ಮಂತ್ರಾಲಯದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವ – ಇಂದಿನಿಂದ 7 ದಿನ ಸಪ್ತರಾತ್ರೋತ್ಸವ

Public TV
1 Min Read

ರಾಯಚೂರು: ಇಂದಿನಿಂದ (ಆ.8) ಮಂತ್ರಾಲಯ (Mantralaya) ಸೇರಿದಂತೆ ರಾಯರ ಮಠಗಳಲ್ಲಿ ಗುರುರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಆರಂಭವಾಗಲಿದೆ. ಜೊತೆಗೆ 7 ದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದೆ.

ಇಂದಿನಿಂದ ಗುರುರಾಘವೇಂದ್ರ ಸ್ವಾಮಿಯವರ (Guru Raghavendra Swamy) 354ನೇ ಆರಾಧನಾ ಮಹೋತ್ಸವ ಆರಂಭವಾಗಲಿದ್ದು, ಆ.8ರಿಂದ 14ರವರೆಗೆ ಏಳು ದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದೆ. ಇಂದು ಸಂಜೆ ಧ್ವಜಾರೋಹಣ ಮೂಲಕ ಸಪ್ತರಾತ್ರೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರು ಚಾಲನೆ ನೀಡಲಿದ್ದಾರೆ. ಗೋ, ಗಜ, ಅಶ್ವ, ಧಾನ್ಯ, ಲಕ್ಷ್ಮಿ ಪೂಜೆಯೊಂದಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಆ.10ಕ್ಕೆ ಪೂರ್ವಾರಾಧನೆ, 11ಕ್ಕೆ ಮಧ್ಯಾರಾಧನೆ, 12ಕ್ಕೆ ಉತ್ತರಾರಾಧನೆ ನಡೆಯಲಿದೆ.ಇದನ್ನೂ ಓದಿ: ʼಡೆತ್‌ನೋಟ್‌ʼ ನೋಡಿ ಡೆತ್‌ನೋಟ್‌ ಬರೆದು 14ರ ಬಾಲಕ ಆತ್ಮಹತ್ಯೆ!

ತಿರುಮಲ ತಿರುಪತಿ ದೇವಸ್ಥಾನದಿಂದ ಇಂದು ಬರಲಿರುವ ಶ್ರೀನಿವಾಸ ದೇವರ ಶೇಷವಸ್ತ್ರ ರಾಯರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಜೊತೆಗೆ ಮಠದ ಆವರಣದಲ್ಲಿ ನಿರ್ಮಾಣಗೊಂಡಿರುವ ಪುಷ್ಕರಣಿ ಆ.9ಕ್ಕೆ ಲೋಕಾರ್ಪಣೆಯಾಗಲಿದೆ. ಆ.10ರಂದು ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆ.12ರಂದು ಬೆಳಿಗ್ಗೆ 10 ಗಂಟೆಗೆ ಶ್ರೀಮಠದ ಮುಂದಿನ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ.

ಈ ಬಾರಿ ರಾಯರ ಮೂಲ ಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ ಮಾಡಲಾಗುತ್ತಿದೆ. ಆರಾಧನಾ ಮಹೋತ್ಸವದ ಏಳು ದಿನಗಳ ಕಾಲ ಮಂತ್ರಾಲಯ ರಾಯರ ಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.ಇದನ್ನೂ ಓದಿ: ಬರ್ತ್‌ಡೇಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಹೋಟೆಲ್‌ಗೆ ಕರೆದೊಯ್ದು ಮೋಜು, ಮಸ್ತಿ – ವಾರ್ಡನ್, ಅಡುಗೆ ಕೆಲಸದಾಕೆಗೆ ನೋಟಿಸ್

Share This Article