ಕೊನೆಗೂ ಶ್ರೀದೇವಿ ನಟನೆಯ ಐದು ಸಿನಿಮಾಗಳು ರಿಲೀಸ್ ಆಗಲೇ ಇಲ್ಲ

Public TV
2 Min Read

ಮುಂಬೈ: ಬಾಲಿವುಡ್ ಮೋಹಕ ತಾರೆ, ಅತಿಲೋಕದ ಸುಂದರಿ ಶ್ರೀದೇವಿ ಅವರ ಅಂತ್ಯಕ್ರಿಯೆ ಬುಧವಾರ ನಡೆಯಿತು. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಭಾರತೀಯರ ಹೃದಯ ಗೆದ್ದಿದ್ದ ಶ್ರೀದೇವಿ ನಟನೆಯ ಐದು ಚಿತ್ರಗಳು ಮಾತ್ರ ನಾನಾ ಕಾರಣಗಳಿಂದ ತೆರೆಕಾಣಲಿಲ್ಲ.

1. ಜಮೀನ್: 1988ರಲ್ಲಿ ನಿರ್ದೇಶಕ ರಮೇಶ್ ಸಿಪ್ಪಿ ‘ಜಮೀನ್’ ಸಿನಿಮಾ ಘೋಷಣೆ ಮಾಡಿದ್ದರು. ವಿನೋದ್ ಖನ್ನಾ, ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್ ಲೀಡ್ ನಲ್ಲಿ ನಟಿಸಿದ್ದರು. ಶೇ.70ರಷ್ಟು ಸಿನಿಮಾದ ಚಿತ್ರೀಕರಣವೂ ಮುಗಿದಿತ್ತು. ಆದ್ರೆ ಹಲವಾರು ಕಾರಣಗಳಿಂದ ಸಿನಿಮಾ ರಿಲೀಸ್ ಆಗಲೇ ಇಲ್ಲ.

2. ಗರ್ಜನ: 1991ರಲ್ಲಿ ನಿರ್ದೇಶಕ ಕೆ.ಆರ್.ರೆಡ್ಡಿ ಅಂದಿನ ಸೂಪರ್ ಸ್ಟಾರ್ ಶ್ರೀದೇವಿಯವರನ್ನು ಹಾಕಿಕೊಂಡು ಸಿನಿಮಾ ಮಾಡಲಿದ್ದೇನೆ ಅಂತಾ ಹೇಳಿಕೊಂಡಿದ್ದರು. ಚಿತ್ರೀಕರಣ ಆರಂಭಗೊಂಡು ಸಿನಿಮಾ ಪ್ರಚಾರ ಸಹ ನಡೆದಿತ್ತು. ಆದರೆ ನಟ-ನಟಿಯರ ಸಂಭಾವನೆ ಸಂಬಂಧ ವಾಗ್ವಾದ ಉಂಟಾಗಿ ಚಿತ್ರೀಕರಣ ಅರ್ಧದಲ್ಲೇ ಸ್ಥಗಿತಗೊಂಡಿತು.

3. ಮಹಾರಾಜ: 1990ರಲ್ಲಿ ಶ್ರೀದೇವಿ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯಲ್ಲಿ ಮಹಾರಾಜ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ನಿರ್ದೇಶಕ ಅನಿಲ್ ಶರ್ಮಾರ ಸಾರಥ್ಯದಲ್ಲಿ ಸಿನಿಮಾ ಸೆಟ್ಟೇರಿತ್ತು. ಆದರೆ ಕಲಾವಿದರ ಕೊರತೆಯಿಂದ ಸಿನಿಮಾ ಅರ್ಧದಲ್ಲಿ ನಿಂತು ಹೋಯಿತು. 1998ರಲ್ಲಿ ಇದೇ ಕಥೆಯುಳ್ಳ ಸಿನಿಮಾ ನಟ ಗೋವಿಂದ ಮತ್ತು ಮನೀಶಾ ಕೊಯಿರಲಾ ನಟನೆಯಲ್ಲಿ ಬಿಡುಗಡೆ ಆಯಿತು.

4. ಗೋವಿಂದಾ: 1996ರಲ್ಲಿ ಗೋವಿಂದಾ ಟೈಟಲ್ ನಲ್ಲಿ ಅನಿಲ್ ಕಪೂರ್ ಮತ್ತು ಶ್ರೀದೇವಿ ನಟನೆಯ ಸಿನಿಮಾ ಸೆಟ್ಟೇರಿತ್ತು. ಸಿನಿಮಾದ ಫೋಟೋ ಶೂಟ್ ಕೂಡ ಮಾಡಲಾಗಿತ್ತು. ತಾಂತ್ರಿಕ ಮತ್ತು ಆರ್ಥಿಕ ಸಮಸ್ಯೆಯಿಂದ ಚಿತ್ರ ಪೂರ್ಣವಾಗಲಿಲ್ಲ. ಇದೇ ಜೋಡಿ ಮುಂದೆ ಮಿಸ್ಟರ್ ಇಂಡಿಯಾ ಚಿತ್ರದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿತ್ತು.

5. ತೀರಂದಾಜ್: ಶ್ರೀದೇವಿ ನಟನೆಯ ತೀರಂದಾಜ್ ಸಿನಿಮಾ ಕೂಡ ಅದ್ದೂರಿಯಾಗಿ ಸಿನಿಮಾದ ಮುಹೂರ್ತ ಕಾರ್ಯಕ್ರಮವು ನಡೆದಿತ್ತು. ತೀರಂದಾಜ್ ನಲ್ಲಿ ಸನ್ನಿ ಡಿಯೋಲ್ ಮತ್ತು ಶ್ರೀದೇವಿ ಜೊತೆಯಾಗಿ ನಟಿಸಬೇಕಿತ್ತು. ಸಿನಿಮಾದ ಮುಹೂರ್ತದ ಬಳಿಕ ಚಿತ್ರೀಕರಣವೇ ನಡೆಯಲಿಲ್ಲ.

ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಕಳೆದ ಶನಿವಾರ ಶ್ರೀದೇವಿ ಮೃತಪಟ್ಟಿದ್ದರು. ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಮಂಗಳವಾರ ರಾತ್ರಿ ಮುಂಬೈಗೆ ತರಲಾಗಿತ್ತು. ಆಕಸ್ಮಿಕವಾಗಿ ಬಾತ್ ಟಬ್‍ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಬುಧವಾರ ಅಯ್ಯಪ್ಪನ್ ಸಂಪ್ರದಾಯದಂತೆ ಬಾಲಿವುಡ್ ನಟಿ ಶ್ರೀದೇವಿಯ ಅಂತ್ಯಕ್ರಿಯೆ ನೇರವೇರಿದೆ.

Share This Article
Leave a Comment

Leave a Reply

Your email address will not be published. Required fields are marked *