ಧಾರವಾಡ: ವರದಕ್ಷಿಣೆಗಾಗಿ 6 ತಿಂಗಳ ಗರ್ಭಿಣಿಗೆ ಆಕೆಯ ಪತಿ ವಿಷ ಕೊಟ್ಟು ಕೊಲೆ ಮಾಡಿದ್ದಾನೆ ಎಂಬ ಆರೋಪ ಧಾರವಾಡದಲ್ಲಿ ಕೇಳಿ ಬಂದಿದೆ.
ಜಿಲ್ಲೆಯ ಹುಲಕೊಪ್ಪ ಗ್ರಾಮದ ಕಾವ್ಯಾ ತಡಸದಮಠ (22)ಎಂಬ ಗರ್ಭಿಣಿಗೆ ಆಕೆಯ ಪತಿ ಮುತ್ತಯ್ಯ ತಡಸದಮಠ ವಿಷ ಕೊಟ್ಟು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮದ ಕಾವ್ಯಾಳ ಜೊತೆಯಲ್ಲಿ ಮುತ್ತಯ್ಯನ ಮದುವೆಯಾಗಿತ್ತು. ಆಗಿನಿಂದ ವರದಕ್ಷಿಣೆ ತರಲು ಮುತ್ತಯ್ಯ ತನ್ನ ಪತ್ನಿಗೆ ಪಿಡಿಸುತ್ತಲೇ ಇದ್ದ.
ಕಳೆದ ನಾಲ್ಕು ದಿನಗಳ ಹಿಂದೆ ಮುತ್ತಯ್ಯ ಕಾವ್ಯಳನ್ನು ತಂದೆಯ ಮನೆ ಇರುವ ಕ್ಯಾರಕೊಪ್ಪಕ್ಕೆ ಬಿಟ್ಟು ಕೂಡ ಹೋಗಿದ್ದ. ದಂಪತಿಗೆ 11 ತಿಂಗಳ ಮಗುವಿದೆ. ಮಗುವನ್ನು ಕಾವ್ಯಾಳಿಗೆ ಮುತ್ತಯ್ಯ ನೀಡಿರಲಿಲ್ಲ. ಈ ಹಿನ್ನೆಲೆ ನ್ಯಾಯ ಬಗೆಹರಿಸಿಕೊಳ್ಳಲು ಕಾವ್ಯಾ ತಂದೆ ನಿನ್ನೆಯಷ್ಟೇ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಗೆ ದೂರನ್ನ ನೀಡಲು ಬಂದಿದ್ದರು. ಆದರೆ ಕಾವ್ಯಾ ಗಂಡನ ಜೊತೆಯಲ್ಲೇ ಜಗಳಕ್ಕೆ ಮುಂದಾಗದೇ ಅವನ ಜೊತೆಯಲ್ಲಿ ಹೋಗುವುದಾಗಿ ಹೇಳಿದ್ದರಿಂದ ಅವಳನ್ನ ಕಳಿಸಿಕೊಟ್ಟಿದ್ದರು.
ನಿನ್ನೆ ತಡ ರಾತ್ರಿ ಮುತ್ತಯ್ಯ ತನ್ನ ಪತ್ನಿ ಕಾವ್ಯಾ ಪೊಲೀಸ್ ಠಾಣೆಗೆ ಹೋಗಿದ್ದಕ್ಕೆ ಕಿರುಕುಳ ನೀಡಿ, ಆಕೆಗೆ ವಿಷ ಕೊಟ್ಟು ಸಾಯಿಸಿದ್ದಾನೆ ಎಂದು ಮೃತ ಗರ್ಭಿಣಿ ಕುಟುಂಬದವರು ಆರೋಪಿಸಿದ್ದಾರೆ. ಸದ್ಯ ಮುತ್ತಯ್ಯನ ಮೇಲೆ ಕೊಲೆ ಪ್ರಕರಣ ದಾಖಲಿಸಲು ಕಾವ್ಯಾ ತಂದೆ ಕಲಘಟಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.