ರಾಜ್ಯದಲ್ಲಿ ಕೊರೊನಾ ಪ್ರಕರಣದಲ್ಲಿ ಇಳಿಕೆ- 31,198 ಮಂದಿಯಲ್ಲಿ ಸೋಂಕು ಪತ್ತೆ, 50 ಜನ ಸಾವು

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯತ್ತ ಮುಖಮಾಡಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಇಳಿಕೆ ಆಗ್ತಿದೆ. ರಾಜ್ಯದಲ್ಲಿಂದು 1.49 ಲಕ್ಷ ಟೆಸ್ಟ್ ನಡೆಸಲಾಗಿದ್ದು, 31,198 ಕೇಸ್ ಬಂದಿದೆ. ಬೆಂಗಳೂರಿನಲ್ಲಿ 15,199 ಮಂದಿಗೆ ಸೋಂಕು ತಗುಲಿದೆ.

ಮೈಸೂರು, ತುಮಕೂರು, ಹಾಸನ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಒಂದು ಸಾವಿರಕ್ಕಿಂತ ಹೆಚ್ಚು ಪ್ರಕರಣ ನಮೂದಾಗಿವೆ. ಉಳಿದ ಕಡೆ ಸೋಂಕು ಕಡಿಮೆ ಆಗ್ತಾ ಇದೆ. ಆದ್ರೆ ಸಾವಿನ ಪ್ರಮಾಣ ಮಾತ್ರ ಕಡಿಮೆ ಆಗ್ತಿಲ್ಲ.. ಇವತ್ತು 50 ಮಂದಿ ಸೋಂಕಿಗೆ ಬಲಿ ಆಗಿದ್ದಾರೆ. ಬೆಂಗಳೂರು-ಮೈಸೂರಿನಲ್ಲಿ ತಲಾ 8 ಸೋಂಕಿತರು ಸಾವನ್ನಪ್ಪಿದ್ದಾರೆ. ಹಾಸನದಲ್ಲಿ ಐವರು, ದಕ್ಷಿಣ ಕನ್ನಡ ಮತ್ತು ತುಮಕೂರಿನಲ್ಲಿ ತಲಾ ನಾಲ್ವರು ಬಲಿ ಆಗಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

ಜನವರಿ 25ರಂದು ಏಳು ಮಂದಿ, ಜನವರಿ 26ರಂದು ಆರು ಮಂದಿ, ಜನವರಿ 27ರಂದು ಅಂದ್ರೆ ನಿನ್ನೆ ಒಬ್ಬರು ಸೋಂಕಿಗೆ ಬಲಿ ಆಗಿರುವುದನ್ನು ಇವತ್ತಿನ ಬುಲೆಟಿನ್‍ನಲ್ಲಿ ಉಲ್ಲೇಖಿಸಲಾಗಿದೆ. ಉಳಿದ 36 ಮಂದಿ ಜನವರಿ 9ರಿಂದ ಜನವರಿ 24ರವರೆಗೂ ಸಾವನ್ನಪ್ಪಿದವರಾಗಿದ್ದಾರೆ. ಸಮಾಧಾನದ ಸಂಗತಿ ಅಂದ್ರೆ ಚೇತರಿಸಿಕೊಂಡವರ ಸಂಖ್ಯೆ ಹೊಸ ಕೇಸ್‍ಗಿಂತ ದುಪ್ಪಟ್ಟಿದೆ. ಇಂದು ಬರೋಬ್ಬರಿ 71,092 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಕೇಸ್‍ಗಳ ಸಂಖ್ಯೆ 2.88 ಲಕ್ಷಕ್ಕೆ ಕುಸಿದಿದೆ.

ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ ಬಾಗಲಕೋಟೆ 187, ಬಳ್ಳಾರಿ 709, ಬೆಳಗಾವಿ 725, ಬೆಂಗಲೂರು ಗ್ರಾಮಾಂತರ 558, ಬೆಂಗಳೂರು ನಗರ 15,199, ಬೀದರ್ 194, ಚಾಮರಾಜನಗರ 618, ಚಿಕ್ಕಬಳ್ಳಾಪುರ 427, ಚಿಕ್ಕಮಗಳೂರು 283, ಚಿತ್ರದುರ್ಗ 192, ದಕ್ಷಿಣ ಕನ್ನಡ 516, ದಾವಣಗೆರೆ 186, ಧಾರವಾಡ 1,500, ಗದಗ 171, ಹಾಸನ 1037, ಹಾವೇರಿ 179, ಕಲಬುರಗಿ 406. ಕೊಡಗು 371, ಕೋಲಾರ 452, ಕೊಪ್ಪಳ 227, ಮಂಡ್ಯ 963, ಮೈಸೂರು 1877, ರಾಯಚೂರು 225, ರಾಮನಗರ 262, ಶಿವಮೊಗ್ಗ 509, ತುಮಕೂರು 1315, ಉಡುಪಿ 818, ಉತ್ತರ ಕನ್ನಡ 760, ವಿಜಯಪುರ 125, ಯಾದಗಿರಿ 207 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಇತ್ತ ದೇಶದಲ್ಲಿ ಕೋವಿಡ್ ಕಡಿಮೆ ಆಗ್ತಾ ಇದೆ. ಸತತ ನಾಲ್ಕನೇ ದಿನವೂ ಮೂರು ಲಕ್ಷದ ಒಳಗೆ ಕೋವಿಡ್ ಕೇಸ್ ವರದಿ ಆಗಿದೆ. ನಿನ್ನೆ 2.51 ಲಕ್ಷ ಮಂದಿಗೆ ಸೋಂಕು ತಗುಲಿದೆ. ಪಾಸಿಟಿವಿಟಿ ರೇಟ್ 15.88ಕ್ಕೆ ಇಳಿದಿದೆ. ಕೇರಳದಲ್ಲಿ ವರದಿ ಆಗ್ತಿರುವ ಪ್ರಕರಣಗಳಲ್ಲಿ ಶೇಕಡಾ 94ರಷ್ಟು ಒಮಿಕ್ರಾನ್ ತಳಿ ಕಂಡುಬಂದಿದೆ. ತಮಿಳುನಾಡು, ಆಂಧ್ರ, ಗುಜರಾತ್, ರಾಜಸ್ಥಾನದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿದೆ. ದೇಶದಲ್ಲಿ ಕೇಸ್ ಕಡಿಮೆಯಾದ್ರೂ ಮರಣಗಳು ಹೆಚ್ಚಿರೋದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ 627 ಮಂದಿ ಬಲಿ ಆಗಿದ್ದಾರೆ. ಇದ್ರಲ್ಲಿ 153 ಸಾವು ಕೇರಳದಲ್ಲಿಯೇ ಸಂಭವಿಸಿವೆ.

ಹೊಸ ಕೇಸ್‍ಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಿದೆ. ನಿನ್ನೆ 3.47 ಲಕ್ಷ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಕೇಸ್ 21 ಲಕ್ಷಕ್ಕೆ ಇಳಿದಿದೆ. ಇನ್ನು, ಕೋವಿಡ್ ನಿರೋಧಿಸಲು ಮೂಗಿನ ಮೂಲಕ ತೆಗೆದುಕೊಳ್ಳುವ ಕೊವ್ಯಾಕ್ಸಿನ್ ಇಂಟ್ರಾನಾಸಲ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲು ಅಂತಿಮ ಹಂತದ ಪ್ರಯೋಗ ನಡೆಸಲು ಭಾರತ್ ಬಯೋಟೆಕ್‍ಗೆ ಡಿಸಿಜಿಐ ಅನುಮತಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *