ಎಟಿಎಂ ಹಲ್ಲೆಕೋರ ಸಿಕ್ಕಿ ಬಿದ್ದಿದ್ದು ಹೇಗೆ?

Public TV
1 Min Read

ಬೆಂಗಳೂರು: ಎಟಿಎಂ ಹಲ್ಲೆಕೋರ ಕೊನೆಗೂ ಸಿಕ್ಕಿದ್ದಾನೆ. ಮೂರು ವರ್ಷಗಳ ಕಾಲ ಬೆಂಗಳೂರು ಪೊಲೀಸರ ತಲೆ ತಿಂದಿದ್ದ ಆರೋಪಿಯನ್ನು ಆಂಧ್ರದ ಮದನಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಧುಕರ್ ರೆಡ್ಡಿ ಬಂಧಿತ ಆರೋಪಿ. ಜ.31 ರ ಸಂಜೆ ಮಧುಕರ ರೆಡ್ಡಿಯನ್ನು ಮದನಪಲ್ಲಿಯ ನಿಮ್ಮನಪಲ್ಲಿ ಸಂಚಾರಿ ಪೊಲೀಸರು ಗುರುತಿಸಿದ್ದರು. ಎಟಿಎಂ ಸಿಸಿಟಿವಿ ಫೋಟೋ ಗುರುತಿನ ಆಧಾರದಲ್ಲಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಆರಂಭಿಸಿದ್ದರು.

ವಿಚಾರಣೆಯ ಆರಂಭದಲ್ಲಿ ಅನುಮಾನಸ್ಪಾದವಾಗಿ ಮಾತನಾಡುತ್ತಿದ್ದ. ಮೂರು ದಿನಗಳಿಂದ ಸತತ ವಿಚಾರಣೆ ಬಳಿಕ ಬೆಂಗಳೂರಿನಲ್ಲಿ ಎಟಿಎಂ ಒಳಗಡೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದು ನಾನೇ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಧರ್ಮಾವರಂನಲ್ಲಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ಈತನ ಮೇಲೆ ಕಡಪ ಜೈಲಿನಿಂದ ಪರಾರಿಯಾಗಿದ್ದ ಪ್ರಕರಣ ದಾಖಲಾಗಿತ್ತು. ಹಿಂದೂಪುರ ಮತ್ತು ಮದನಪಲ್ಲಿ ಮಧುಕರ್ ರೆಡ್ಡಿ ವಾಸವಾಗಿದ್ದ ವಿಚಾರ ಈಗ ತಿಳಿದು ಬಂದಿದೆ.

ಆರಂಭದಲ್ಲಿ ಆರೋಪಿಯ ಮಾಹಿತಿಯನ್ನು ಪೊಲೀಸರು ಲೀಕ್ ಮಾಡಿರಲಿಲ್ಲ. ಕೊನೆಗೆ ಮಧುಕರ್ ರೆಡ್ಡಿಯೇ ಆರೋಪಿ ಎಂದ ಬಳಿಕ ಸ್ಪಷ್ಟನೆ ನೀಡಿದ್ದಾರೆ.

ಅಂದು ಏನಾಗಿತ್ತು?: 2013ರ ನವೆಂಬರ್ 19ರಂದು ಬೆಳಗ್ಗೆ ಬೆಂಗಳೂರಿನ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಅಪರಿಚಿತ ವ್ಯಕ್ತಿ ಎಲ್‍ಐಸಿ ಕಟ್ಟಡದಲ್ಲಿರುವ ಎಟಿಎಂನಲ್ಲಿ ಹಲ್ಲೆ ನಡೆಸಿದ್ದ.

ಹಲ್ಲೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೃತ್ಯ ನಡೆದು 3 ವರ್ಷ ಕಳೆದಿದ್ದರೂ ಆರೋಪಿ ಸಿಕ್ಕಿರಲಿಲ್ಲ. ಹಲ್ಲೆಯಿಂದ ಗಾಯಗೊಂಡಿದ್ದ ಜ್ಯೋತಿ ಉದಯ್ ಅವರು ಕೆಲವು ತಿಂಗಳ ಕಾಲ ಚಿಕಿತ್ಸೆ ಪಡೆದು, ಗುಣಮುಖರಾಗಿ ಬ್ಯಾಂಕಿನಲ್ಲಿ ಕೆಲಸ ಮುಂದುವರಿಸಿದ್ದಾರೆ. ಆರೋಪಿಯ ಬಗ್ಗೆ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *