ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ – ಷರತ್ತಿನ ಅರಿವಿದೆ, ಮುಂದಾಲೋಚನೆಯಿಂದ ಟೆಂಡರ್ ಆಹ್ವಾನ: ಎಂ.ಬಿ ಪಾಟೀಲ್‌

2 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು `ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್’ನ (ಬಿಐಎಎಲ್) ಅನುಮತಿ ಬೇಕೆನ್ನುವುದು ನಮ್ಮ ಅರಿವಿನಲ್ಲಿದೆ. ಇದಕ್ಕೆ 2033ರವರೆಗೂ ಕಾಲಾವಕಾಶವಿದೆ. ಹೀಗಾಗಿಯೇ, ದೂರದೃಷ್ಟಿ ಇಟ್ಟುಕೊಂಡು ಈಗಿನಿಂದಲೇ ಉಳಿದ ಕೆಲಸಗಳನ್ನು ನಾವು ಆರಂಭಿಸಿದ್ದೇವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್‌ (MB Patil)  ಹೇಳಿದ್ದಾರೆ.

ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕುರಿತು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪವಾಗಿರುವ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ದೇವನಹಳ್ಳಿಯ ಸಮೀಪದಲ್ಲಿ ಈಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಕ್ರಿಯವಾಗಿದೆ. ಇದು ಆರಂಭವಾಗುವಾಗಲೇ 2033ರವರೆಗೂ 150 ಕಿ.ಮೀ. ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಬಾರದೆಂಬ ಷರತ್ತು ಇದೆ. ಏತನ್ಮಧ್ಯೆ ಹೊಸದೆಹಲಿ ಮತ್ತು ನವೀ ಮುಂಬೈಗಳಲ್ಲಿ ಇಂತಹ ಷರತ್ತುಗಳನ್ನು ಸಡಿಲಿಸಿ, ಎರಡನೆಯ ಏರ್‌ಪೋರ್ಟುಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಸಂದರ್ಭ ನೋಡಿಕೊಂಡು ಬಗೆಹರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:AI ದುರ್ಬಳಕೆ – ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿಗೂ ತಪ್ಪದ ಡೀಪ್‌ಫೇಕ್‌ ಕಾಟ

ಒಂದು ವಿಮಾನ ನಿಲ್ದಾಣ ಆಗಬೇಕೆಂದರೆ ಸ್ಥಳದ ಆಯ್ಕೆ, ಅದರ ಪರಿಶೀಲನೆ, ಭೂಸ್ವಾಧೀನ, ಪರಿಹಾರ ವಿತರಣೆ ಮುಂತಾದ ಅಂಶಗಳು ಮುಖ್ಯವಾಗುತ್ತವೆ. ಇವೆಲ್ಲವನ್ನೂ ಮುಗಿಸಿಕೊಳ್ಳಲು ಏನಿಲ್ಲವೆಂದರೂ ಐದಾರು ವರ್ಷಗಳು ಬೇಕಾಗುತ್ತವೆ. ಜೊತೆಗೆ ಬಿಐಎಎಲ್ ಅನುಮತಿ ಬೇಕಾಗುವುದು ಇವೆಲ್ಲ ಮುಗಿದ ಮೇಲೆ ಇದೆಲ್ಲ ಸಾಧ್ಯ. ಹೀಗಾಗಿಯೇ ಈಗ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಸ್ಥಳದ ಅನುಕೂಲ, ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿಯ ಉದ್ದೇಶಕ್ಕಾಗಿ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.

ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು 5 ತಿಂಗಳ ಕಾಲಾವಕಾಶ ಕೊಡಲಾಗುವುದು. ಇದನ್ನು ಸಿದ್ಧಪಡಿಸುವಾಗ ಪ್ರಯಾಣಿಕರ ದಟ್ಟಣೆ, ಕೈಗಾರಿಕೆ, ಪ್ರವಾಸೋದ್ಯಮ ಬೆಳವಣಿಗೆಗೆ ಇರುವ ಅವಕಾಶ, ಮೂಲಸೌಕರ್ಯ, ಭೌಗೋಳಿಕ ಲಕ್ಷಣಗಳು, ಮಳೆಯ ಪ್ರಮಾಣ, ಒಳಚರಂಡಿ, ಶಬ್ದ ಮಾಲಿನ್ಯ ಹಾಗೂ ತ್ಯಾಜ್ಯ ನಿರ್ವಹಣೆ ಮುಂತಾದ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಏನೇ ಇದ್ದರೂ ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವಿದೆ ಎಂಬುದನ್ನು ಸರ್ಕಾರ ಮನಗಂಡಿದೆ ಎಂದು ಸ್ಪಷ್ಟಪಡಿಸಿದರು.

ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ, ಸೋಮನಹಳ್ಳಿ ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಇರುವ ಮತ್ತೊಂದು ಸ್ಥಳವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ತಂಡ ಪರಿಶೀಲಿಸಿ, ತನ್ನ ವರದಿಯನ್ನು ನಮಗೆ ನೀಡಿದೆ. ಇದಾದ ನಂತರವೇ ಈಗ ಟೆಂಡರ್ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿಕೆಶಿ ಮರುಪ್ರಶ್ನೆ

Share This Article