ಬಹುಮಹಡಿ ಕಟ್ಟಡದ ಬಳಿ ಬಾಂಬ್ ಸ್ಫೋಟ- ಬಾಲಕಿ ಸಾವು, ಐವರು ಗಂಭೀರ!

Public TV
1 Min Read

ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜಧಾನಿಯ ನಗರ್ ಬಜಾರ್ ಪ್ರದೇಶದ ಬಹುಮಹಡಿ ಕಟ್ಟಡದ ಬಳಿ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯ ತೀವ್ರತೆಗೆ ಓರ್ವ ಬಾಲಕಿ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು ಮುಂಜಾನೆ 9 ಗಂಟೆಗೆ ನಗರ್ ಬಜಾರ್ ಪ್ರದೇಶದ ಹಣ್ಣಿನ ಅಂಗಡಿಯ ಬೃಹತ್ ಕಟ್ಟದ ಬಳಿ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಂಭೀರವಾಗಿ ಗಾಯಗೊಂಡ ಐವರನ್ನು ಕೂಡಲೇ ಸ್ಥಳೀಯರು ಹತ್ತಿರದ ಆರ್.ಜಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸ್ಫೋಟ ಸಂಭವಿಸಿದಾಗ ಮೊದಲು ಸ್ಥಳೀಯರು ಸಿಲಿಂಡರ್ ಸ್ಫೋಟವಾಗಿರಬಹುದೆಂದು ಭಾವಿಸಿದ್ದರು. ಆದರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇದು ಸಿಲಿಂಡರ್ ಸ್ಫೋಟವಲ್ಲ, ಏನೋ ಬೇರೆ ಸ್ಫೋಟ ಸಂಭವಿಸಿರಬೇಕು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ, ಈ ಮೊದಲು ನಾವು ಸಿಲಿಂಡರ್ ಸ್ಫೋಟ ಎಂದು ಊಹಿಸಿದ್ದೆವು. ಆದರೆ ನಂತರ ಬೇರೆ ಏನೋ ಸ್ಫೋಟವಾಗಿರಬಹುದು ಎಂಬ ಅನುಮಾನ ಮೂಡಿತ್ತು. ಹೀಗಾಗಿ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಹಾಗೂ ವಿಧಿವಿಜ್ಞಾನ ತಜ್ಞರಿಗೆ ಮಾಹಿತಿ ನೀಡಿದೆವು. ಸದ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸ್ಫೋಟದ ತೀವ್ರತೆಯಿಂದ ಗಾಜು, ಲೋಹ ಹಾಗೂ ಕಲ್ಲಿನ ಚೂರುಗಳು ಸಿಡಿದಿದ್ದು, ಹಲವರಿಗೆ ಗಾಯಗಳಾಗಿವೆ. ಸ್ಫೋಟ ಸಂಭವಿಸಿರುವ ಸ್ಥಳದ ಸಮೀಪವೇ ತೃಣಮೂಲ ಕಾಂಗ್ರೆಸ್ ಕಚೇರಿ ಇದೆ. ಡಂಡಂ ನಗರಸಭೆ ಅಧ್ಯಕ್ಷ ಮತ್ತು ಲೇಖಕ ಪಂಚು ರಾಯ್ ಇದೇ ಕಟ್ಟಡದಲ್ಲಿ ಕಚೇರಿ ಹೊಂದಿದ್ದರು. ಪಂಚು ರಾಯ್ ಪ್ರತಿ ಮಂಗಳವಾರ ಕಚೇರಿಗೆ ಬರುತ್ತಿರುತ್ತಾರೆ. ಹೀಗಾಗಿ ಅವರನ್ನೇ ಗುರಿಯಾಗಿಸಿ ಬಾಂಬ್ ಸ್ಫೋಟಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *