6 ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಂದು, ಮನೆಯಲ್ಲೇ ಮೃತದೇಹ ಬಚ್ಚಿಟ್ಟಿದ್ದ ಕಾಮುಕ

Public TV
2 Min Read

ಬೆಂಗಳೂರು: ಆ ಆರು ವರ್ಷದ ಕಂದಮ್ಮ ಮನೆಗೆ ಅಷ್ಟೇ ಅಲ್ಲ ಏರಿಯಾದ ಜನರಿಗೆಲ್ಲ ಮುದ್ದು ಮಗಳು. ಪಟಾಕಿಯಾಗಿ ಮಾತನಾಡುತ್ತಾ, ಏರಿಯಾ ಜನರ ಪ್ರೀತಿಗೆ ಪಾತ್ರವಾಗಿದ್ದಳು. ಆದ್ರೆ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಗು ರವಿವಾರ ಶವವಾಗಿ ಪತ್ತೆಯಾಗಿದ್ದಾಳೆ.

ಗಿರಿನಗರದ ನಿವಾಸಿಯಾದ ಶಿವಕುಮಾರ್ ಎಂಬವರ ಆರು ವರ್ಷದ ಮಗಳಾದ ಹರ್ಷಿತಾ ಕೊಲೆಯಾದ ಬಾಲಕಿ. ಹರ್ಷಿತಾ ಗುರುವಾರ ಸಂಜೆ ಆಟವಾಡುತ್ತಿದ್ದವಳು ಇದ್ದಕ್ಕಿದಂತೆ ನಾಪತ್ತೆಯಾಗಿದ್ದಳು. ಇದರಿಂದ ಗಾಬರಿಗೊಂಡ ಹರ್ಷಿತಾ ಪೋಷಕರು ಪಕ್ಕದ ಮನೆಯ ಅನಿಲ್ ಜೊತೆಯಲ್ಲಿ ಏರಿಯಾದಲ್ಲೆಲ್ಲಾ ಹುಡುಕಾಡಿದ್ರು. ಯಾವಾಗ ಹರ್ಷಿತಾ ಪತ್ತೆಯಾಗಲಿಲ್ಲಾ, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಮೂರು ದಿನಗಳಾದ್ರು ಪತ್ತೆಯಾಗದ ಹರ್ಷಿತಾ ಪೋಷಕರ ಜೊತೆ ಮಗುವಿಗಾಗಿ ಹುಡುಕಾಟ ನಡೆಸಿದ ಅನಿಲ್ ಮನೆಯಲ್ಲೇ ರವಿವಾರದಂದು ಹೆಣವಾಗಿ ಪತ್ತೆಯಾಗಿದ್ದಾಳೆ.

ಪತ್ತೆಯಾಗಿದ್ದು ಹೇಗೆ?: ಮನೆಯ ಮುಂದೆ ಸಂಜೆ ಆಟವಾಡುತ್ತಿದ್ದ ಮಗು 5:30ರ ವೇಳೆಗೆ ನಾಪತ್ತೆಯಾಗಿದ್ದಳು. ನಾಪತ್ತೆಯಾದ ಮಗುವನ್ನ ಹುಡುಕುವ ಹಾಗೆ ನಾಟಕ ಮಾಡಿದ ಅನಿಲ್ ಕೂಡ ಅವತ್ತೇ ರಾತ್ರಿ ಮನೆ ಖಾಲಿ ಮಾಡಿ ಹೆಂಡತಿ ಮನೆ ಸೇರಿದ್ದ. ಮಗು ಸಿಗದೆ ಪೋಷಕರು ಕಣ್ಣೀರಿಡುವಾಗ ಪೊಲೀಸರಿಗೆ ಪಕ್ಕದ ಮನೆಯ ಅನಿಲ್ ಮೇಲೆ ಅನುಮಾನ ಶುರುವಾಗಿತ್ತು. ಅನಿಲ್ ಮುದ್ದಾದ ಕಂದಮ್ಮನನ್ನ ಕೊಂದು, ಮೃತ ದೇಹವನ್ನ ಅರೆಬರೆ ಸುಟ್ಟು ಮಂಚದ ಕೆಳಗೆ ಬಚ್ಚಿಟ್ಟು ಮನೆ ಖಾಲಿ ಮಾಡಿದ್ದ. ಮನೆಯ ಹತ್ತಿರದ ಪರಿಚಯಸ್ಥರಿಗೆ ಕರೆ ಮಾಡಿ ನಾನು ಮನೆಯಲ್ಲಿ ಇಲ್ಲ, ಸ್ವಲ್ಪ ನಮ್ಮ ಮನೆಯ ಲೈಟ್ ಆಪ್ ಮಾಡಿ ಎಂದು ಹೇಳಿದ್ದ. ಲೈಟ್ ಆಫ್ ಮಾಡಲು ಬಂದ ಅಲ್ಲಿನ ನಿವಾಸಿಯೊಬ್ಬರಿಗೆ ಮನೆಯ ಒಳಗಿಂದ ಕೆಟ್ಟ ವಾಸನೆ ಬರಲಾರಂಭಿಸಿದೆ. ಇದನ್ನ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ನೋಡಿದಾಗ ನಾಪತ್ತೆಯಾಗಿದ್ದ ಹರ್ಷಿತಾಳ ಶವ ದೊರಕಿದೆ.

ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅನಿಲ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕಿಯ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ಸ್ಥ್ಥಳಾಂತರಿಸಲಾಗಿದೆ. ಅನಿಲ್ ಏಳು ವರ್ಷಗಳಿಂದ ಗಿರಿನಗರದಲ್ಲಿ ವಾಸವಾಗಿದ್ದು, ಮದುವೆಯಾಗಿ ಎರಡು ಮಕ್ಕಳಿವೆ.

Share This Article
Leave a Comment

Leave a Reply

Your email address will not be published. Required fields are marked *