಂತ್ ಮತ್ತು ಆತನ ತಂದೆ ಬಿಜಯ್ ಕುಮಾರ್ ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಇದೇ ವರ್ಷ ಫೆಬ್ರವರಿ 16 ರಂದು ಮೃತ ವಂದನಾ ಮತ್ತು ಜಮಿನಿಕಾಂತ್ ಮದುವೆಯಾಗಿತ್ತು. ಆದರೆ ಮದುವೆಯಾದ ದಿನದಿಂದಲೂ ಜಮಿನಿಕಾಂತ್, ಆತನ ತಂದೆ-ತಾಯಿ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ಮತ್ತು ಹಿಂಸೆ ನೀಡುತ್ತಿದ್ದರು ಎಂದು ವಂದನಾ ಪೋಷಕರು ಆರೋಪಿಸಿದ್ದಾರೆ.

ಸೆಪ್ಟೆಂಬರ್ 19 ಶನಿವಾರ ವಂದನಾ ಪೇದೆಯ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ವಂದನಾಳ ಆರೋಗ್ಯ ಸರಿಯಿಲ್ಲ. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಜಮಿನಿಕಾಂತ್ ನಮಗೆ ಫೋನ್ ಮಾಡಿ ಹೇಳಿದ್ದನು. ಆದರೆ ಆಸ್ಪತ್ರೆಗೆ ಹೋದ ನಂತರ ನಮ್ಮ ಮಗಳು ಸಾವನ್ನಪ್ಪಿದ್ದಾಳೆ ಅಂತ ಹೇಳಿರುವುದಾಗಿ ಮೃತಳ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೇ, “ನಮ್ಮ ಮಗಳ ಕುತ್ತಿಗೆಯಲ್ಲಿ ಹಗ್ಗದ ಗುರುತು ನೋಡಿದ್ದೇವೆ ಮತ್ತು ಅವಳ ದೇಹವು ನೀಲಿ ಬಣ್ಣಕ್ಕೆ ತಿರುಗಿತ್ತು. ಅವರು ನಮ್ಮ ಮಗಳನ್ನು ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ. ನಂತರ ಅನುಮಾನಬರದಂತೆ ನೇಣು ಬಿಗಿದಿದ್ದಾರೆ. ನಮ್ಮ ಮಗಳು ಈ ಹಿಂದೆಯೂ ಕಿರುಕುಳ ನೀಡುತ್ತಿರುವ ಬಗ್ಗೆ ಹೇಳಿದ್ದಳು. ಆದರೆ ನಾವು ಸಮಸ್ಯೆ ಬಗೆಹರಿಯುತ್ತದೆ ಎಂಬ ಭರವಸೆಯೊಂದಿಗೆ ಅವಳನ್ನು ಮತ್ತೆ ಪತಿಯ ಮನೆಗೆ ಕಳುಹಿಸಿದ್ದೆವು. ಆದರೆ ಈ ರೀತಿ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ ಎಂದು ತಾಯಿ ಕಣ್ಣೀರು ಹಾಕಿದ್ದಾರೆ.

ಸದ್ಯಕ್ಕೆ ಪೋಷಕರು ನೀಡಿದ ದೂರಿನ ಆಧಾರದ ಮೇರೆಗೆ ಈ ಕುರಿತು ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪದ ಮೇರೆಗೆ ಪೊಲೀಸರು ಜಮಿನಿಕಾಂತ್‍ನನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *