– ಭಾರತವನ್ನು ಮೊದಲು ಮುಸ್ಲಿಂ ರಾಜರೇ ಆಳುತ್ತಿದ್ದರು
– ಮತ್ತೆ ಭಾರತ ನಮ್ಮ ಕೈ ಸೇರಬೇಕು
– ಕಾರ್ಯಕರ್ತರಿಗೆ ತಿರುಚಿತ ಪಠ್ಯ ಬೋಧನೆ
ಬೆಂಗಳೂರು: ದಕ್ಷಿಣ ಕನ್ನಡದ ಮಿತ್ತೂರು ಅಲ್ಲದೇ ಸತ್ಯಮಂಗಲ ಕಾಡಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ತರಬೇತಿ ನೀಡುತ್ತಿದ್ದ ಸ್ಫೋಟಕ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಬೆಂಗಳೂರು ಪೊಲೀಸರು(Bengaluru Police) ಬಂಧನಕ್ಕೆ ಒಳಗಾದ ಆರೋಪಿಗಳನ್ನು ಸತ್ಯಮಂಗಲ(Sathyamangalam) ಅರಣ್ಯದಲ್ಲಿ ಸ್ಥಳ ಮಹಜರ್ ಮಾಡಿಸಿದ್ದಾರೆ. ಎ1 ಆರೋಪಿ ಸೇರಿದಂತೆ ನಾಲ್ವರನ್ನು ಕರೆದೊಯ್ದು ಸ್ಪಾಟ್ ಮಹಜರು ನಡೆಸಲಾಗಿದೆ. ಅರಣ್ಯದ ಬಳಿ ಇರುವ ರೆಸಾರ್ಟ್ನಲ್ಲಿ ಕಾರ್ಯಕರ್ತರು ಉಳಿದುಕೊಳ್ಳುತ್ತಿದ್ದರು. ಹೀಗಾಗಿ ಆ ರೆಸಾರ್ಟ್ ಅನ್ನು ಸಹ ಮಹಜರ್ ಮಾಡಲಾಗಿದೆ.
ಮೂರು ಹಂತದಲ್ಲಿ ತರಬೇತಿ
ಪುತ್ತೂರಿನ ಮಿತ್ತೂರು ತರಬೇತಿ ರಹಸ್ಯವನ್ನು ಬೇಧಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಪಿಎಫ್ಐ ಆರ್ಎಸ್ಎಸ್ ಅನ್ನೇ ಟಾರ್ಗೆಟ್ ಮಾಡಿ ಮೂರು ಹಂತದಲ್ಲಿ ತರಬೇತಿ ನೀಡುತ್ತಿತ್ತು. ಮಾರ್ಷಲ್ ಆರ್ಟ್ಸ್, ಡಿಫೆನ್ಸಿವ್ ಹಾಗೂ ಅಟ್ಯಾಕಿಂಗ್ ಟ್ಯಾಕ್ಟಿಕ್ಸ್ ಹೀಗೆ ಮೂರು ರೀತಿ ತರಬೇತಿಯನ್ನು ಕಾರ್ಯಕರ್ತರಿಗೆ ನೀಡಲಾಗುತ್ತಿತ್ತು ಎಂಬ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ವ್ಯಕ್ತಿಗಳನ್ನು ಹತ್ಯೆ ಮಾಡುವವರಿಗೆ ಮಾತ್ರ ಅಟ್ಯಾಕಿಂಗ್ ಟ್ಯಾಕ್ಟಿಕ್ಸ್ ತರಬೇತಿ ನೀಡಲಾಗುತ್ತಿತ್ತು. ಡಿಫೆನ್ಸಿವ್ ಹಾಗೂ ಮಾರ್ಷಲ್ ಆರ್ಟ್ಸ್ ಕೋಮು ಗಲಭೆ ಸೃಷ್ಟಿಸುವಂತಹ ಕೇಡರ್ಗಳಿಗೆ ಟ್ರೈನಿಂಗ್ ನೀಡಲಾಗುತ್ತಿತ್ತು.
ಹಲವು ಬ್ಯಾಚ್ಗಳಿಗೆ ಈಗಾಗಲೇ ಟ್ರೈನಿಂಗ್ ನೀಡಿರುವುದು ಗೊತ್ತಾಗಿದೆ. ಹಿಂದೂವೊಬ್ಬರ ಹೆಸರಲ್ಲಿ ಕಮ್ಯುನಿಟಿ ಹಾಲ್ ಖರೀದಿ ಮಾಡಿ ನಂತರ ರಿಹಾಬ್ ಇಂಡಿಯಾ ಫೌಂಡೇಷನ್ಗೆ ದಾನ ಪತ್ರ ಮಾಡಲಾಗಿದೆ. ಕಳೆದ 14 ವರ್ಷದಿಂದ ಟ್ರೈನಿಂಗ್ ಕ್ಯಾಂಪ್ ನಡೆಯುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ತರಬೇತಿಯಲ್ಲಿ ಬೋಧನೆ ಏನಿತ್ತು?
ಇರಾನ್ನಿಂದ ಅಫ್ಘಾನಿಸ್ತಾನ, ಭಾರತದವರೆಗೆ ಮುಸ್ಲಿಂ ರಾಜರೇ ಆಡಳಿತ ನಡೆಸುತ್ತಿದ್ದರು. ಈಗ ದೇಶ ನಮ್ಮ ಕೈ ತಪ್ಪಿ ಹೋಗಿದೆ. ಮತ್ತೆ ನಾವು ಭಾರತವನ್ನು ವಶಕ್ಕೆ ಪಡೆಯಬೇಕು ಎಂದು ಇತಿಹಾಸದ ಬಗ್ಗೆ ಯುವಕರಿಗೆ ತಿರುಚಿದ ಪಠ್ಯವನ್ನು ಬೋಧಿಸಲಾಗುತ್ತಿತ್ತು. ಹಿಂದೆ ಭಾರತವನ್ನು ನಮ್ಮವರೇ ಆಳಿದ್ದು, ಮುಂದೆ ನಾವೇ ಆಳಬೇಕು. ಇತಿಹಾಸಲ್ಲಿ ನಮ್ಮ ರಾಜರು ಮಾಡಿದ್ದನ್ನು ನಾವು ಪುನರಾವರ್ತಿಸಬೇಕು ಎಂದು ತರಬೇತಿಯಲ್ಲಿ ಪಾಠ ಮಾಡಲಾಗುತ್ತಿತ್ತು.
ಮೊಬೈಲ್ ಸಾಕ್ಷ್ಯ:
ಕೆಜಿ ಹಳ್ಳಿ ಪೊಲೀಸರಿಂದ ಬಂಧಿತರಾದ 15 ಮಂದಿಯ ಮೊಬೈಲ್ ಡೇಟಾ ರಿಟ್ರೀವ್ ಮಾಡಲಾಗಿದ್ದು, 1 ಸಾವಿರ ಜಿಬಿಯಷ್ಟು ಡೇಟಾ ಸಿಕ್ಕಿದೆ. ಮೊಬೈಲ್ನಲ್ಲಿ ಮಂಗಳೂರು, ಕೇರಳದಲ್ಲಿ ನಡೆದ ಕೇಡರ್ ಟ್ರೈನಿಂಗ್ ಫೋಟೋಗಳು ಲಭ್ಯವಾಗಿದೆ.
20 ಮಂದಿ ಬ್ಯಾಚಗಳನ್ನು ಮಾಡಿ ಟ್ರೈನಿಂಗ್ ಕೊಡಲಾಗಿದೆ. ಸಂಘಟನೆಯ ಗೌಪ್ಯ ವಿಚಾರಗಳು ಟ್ರೈನಿಂಗ್, ಹೀಗೆ ಎಲ್ಲವೂ ವಾಟ್ಸಾಪ್ ಚಾಟ್ ನಲ್ಲಿ ಚರ್ಚೆ ಮಾಡಲಾಗುತ್ತಿತ್ತು. ಹಿಜಬ್ ವಿವಾದದ ಬಳಿಕ ಈ ರೀತಿಯ ಚರ್ಚೆಗಳು ಹೆಚ್ಚು ನಡೆಯುತ್ತಿತ್ತು. ಎಲ್ಲಾ ಚರ್ಚೆಗಳು ಮುಗಿದ ಬಳಿಕ ಐ ಶ್ರೇಡರ್ ಆ್ಯಪ್ ಮೂಲಕ ಎಲ್ಲಾ ಚಾಟ್ಗಳನ್ನು ಡಿಲೀಟ್ ಮಾಡಲಾಗುತ್ತಿತ್ತು. ಇದನ್ನೂ ಓದಿ: ಮುಂದಿನ 24 ಗಂಟೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಬಂಧಿತರ ಮೊಬೈಲ್ನಲ್ಲಿ ಆರ್ಎಸ್ಎಸ್ ಹಾಗೂ ಕಟ್ಟರ್ ಹಿಂದೂ ಮುಖಂಡರ ಭಾಷಣಗಳು ಲಭ್ಯವಾಗಿದೆ. 11 ಹಿಂದೂ ಮುಖಂಡರ ವೀಡಿಯೊಗಳನ್ನ ಶೇರ್ ಕೂಡ ಮಾಡಿದ್ದರು. ಇಸ್ಲಾಂ ಧರ್ಮದ ಬಗ್ಗೆ ಪ್ರಚೋದನಕಾರಿ ಭಾಷಣದ ವೀಡಿಯೋಗಳನ್ನು ಮಾರ್ಕ್ ಮಾಡಿ ಎಂಟು ಮಂದಿ ಶೇರ್ ಮಾಡಿದ್ದರು.
ದಿನದಿಂದ ದಿನಕ್ಕೆ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಹೊರ ಬರುತ್ತಲೇ ಇದೆ. ಪೊಲೀಸ್ ಕಸ್ಟಡಿ ಮುಗಿಯುವ ಒಳಗಡೆ ಮತ್ತೊಂದಿಷ್ಟು ಭಯಾನಕ ಸಂಗತಿಗಳು ಹೊರಬಂದರೂ ಆಶ್ಚರ್ಯ ಪಡಬೇಕಿಲ್ಲ.