ಬಳ್ಳಾರಿ: ಸಾರಿಗೆ ಬಸ್ ಹರಿದ ಪರಿಣಾಮ 30 ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವದ್ದಟ್ಟಿ ಗ್ರಾಮದ ಬಳಿಯ ರಸ್ತೆಯಲ್ಲಿ ನಡೆದಿದೆ.
ಬೆಳಗಾವಿ ಮೂಲದ ಹೊನ್ನೂರಪ್ಪ ಅವರಿಗೆ ಸೇರಿದ ಕುರಿಗಳಾಗಿವೆ. ಹೊನ್ನೂರಪ್ಪ ಅವರು ಹೊಲ ಗದ್ದೆಗಳಲ್ಲಿ ಕುರಿಗಳಿಗೆ ಮೇವು ಮೇಯಿಸುತ್ತಿದ್ದರು. ಅಂತೆಯೇ ಇಂದು ಮುಂಜಾನೆ ನಸುಕಿನ ಜಾವದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕುರಿಗಳು ರಸ್ತೆ ದಾಟುತ್ತಿದ್ದವು.
ಈ ಸಂದರ್ಭದಲ್ಲಿ ಕುರುಗೋಡುನಿಂದ ಬಳ್ಳಾರಿಗೆ ಹೊರಟ್ಟಿದ್ದ ಸಾರಿಗೆ ಬಸ್ ಗೆ ಈ ಕುರಿಗಳು ಬಲಿಯಾಗಿವೆ. ಅತಿವೇಗ ಹಾಗೂ ಮಂಜು ಕವಿದ್ದರಿಂದ ದಾರಿ ಸರಿಯಾಗಿ ಕಾಣದೆ ಬಸ್ ಚಾಕಲನ ನಿಯಂತ್ರಣ ತಪ್ಪಿ ಏಕಾಏಕಿ ಕುರಿಗಳ ಮೇಲೆ ಹರಿದಿದೆ.
ಬಸ್ ಹರಿದ ಪರಿಣಾಮ 30 ಕ್ಕೂ ಹೆಚ್ಚು ಕುರಿಗಳು ಬಸ್ ನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳ ಕೆಳಗೆ ಸಿಲುಕಿ ಮೃತಪಟ್ಟಿವೆ. ಘಟನೆ ನಡೆದ ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.