ಏರ್ ಪೋರ್ಟ್ ಸೇತುವೆಯಿಂದ 10 ಅಡಿ ಆಳಕ್ಕೆ ಬಿದ್ದು ಬೆಂಗ್ಳೂರು ಟೆಕ್ಕಿ ದುರ್ಮರಣ!

Public TV
1 Min Read

ಚೆನ್ನೈ: ಇಲ್ಲಿನ ಏರ್ ಪೋರ್ಟ್ ಸೇತುವೆಯಿಂದ 10 ಅಡಿ ಆಳಕ್ಕೆ ಬಿದ್ದು, ಬೆಂಗಳೂರಿನ ಟೆಕ್ಕಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

ಟೆಕ್ಕಿಯನ್ನು 32 ವರ್ಷದ ಚೈತನ್ಯ ವಿಯೂರುರು ಎಂದು ಗುರುತಿಸಲಾಗಿದೆ. ಮೂಲತಃ ಆಂಧ್ರದ ವಿಜಯವಾಡ ನಿವಾಸಿಯಾಗಿರೋ ಇವರು ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಆಗಿದ್ದು ಏನು?: ಇಂದು ಬೆಳಗ್ಗೆ ಚೈತನ್ಯ ಅವರು ಏರ್‍ಪೋರ್ಟ್ ಸೇತುವೆ ಮೇಲೆ ಕುಳಿತುಕೊಳ್ಳಲು ಅಣಿಯಾದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

ಈ ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆದ್ರೆ ಅದರಲ್ಲಿ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೋ ಅಥವಾ ಸೇತುವೆಯ ಕಂಬಿ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದಾರೆಯೋ ಎಂಬುದು ಸರಿಯಾಗಿ ಗೋಚರಿಸುತ್ತಿಲ್ಲ. ಸದ್ಯ ಪೊಲೀಸರು ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

10 ಅಡಿ ಎತ್ತರದಿಂದ ಬಿದ್ದ ಚೈತನ್ಯ ಅವರ ತಲೆಗೆ ಗಂಭೀರ ಗಾಯಗೊಂಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಕೈಯಲ್ಲಿ ಯಾವುದೇ ಬ್ಯಾಗ್ ಹಾಗೂ ವಿಮಾನ ಟಿಕೆಟ್ ಇರಲಿಲ್ಲ. ಆದ್ರೆ ಚೈತನ್ಯ ಮೊಬೈಲ್ ನಲ್ಲಿ ಆನ್ ಲೈನ್ ಮೂಲಕ ಟಿಕೆಟ್ ಮಾಡಿದ್ದಾರೆಯೋ ಎಂಬುದಾಗಿಯೂ ತಿಳಿದುಬಂದಿಲ್ಲ. ಯಾಕಂದ್ರೆ ಘಟನೆಯಿಂದಾಗಿ ಅವರ ಕೈಯಲ್ಲಿದ್ದ ಐಫೋನ್ ಕೂಡ ನಜ್ಜುಗುಜ್ಜಾಗಿದೆ. 10 ಅಡಿ ಮೇಲಿಂದ ಬಿದ್ದ ರಭಸಕ್ಕೆ ಅವರ ಬಳಿಯಿದ್ದ ಇನ್ನೊಂದು ಫೋನ್ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರು ಮೃತ ವ್ಯಕ್ತಿಯ ಬಳಿಯಿದ್ದ ಐಡಿ ಕಾರ್ಡ್ ನ ಆಧರಿಸಿ ಅವರ ಮೃತನ ತಂದೆ ಜನಾರ್ದನ ರಾವ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಚೈತನ್ಯ ಪೋಷಕರು ಕೂಡಲೇ ವಿಜಯವಾಡದಿಂದ ಚೆನ್ನೈಗೆ ಆಗಮಿಸಿದ್ದಾರೆ. ಒಟ್ಟಿನಲ್ಲಿ ಚೈತನ್ಯ ಚೆನ್ನೈಗೆ ಯಾಕೆ ಬಂದಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ.

ಸದ್ಯ ವಿಮಾನ ನಿಲ್ದಾಣದ ಪೊಲೀಸರು ಐಪಿಸಿ ಸೆಕ್ಷನ್ 174(ಆಕಸ್ಮಿಕ ಸಾವು) ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *