ಕೇಂದ್ರ ಸಚಿವರನ್ನು ಭೇಟಿಯಾದ 6 ವರ್ಷದ ʼರೈಲ್‌ ಮಂತ್ರಿʼ!

Public TV
1 Min Read

ನವದೆಹಲಿ: ʼರೈಲ್‌ ಮಂತ್ರಿʼಯೆಂದೇ (Rail Mantri) ಕರೆಯಲ್ಪಡುವ 6 ವರ್ಷದ ಬಾಲಕ ಇದೀಗ ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಡಾ. ಸುಭಾಷ್ ಸರ್ಕಾರ್ ಅವರನ್ನು ಭೇಟಿಯಾಗಿದ್ದಾನೆ.

ಬಾಲಕ ದೀನದಯಾಳ್ ಕುಮಾರ್ ಗುಪ್ತಾ (Deendayal Kumar Gupta) ಶುಕ್ರವಾರ ಸಂಸತ್ತಿನಲ್ಲಿ ಸಚಿವರನ್ನು ಭೇಟಿಯಾಗಿದ್ದಾನೆ. ಈ ವೇಳೆ ತಾನು ದೊಡ್ಡವನಾದ ಮೇಲೆ ರೈಲ್ವೆ ಸಚಿವರಾಗುವ ಆಸೆಯಿದೆ ಎಂದು ಹೇಳಿದ್ದಾನೆ.

ರೈಲ್‌ ಮಂತ್ರಿ ಎಂಬ ಹೆಸರು ಬರಲು ಕಾರಣವೇನು..?: ತುಂಬು ಗರ್ಭಿಣಿಯಾಗಿದ್ದ ಜಾರ್ಖಂಡ್‌ ಮೂಲದ ದೇವಿ 2017ರ ಡಿಸೆಂಬರ್ 24 ರಂದು ಗಂಡನ ಮನೆಯಿಂದ ಪಶ್ಚಿಮ ಬಂಗಾಳದ ಬಂಕುರಾಗೆ ಪ್ರಯಾಣಿಸುತ್ತಿದ್ದರು. ಅಂತೆಯೇ ಚಕ್ರಧರಪುರ-ಹೌರಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ: ʻಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿʼ – ಪ್ರಚೋದನಕಾರಿ ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ಕೇಸ್‌

‌ಇದೇ ರೈಲಿನಲ್ಲಿ ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಸುಭಾಷ್ ಸರ್ಕಾರ್ (Arjun Ram Meghwal and Dr Subhash Sarkar) ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇತ್ತ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ರೈಲನ್ನು ಪುರುಲಿಯಾದಲ್ಲಿ ನಿಲ್ಲಿಸಲಾಯಿತು. ಈ ವೇಳೆ ಡಾ.ಸರ್ಕಾರ್ ಅವರು  ಸ್ತ್ರೀರೋಗತಜ್ಞ ಎಂದು ಮೇಘವಾಲ್ ಅವರು ರೈಲ್ವೆ ಸಿಬ್ಬಂದಿಗೆ ತಿಳಿಸಿದರು. ಅದರಂತೆ ಮಹಿಳೆಗೆ ಹೆರಿಗೆ ಮಾಡಿಸಲು ಬೇಕಾದ ಉಪಕರಣಗಳನ್ನು ಸಿದ್ಧಪಡಿಸಿದ್ದು, ಮಹಿಳೆ ಗಂಡು ಮಗುವಿಗೆ ಜನ್ಮ ನೀಡುವಲ್ಲಿ ಸಹಾಯ ಮಾಡಿದ್ದರು. ಇದೇ ವೇಳೆ ಅರ್ಜುನ್ ರಾಮ್ ಮೇಘವಾಲ್ ಅವರು ಮಗುವಿಗೆ ದೀನದಯಾಳ್ ಎಂದು ಹೆಸರಿಸಿದರು.

ಸದ್ಯ ಈತ ರೈಲಿನಲ್ಲಿ ಹುಟ್ಟಿದ್ದರಿಂದ ‘ರೈಲ್ ಮಂತ್ರಿ’ ಎಂಬ ಅಡ್ಡಹೆಸರಿನಿಂದ ಗುರುತಿಸಿಕೊಂಡಿದ್ದಾನೆ. ಇದೀಗ 6 ವರ್ಷದ ಬಳಿಕ ರೈಲಿನಲ್ಲಿ ತನ್ನ ಜನ್ಮಕ್ಕೆ ಸಹಾಯ ಮಾಡಿದ ಇಬ್ಬರನ್ನು ನಿನ್ನೆ ಭೇಟಿಯಾಗಿದ್ದಾನೆ.

Share This Article