5 ವರ್ಷ ಪ್ರೀತಿಸಿ ಮದ್ವೆಗೂ ಮುನ್ನ ಇನ್ನೊಬ್ಬಳ ಮುದ್ದಿನ ಗಂಡನಾದ

Public TV
2 Min Read

– ನೆಂಟರ ಮನೆಯಲ್ಲಿ ಪ್ರಿಯತಮೆ, ಇತ್ತ ಪತ್ನಿ ಜೊತೆ ಸಂಸಾರ

ಮಂಡ್ಯ: 5 ವರ್ಷ ಪ್ರೀತಿಸಿ ಮದುವೆಯಾದ ಎರಡೇ ತಿಂಗಳಲ್ಲಿ ಮತ್ತೊಬ್ಬಳ ಜೊತೆ ಯುವಕ ಸಂಸಾರ ಮಾಡುತ್ತಿದ್ದು, ಇದೀಗ ನೊಂದ ಯುವತಿ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರದ ತೇಜಸ್ವಿ ಎಂಬ ಯುವಕ ಅದೇ ಗ್ರಾಮದ ಶೃತಿ ಎಂಬಾಕೆಯನ್ನು ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ. ಕಳೆದ ವರ್ಷ ತೇಜಸ್ವಿ, ನನಗೆ ಶೃತಿ ಬೇಡವೆಂದು ನಿರಾಕರಿಸಿ ಆಕೆಯನ್ನು ಬಿಟ್ಟು ಹೋಗಿದ್ದ. ಇದರಿಂದ ನೊಂದ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ನನಗೆ ತೇಜಸ್ವಿ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದಾಳೆ. ದೂರಿನ ಅನ್ವಯ ಪೊಲೀಸರು ತೇಜಸ್ವಿಯನ್ನು ಬಂಧಿಸಲು ಮುಂದಾದಾಗ ತೇಜಸ್ವಿ ಜಾಮೀನು ಪಡೆದುಕೊಂಡಿದ್ದ.

ಇತ್ತ ಶೃತಿಗೆ ಕರೆ ಮಾಡಿದ ತೇಜಸ್ವಿ, ಕೇಸ್ ವಾಪಸ್ ತೆಗೆದುಕೊ, ನಾನು ನಿನ್ನ ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ತೇಜಸ್ವಿ ಮಾತು ನಂಬಿದ್ದ ಶೃತಿ, ಆತನ ಮೇಲೆ ಹಾಕಿದ್ದ ಪ್ರಕರಣವನ್ನು ವಾಪಸ್ ತೆಗೆದುಕೊಂಡಿದ್ದಳು. ಬಳಿಕ ನವೆಂಬರ್ 8 ರಂದು ದೇವಸ್ಥಾನವೊಂದರಲ್ಲಿ ಇಬ್ಬರು ಮದುವೆಯಾಗಿದ್ದರು.

ಇದಾದ ಕೆಲ ದಿನಗಳ ನಂತರ ನಾವು ಮದುವೆಯ ರಿಜಿಸ್ಟರ್ ಮಾಡಿಕೊಳ್ಳೋಣ ಎಂದು ಶೃತಿ ತಿಳಿಸಿದ್ದಾಳೆ. ಆದರೆ ಇದಕ್ಕೆ ತೇಜಸ್ವಿ ನಿರಾಕರಿಸಿದ್ದಾನೆ. ಬಳಿಕ ಈ ಬಗ್ಗೆ ವಿಚಾರಿಸಿದ ಶೃತಿ, ತೇಜಸ್ವಿ ತನ್ನನ್ನು ಮದುವೆ ಆಗುವ ಮೊದಲೇ 8 ತಿಂಗಳ ಹಿಂದೆಯೇ ಇನ್ನೊಬ್ಬಳನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಇತ್ತ ಅದಾಗಲೇ ತೇಜಸ್ವಿ, ಶೃತಿಯನ್ನು ತನ್ನ ಸಂಬಂಧಿಕರ ಮನೆಯಲ್ಲಿ ಇರಿಸಿ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಶೃತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು ಸಹ ನ್ಯಾಯ ದೊರೆತಿಲ್ಲ.

ನಿನ್ನೆ ಕೆಲಸದ ನಿಮಿತ್ತ ಬಂದಾಗ ತೇಜಸ್ವಿಯನ್ನು ಕಂಡು ಆತನನ್ನು ಶೃತಿ ಹಿಂಬಾಲಿಸಿದ್ದಾಳೆ. ಈ ವೇಳೆ ತೇಜಸ್ವಿ ಇನ್ನೊಬ್ಬ ಪತ್ನಿಯ ಮನೆಯಲ್ಲಿ ಇರುವುದು ತಿಳಿದುಬಂದಿದೆ. ಪೊಲೀಸರನ್ನು ಕರೆದುಕೊಂಡು ಅಲ್ಲಿಗೆ ಹೋದ ವೇಳೆ ತೇಜಸ್ವಿ ಪೊಲೀಸರ ಎದುರೆ ಎಸ್ಕೇಪ್ ಆಗಿದ್ದಾನೆ. ಇದೀಗ ತನ್ನ ಬದುಕು ಹಾಳಾಗಿ ಹೋಗಿದೆ. ನನಗೆ ಎಲ್ಲೂ ನ್ಯಾಯ ಸಿಗುತ್ತಿಲ್ಲ ಎಂದು ಶೃತಿ ಕಣ್ಣೀರಿಡುತ್ತಿದ್ದಾಳೆ.

ಸದ್ಯ ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *