40% ಕಮಿಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಗುತ್ತಿಗೆದಾರರ ಸಂಘದಿಂದ ದಾಖಲೆ ಕೇಳಿದ ಕೇಂದ್ರ ಗೃಹ ಸಚಿವಾಲಯ

Public TV
2 Min Read

ಬೆಂಗಳೂರು: ಸಾಕಷ್ಟು ಸಂಚಲನ ಸೃಷ್ಟಿಸಿದ್ದ 40% ಟೆಂಡರ್ ಕಮಿಷನ್ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿ ಗುತ್ತಿಗೆದಾರರ ಸಂಘಕ್ಕೆ ಕೇಂದ್ರದ ಗೃಹ ಸಚಿವಾಲಯದಿಂದ ಕರೆ ಬಂದಿದ್ದು, ಸಂಪೂರ್ಣ ವರದಿ ನೀಡುವಂತೆ ಸೂಚಿಸಿದೆ.

ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಕೇಂದ್ರ ಗೃಹ ಇಲಾಖೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಕಳೆದ ಶುಕ್ರವಾರ ಕೆಂಪಣ್ಣ ಅವರಿಗೆ ಕೇಂದ್ರ ಗೃಹ ಇಲಾಖೆಯಿಂದ ಫೋನ್‌ ಕರೆ ಬಂದಿತ್ತು. ಬೆಂಗಳೂರಿನ ಕಚೇರಿಗೆ ಆಗಮಿಸಿ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರು ಕಚೇರಿಗೆ ತೆರಳಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

ಸರ್ಕಾರದ ಸಚಿವರು, ಶಾಸಕರು, ಮುಖ್ಯ ಇಂಜಿನಿಯರ್‌ಗಳ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘವು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ನಾಲ್ಕೈದು ಸಚಿವರು, ಸುಮಾರು 20 ಶಾಸಕರು, ಐದಾರು ಮುಖ್ಯ ಇಂಜಿನಿಯರ್‌ಗಳ ವಿರುದ್ಧ ದಾಖಲೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಾಖಲೆಗಳ ಸಂಗ್ರಹ ಮಾಡಿಕೊಂಡು ಗೃಹ ಸಚಿವಾಲಯ ತಿಳಿಸಿದ ದಿನದಂದು ಅವುಗಳನ್ನು ಕಳಿಸಿಕೊಡಲು ಸಂಘವು ನಿರ್ಧರಿಸಿದೆ. 2021ರ ಜುಲೈ 7ರಂದು ಪ್ರಧಾನಿ ಸಚಿವಾಲಯಕ್ಕೆ 40% ಕಮಿಷನ್ ಕುರಿತು ರಾಜ್ಯ ಗುತ್ತಿಗೆದಾರರ ಸಂಘದಿಂದ ದೂರು ನೀಡಲಾಗಿತ್ತು.

ಈ ಬಗ್ಗೆ ಪಬ್ಲಿಕ್ ಟಿವಿ ಜತೆ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಶುಕ್ರವಾರ ಕೇಂದ್ರ ಗೃಹ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ರಾಜ್ಯ ಸರ್ಕಾರದ ಬಗ್ಗೆ ಮಾಡಲಾಗಿದ್ದ 40% ಆರೋಪದ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು. ಆದರೆ ವೈಯಕ್ತಿಕ ಕಾರಣದಿಂದ ನಾನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ಅವರ ಬೆಂಗಳೂರು ಕಚೇರಿಗೆ ತೆರಳಿ ಮಾಹಿತಿಯನ್ನು ನೀಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರಗ್ಸ್ ವಶ – ಆರೋಪಿಗಳ ಬಗ್ಗೆ ಸಿಕ್ಕಿಲ್ಲ ಸುಳಿವು

40% ಕಮಿಷನ್ ಆರೋಪ ರಾಜ್ಯಾದ್ಯಂತ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ನಡೆಸಿದ್ದವು. ಪರಿಣಾಮ ಈ ಆರೋಪ ಸರ್ಕಾರಕ್ಕೂ ಸಾಕಷ್ಟು ಮುಜುಗರ ತಂದಿತ್ತು. ಈ ನಡುವೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧವೂ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಪ್ರಕರಣವೂ ಭಾರೀ ಸದ್ದು ಮಾಡಿತ್ತು. ಈ ನಡುವೆ ಕೇಂದ್ರ ಗೃಹ ಇಲಾಖೆಯಿಂದ ಕೆಂಪಣ್ಣ ಅವರಿಗೆ ಕರೆ ಬಂದು ದಾಖಲೆ ನೀಡುವಂತೆ ಕೇಳಿಕೊಂಡಿರುವುದು ಮುಂದಿನ ವಿದ್ಯಮಾನಗಳು ಕುತೂಹಲ ಮೂಡಿಸಿವೆ. ಇದನ್ನೂ ಓದಿ: ರಾತ್ರಿ ಚಿನ್ನಾಭರಣ ಕಳವು ಮಾಡ್ದ, ಬೆಳಗ್ಗೆ ಕದ್ದ ಚಿನ್ನವನ್ನು ವಾಪಸ್‌ ತಂದಿಟ್ಟು ಹೋದ

Live Tv

Share This Article
Leave a Comment

Leave a Reply

Your email address will not be published. Required fields are marked *