ರಸ್ತೆ ಬದಿ ಕುಳಿತಿದ್ದವರ ಮೇಲೆ ಕಾರು ಹರಿದು ಮೂವರ ದುರ್ಮರಣ

Public TV
1 Min Read

ಯಾದಗಿರಿ: ರಸ್ತೆ ಬದಿ ಕುಳಿತಿದ್ದ ಪ್ರಯಾಣಿಕರ ಮೇಲೆ ಕಾರು ವೇಗವಾಗಿ ಬಂದು ಹರಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಬಬಲಾದ ಕ್ರಾಸ್ ಹತ್ತಿರ ಭಾನುವಾರದಂದು ನಡೆದಿದೆ.

ಯಾದಗಿರಿಯಿಂದ ಶಿವನೂರಗೆ ಹೋಗುತ್ತಿದ್ದ ಬಸ್ ನಲ್ಲಿ ಪ್ರಯಾಣಿಕರು ಊರಿಗೆ ತೆರಳುತ್ತಿದ್ದರು. ಈ ವೇಳೆ ಬಬಲಾದ ಕ್ರಾಸ್ ಹತ್ತಿರ ಬಸ್ ಕೆಟ್ಟುಹೋದ ಪರಿಣಾಮ ರಸ್ತೆ ಬದಿ ಬಸ್ ನಿಲ್ಲಿಸಲಾಗಿತ್ತು. ಹೀಗಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ರಸ್ತೆ ಬದಿ ಕುಳಿತಿದ್ದರು. ಯಾದಗಿರಿಯಿಂದ ಕಾರೊಂದು ವಡಗೇರಾ ಮಾರ್ಗವಾಗಿ ವೇಗವಾಗಿ ತೆರಳುತ್ತಿತ್ತು. ಈ ವೇಳೆ ವಡಗೇರಾ ಮಾರ್ಗದಿಂದ ಮತ್ತೊಂದು ಸ್ವಿಫ್ಟ್ ಕಾರು ಯಾದಗಿರಿಗೆ ಬರುತ್ತಿತ್ತು. ಯಾದಗಿರಿಯಿಂದ ವಡಗೇರಾ ಕಡೆ ತೆರಳುತ್ತಿದ್ದ ಕಾರು ಮೊದಲು ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಪಕ್ಕ ಕುಳಿತಿದ್ದ ಪ್ರಯಾಣಿಕರ ಮೇಲೆ ಕಾರು ಹರಿದಿದೆ. ಪರಿಣಾಮ ಸ್ಥಳದಲ್ಲಿಯೇ ಕಂದಳ್ಳಿ ಗ್ರಾಮದ ಈರಮ್ಮ(40) ಮೃತಪಟ್ಟಿದ್ದಾರೆ.

ಗಾಯಗೊಂಡವರನ್ನು ಸಮೀಪದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಲಾಗಿತ್ತು. ಆದ್ರೆ ವೈದ್ಯರು ಬೇಗ ಚಿಕಿತ್ಸೆ ನೀಡದ ಹಿನ್ನಲೆ ಆಸ್ಪತ್ರೆಯಲ್ಲಿ ಕಂದಳ್ಳಿ ನಿವಾಸಿಗಳಾದ ಸಚೀನ್ ಪೆÇಲೀಸ್ ಪಾಟೀಲ (7) ಹಾಗೂ ಶ್ಯಾಮುವೇಲ್ (38) ಸಾವನ್ನಪ್ಪಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದ ಆಸ್ಪತ್ರೆಯಲ್ಲಿ ಇಬ್ಬರು ಗಾಯಗೊಂಡವರು ಮೃತಪಟ್ಟಿದ್ದಾರೆ. ವೈದ್ಯರು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ರೆ ಬದುಕುಳಿಯುತ್ತಿದ್ದರು ಎಂದು ಆಕ್ರೋಶಗೊಂಡ ಮೃತರ ಸಂಬಂಧಿಕರು ಆಸ್ಪತ್ರೆಯಲ್ಲಿ ಗಲಾಟೆ ನಡೆಸಿ ನಂತರ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಗೊಂಡಿರುವ 6 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಎಸ್‍ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *