ಆರೇಳು ಬಾರಿ ಸೋಂಕಿತರ ಮನೆಯ ಸುತ್ತಮುತ್ತ ಓಡಾಡಿದ್ದ ಇಬ್ಬರಿಗೆ ಕೊರೊನಾ

Public TV
2 Min Read

– ಬೆಂಗ್ಳೂರಿಗೆ ಪಾದರಾಯನಪುರ ಕಂಟಕ
– ದೀಪಾಂಜಲಿ ನಗರದ ವೃದ್ಧನಿಗೆ ಕೊರೊನಾ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಪಾದರಾಯನಪುರದ ಕೊರೊನಾ ಸೋಂಕು ಕಂಟಕ ತರುತ್ತಾ ಎನ್ನುವ ಅನುಮಾನ ಶುರುವಾಗಿದೆ.

ಹೌದು. ಸೋಂಕಿತರ ಮನೆಯ ಸುತ್ತಮುತ್ತ ಆರೇಳು ಬಾರಿ ಓಡಾಡಿದ್ದ ಇಬ್ಬರಿಗೆ ಕೊರೊನಾ ತಗುಲಿರುವುದು ಇಂದು ದೃಢಪಟ್ಟಿದೆ. ಪಾದರಾಯನಪುರದಲ್ಲಿ ರ್‍ಯಾಂಡಮ್ ಟೆಸ್ಟ್ ನಡೆಸಲಾಗುತ್ತಿದ್ದು, 29 ಜನರ ಗಂಟಲ ದ್ರವ  ಹಾಗೂ ರಕ್ತದ ಮಾದರಿಯನ್ನು ಲ್ಯಾಬ್‍ಗೆ ಕಳಿಸಲಾಗಿತ್ತು. ಈ ಪರೀಕ್ಷೆಯಲ್ಲಿ 6ನೇ ಕ್ರಾಸ್ ಮತ್ತು 8ನೇ ಕ್ರಾಸ್‍ನ ಇಬ್ಬರಿಗೆ ಕೊರೊನಾ ಪತ್ತೆಯಾಗಿದೆ.

20 ವರ್ಷದ ಯುವಕ ರೋಗಿ-554 ಹಾಗೂ 28 ವರ್ಷದ ಪುರುಷ ರೋಗಿ-555 ಇಬ್ಬರೂ ಕಂಟೈನ್‍ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು. ಸೋಂಕಿತರ ಮನೆಯ ಸುತ್ತಮುತ್ತ ಓಡಾಡಿದ್ದ ಇಬ್ಬರಿಗೂ ಉಸಿರಾದ ಸಮಸ್ಯೆ, ನೆಗಡಿ, ಕೆಮ್ಮು ಆರಂಭವಾಗಿತ್ತು. ಬಳಿಕ ಇವರನ್ನು ರ್‍ಯಾಂಡಮ್ ಟೆಸ್ಟ್‌ಗೆ ಒಳಪಡಿಸಿದಾಗ ಕೊರೊನಾ ದೃಢಪಟ್ಟಿದೆ.

ಪಾದರಾಯನಪುರವು ಬೆಂಗಳೂರಿಗೆ ಕಂಟಕವಾಗುತ್ತಿದೆ ಎಂಬ ಅನುಮಾನ ಶುರುವಾಗಿದೆ. ಈ ಮೊದಲು ನಿಜಾಮುದ್ದೀನ್‍ನಿಂದ ಬಂದ ವ್ಯಕ್ತಿಯಿಂದ ಕೊರೊನಾ ಸೋಂಕು ಪ್ರಾರಂಭವಾಗಿತ್ತು. ಇಂದು ಸಮುದಾಯದ ಮಟ್ಟಕ್ಕೆ ಬಂದಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಲಾಕ್‍ಡೌನ್, ಸೀಲ್‍ಡೌನ್ ಏನೇ ಮಾಡಿದ್ರೂ ಜನ ಮಾತ್ರ ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗೆ ಮನೆಯಿಂದ ಹೊರ ಬಂದು ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ರೋಗಿ-557: ದೀಪಾಂಜಲಿ ನಗರದ ನಿವಾಸಿ 63 ವರ್ಷದ ವೃದ್ಧನಿಗೆ ಇಂದು ಸೋಂಕು ದೃಢಪಟ್ಟಿದೆ. ಯಾರಿಂದ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮೃತ ಮಹಿಳೆ ರೋಗಿ-465ರಿಂದ ಸೋಂಕು ಬಂದಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆಯು ವೃದ್ಧನ ದೂರದ ಸಂಬಂಧಿ ಎನ್ನಲಾಗುತ್ತಿದೆ.

ಕಳೆದ 10 ದಿನಗಳಿದ ವೃದ್ಧನಿಗೆ (ರೋಗಿ-557) ಉಸಿರಾಟದ ಸಮಸ್ಯೆ ಇತ್ತು. ಟೆಸ್ಟ್ ಮಾಡಿಸಿದಾಗ ಸೋಂಕು ಪತ್ತೆಯಾಗಿದೆ. ಈ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೃತ ಮಹಿಳೆ (ರೋಗಿ-465) ಪ್ರಯಾಣದ ಹಿನ್ನಲೆ ಬೆಂಗಳೂರಿಗರನ್ನು ಬೆಚ್ಚಿಬೀಳಿಸುವಂತಿದೆ. ನೆಗಡಿ, ಕೆಮ್ಮು, ಶೀತ ಜ್ವರದಿಂದ ಬಳಲುತ್ತಿದ್ದ ಮಹಿಳೆಯ ಪತಿ ಏಪ್ರಿಲ್ 2ರಂದು ಮೃತಪಟ್ಟಿದ್ದ. ಹೀಗಾಗಿ ಕುಟುಂಬವು ಟಿ.ಆರ್ ಮಿಲ್‍ನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿತ್ತು. 10 ದಿನದ ಬಳಿಕ ಮಹಿಳೆಗೂ ನೆಗಡಿ, ಕೆಮ್ಮು, ಶೀತ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ರಾಜಾಜಿನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ ಮಹಿಳೆಯು ಹಂಪಿನಗರದಿಂದ ದೀಪಾಂಜಲಿ ನಗರದ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದರು.

ಮಹಿಳೆಯ ಸಂಪರ್ಕದಲ್ಲಿದ್ದ ಆಕೆಯ ಅಕ್ಕ, ಮಗ ಮತ್ತು ಅಳಿಯನಿಗೆ (ರೋಗಿ-498, 499 ಹಾಗೂ 500) ಸೋಂಕು ತಗುಲಿದೆ. ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಮೃತ ಮಹಿಳೆಯು ಹಂಪಿನಗರ, ದೀಪಾಂಜಲಿ ನಗರ ಮತ್ತು ಮೂಡಲ ಪಾಳ್ಯದಲ್ಲಿ ಓಡಾಡಿದ್ದಳು. ಹೀಗಾಗಿ ಈ ಮೂರೂ ಪ್ರದೇಶಗಳಲ್ಲಿ ಹೆಮ್ಮಾರಿ ಕಂಟಕ ಉಂಟು ಮಾಡುವ ಲಕ್ಷಣಗಳು ಕಂಡುಬರುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *