ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಗಾಂಜಾ ಸಾಗಾಟ ಮಾರಾಟ ಮತ್ತು ಸೇವನೆ ಹೆಚ್ಚಾಗುತ್ತಿದೆ. ಪ್ರವಾಸಿಗರು ಮತ್ತು ವಿದ್ಯಾರ್ಥಿಗಳನ್ನು ಪೆಡ್ಲರ್ಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಈ ನಡುವೆ ಟ್ರಕ್ ಒಂದರಲ್ಲಿ 65 ಕೆಜಿ ಗಾಂಜಾ ಉಡುಪಿ ಮಾರ್ಗದಲ್ಲಿ ಚಲಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಲ್ಪೆ ವೃತ್ತ ನಿರೀಕ್ಷಕ, ಸೆನ್ ವಿಭಾಗದ ಇನ್ಸ್ಪೆಕ್ಟರ್ ನಿತ್ಯಾನಂದ ನಾಯಕ್ ಟ್ರಕ್ ಒಂದನ್ನು ಅಡ್ಡ ಹಾಕಿದ್ದಾರೆ. ಅನುಮಾನ ಬಂದು ತಪಾಸಣೆ ನಡೆಸಿದಾಗ ಪೊಲೀಸರಿಗೆ ಶಾಕ್ ಕಾದಿತ್ತು.
ಉಡುಪಿಯ ಕಿನ್ನಿಮೂಲ್ಕಿ ಜಂಕ್ಷನ್ನಲ್ಲಿ ಲಾರಿಯನ್ನು ಅಡ್ಡ ಹಾಕಿದ ಪೊಲೀಸರು ತಪಾಸಣೆ ನಡೆಸಿದ್ದಾರೆ. ಗೋಣಿಯಲ್ಲಿ ಅನುಮಾನಾಸ್ಪದ ವಸ್ತು ಇರುವುದು ಪತ್ತೆಯಾಗಿದೆ. ತೆಗೆದು ನೋಡಿದಾಗ ಅದರಲ್ಲಿ ಅಪಾರ ಪ್ರಮಾಣದ ಗಾಂಜಾ ಸಿಕ್ಕಿದೆ.
ಮಹಜರು ನಡೆಸಿ ತೂಕ ಹಾಕಿದಾಗ 65 ಕೆಜಿಗಿಂತ ಹೆಚ್ಚು ಗಾಂಜಾ ಇರುವುದು ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳಾದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗಣೇಶ್, ಆಂದ್ರ ಪ್ರದೇಶದ ಅನಂತಪುರಂನ ಗೋಪಾಲ ರೆಡ್ಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶ-ಒರಿಸ್ಸಾ ಗಡಿಭಾಗದಿಂದ ಈ ಗಾಂಜಾ ರಾವಾನೆಯಾಗಿರುವ ಸಾಧ್ಯತೆಯಿದೆ.
ಗಾಂಜಾ ಮೌಲ್ಯ 35 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಯಲ್ಲಿ 50 ಲಕ್ಷ ವರೆಗೆ ಡಿಮ್ಯಾಂಡ್ ಇದೆ ಎನ್ನಲಾಗಿದೆ. 20 ಲಕ್ಷ ರೂಪಾಯಿ ಮೌಲ್ಯದ ಗೂಡ್ಸ್ ಲಾರಿ, ಎರಡು ಮೊಬೈಲ್ ಫೋನ್ ನಗದು ಸೇರಿದಂತೆ ಒಟ್ಟು 72,21,520 ರುಪಾಯಿ ಸ್ವತ್ತುಗಳನ್ನು ವಶಪಡಿಸಲಾಗಿದೆ. ಅಪಾರ ಪ್ರಮಾಣದ ಗಾಂಜಾ ಸಾಗಾಟವಾಗುತ್ತಿದ್ದದ್ದು ಎಲ್ಲಿಗೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕರಾವಳಿಯ ಪ್ರವಾಸೋದ್ಯಮ, ಶಿಕ್ಷಣ ಕ್ಷೇತ್ರವನ್ನು ಟಾರ್ಗೆಟ್ ಮಾಡುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಪೊಲೀಸರು ಇದರ ಮೂಲಕ್ಕೆ ಇಳಿದು ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಒತ್ತಾಯಿಸಿದ್ದಾರೆ.