ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಪ್ರಯಾಣಿಕರು ತುಂಬಿದ್ದ ಖಾಸಗಿ ಬಸ್ನ್ನು ಹೈಜಾಕ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ತಡರಾತ್ರಿ ನಡೆದಿದೆ.
ಕೆಎ 01 ಎಜಿ ನಂಬರ್ ನ ಲಾಮಾ ಟ್ರಾವೆಲ್ಸ್ ಗೆ ಸೇರಿದ ಬಸ್ ಸುಮಾರು 42 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊರಟಿತ್ತು. ಈ ವೇಳೆ ಮೈಸೂರು ರಸ್ತೆಯ ಆರ್ವಿ ಕಾಲೇಜ್ ಬಳಿ ತಡೆದ ನಾಲ್ವರು ವ್ಯಕ್ತಿಗಳು ನಾವು ಪೊಲೀಸರು ಅಂತಾ ಹೇಳಿ ಬಸ್ ಡ್ರೈವರ್ ನ ಕೆಳಗಿಳಿಸಿ ಬಸ್ನ್ನು ಅಪಹರಿಸಿದ್ದರು.
ಅಪಹರಿಸಿ ಆರ್ ಆರ್ ನಗರದ ಪಟ್ಟಣಗೆರೆಯ ಗೋಡಾನ್ವೊಂದರಲ್ಲಿ ಸುಮಾರು ಒಂದು ಗಂಟೆಗಳ ಕಾಲ ಬಂಧನದಲ್ಲಿ ಇಟ್ಟಿದ್ದರು. ಇದರಿಂದ ಗಾಬರಿಗೊಂಡ ಪ್ರಯಾಣಿಕರು, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದ ಸುಮಾರು 30 ಕ್ಕೂ ಹೆಚ್ಚು ಜನರ ತಂಡ ಗೋಡಾನ್ ನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಮೂವರು ಪರಾರಿಯಾಗಿದ್ದು, ತನಿಖೆ ಮುಂದುವರೆಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಫೈನಾನ್ಸ್ ವಿಚಾರವಾಗಿ ಈ ಕಿಡ್ನಾಪ್ ನಡೆದಿದೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಆರ್ ಆರ್ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.