ನಿಷೇಧಾಜ್ಞೆ ಜಾರಿ, ಸಾಮಾಜಿಕ ಜಾಲತಾಣಗಳ ಮೇಲೂ ನಿರ್ಬಂಧ- ಶ್ರೀಲಂಕಾದಲ್ಲಿ ಪರಿಸ್ಥಿತಿ ಹೇಗಿದೆ?

Public TV
2 Min Read

ನವದೆಹಲಿ: ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನಿರುದ್ಯೋಗ, ಅಗತ್ಯ ವಸ್ತುಗಳ ಕೊರತೆ, ಅಗತ್ಯ ಆಮದಿಗೆ ವಿದೇಶಿ ಕರೆನ್ಸಿ ಕೊರತೆ ಸೇರಿದಂತೆ ಮೊದಲಾದ ಕಾರಣಗಳಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಪರಿಸ್ಥಿತಿ ದಿನೇ ದಿನೇ ಉದ್ವಿಗ್ನಗೊಳ್ಳುತ್ತಿದೆ. ಎಲ್ಲೆಡೆ ಜನರು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಶನಿವಾರ ಸಂಜೆ 6 ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ಕರ್ಫ್ಯೂ ವಿಧಿಸಲಾಗಿದೆ.

ಸಾಮಾಜಿಕ ಜಾಲತಾಣಗಳ ಮೇಲೂ ನಿಷೇಧ ಹೇರಲಾಗಿದೆ. ಪ್ರತಿಭಟನೆಗಳನ್ನು ತಡೆಗಟ್ಟಲು ಮಿಲಿಟರಿ ಮಾದರಿಯ ಕಠಿಣ ಕ್ರಮಗಳನ್ನು ವಿಧಿಸಿ ಕರ್ಫ್ಯೂ ಜಾರಿಗೊಳಿಸಲಾಗಿರುವುದರಿಂದ, ಅಗತ್ಯ ವಸ್ತುಗಳ ಸೇವೆಗೆ ಮಾತ್ರ ಹೊರಗೆ ಬರಬೇಕಿದೆ. ಶಂಕಿತರನ್ನು ವಿಚಾರಣೆಯಿಲ್ಲದೇ ಬಂಧಿಸುವಂತೆ ಸರ್ಕಾರ ಆದೇಶ ನೀಡಿದೆ. 

curfew

ಜಾಲತಾಣಗಳ ಮೇಲೆ ನಿರ್ಬಂಧ
ಶ್ರೀಲಂಕಾ ಸರ್ಕಾರವು ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಯೂಟ್ಯೂಬ್ ಸೇರಿದಂತೆ ಎಲ್ಲ ಸಾಮಾಜಿಕ ಮಾಧ್ಯಮ ಸೈಟ್‌ಗಳ ಮೇಲೆ ನಿರ್ಬಂಧ ಹೇರಿದೆ. ಈ ಮೂಲಕ ತಪ್ಪು ಮಾಹಿತಿಯ ಹರಿದಾಡುವಿಕೆ ಹಾಗೂ ದೇಶದಲ್ಲಿ ಪ್ರತಿಭಟನೆಗಳನ್ನು ಸಂಘಟಿಸಲು ಜನರನ್ನು ಸಜ್ಜುಗೊಳಿಸುವುದನ್ನು ತಡೆಯುತ್ತಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನತೆ- ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?

ಸಾರಿಗೆ ದುರ್ಬಲ
ಡೀಸೆಲ್ ಕೊರತೆಯಿಂದ ಸಾರ್ವಜನಿಕ ಸಾರಿಗೆ ಹಾಗೂ ಖಾಸಗಿ ವಾಹನಗಳಿಗೆ ಇಂಧನ ಲಭ್ಯವಿಲ್ಲದಂತಾಗಿದೆ. ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ದುರ್ಬಲಗೊಳಿಸಿದಂತಾಗಿದೆ.

ಭಾರತದಿಂದ ತುರ್ತು ಸಹಾಯ
ಕೊಲಂಬೊ, ಹೊಸದಿಲ್ಲಿಯಿಂದ ಕ್ರೆಡಿಟ್ ಲೈನ್ ಅನ್ನು ಪಡೆದುಕೊಂಡ ನಂತರ ಭಾರತೀಯ ಟ್ರೇಡರ್ಸ್ಗಳು ಶ್ರೀಲಂಕಾಕ್ಕೆ 40 ಸಾವಿರ ಟನ್ ಅಕ್ಕಿಯನ್ನು ತ್ವರಿತವಾಗಿ ನೀಡಲು ಮುಂದಾಗಿದ್ದಾರೆ. ಇಂಧನ ಕೊರತೆ ನೀಗಿಸಲು 40 ಸಾವಿರ ಮೆಟ್ರಿಕ್ ಟನ್ ಡಿಸೇಲ್ ಅನ್ನು ಶನಿವಾರವೇ ಪೂರೈಕೆ ಮಾಡಿದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆಯೇ ಹಿಂಸಾತ್ಮಕ ಪ್ರತಿಭಟನೆ – ವಾಹನಗಳು ಸುಟ್ಟು ಭಸ್ಮ

sri lanka diesel

ಸರ್ವಪಕ್ಷ ರಚನೆಗೆ ಕರೆ
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಶುಕ್ರವಾರ ತುರ್ತು ಪರಿಸ್ಥಿತಿ ಘೋಷಿಸಿ, ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಈ ನಡುವೆ ದೇಶದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಫ್ರೀಡಂ ಪಾರ್ಟಿಯು, ಬಿಕ್ಕಟ್ಟನ್ನು ನಿವಾರಿಸಲು ಸರ್ವಪಕ್ಷ ಸರ್ಕಾರ ರಚಿಸುವಂತೆ ಕರೆ ನೀಡಿದ್ದಾರೆ.

ಮಿಲಿಟರಿ ಕಾನೂನು
ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ತನ್ನ ಉಚ್ಚಾಟನೆಗೆ ಕರೆ ನೀಡುವ ಪ್ರದರ್ಶನಗಳು ಕಂಡುಬಂದರೆ ಶಂಕಿತರನ್ನು ದೀರ್ಘಾವಧಿಯ ವರೆಗೆ ಬಂಧಿಸಲು ಅನುಮತಿ ನೀಡಲಾಗಿದೆ. ಶಂಕಿತರನ್ನು ಬಂಧಿಸಲು ಮಿಲಿಟರಿ ಮಾದರಿಯ ಕಠಿಣ ಕಾನೂನುಗಳನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು ಪ್ರತಿಭಟನೆ ನಡುವೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಮುಖ್ಯರಸ್ತೆಯಲ್ಲಿ ಸಂಚಾರ ಸ್ಥಗಿತ
ಇಲ್ಲಿನ ದಕ್ಷಿಣ ಭಾಗದ ಗಾಲ್ಲೆ, ಮಾತಾರಾ ಮತ್ತು ಮೊರಟುವಾ ಪಟ್ಟಣಗಳಲ್ಲೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಜೊತೆಗೆ ಮಧ್ಯಪ್ರದೇಶದಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಆದ್ದರಿಂದ ಮುಖ್ಯರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *