ಹಾಸನ: ಕೇವಲ 10 ಕೋಟಿಗೆ 250 ಎಕರೆ ಖರೀದಿ ಮಾಡಿ ಕಂಪೆನಿಯೊಂದು ಸರ್ಕಾರಕ್ಕೆ ಭಾರೀ ವಂಚನೆ ಮಾಡಿದೆ ಎಂದು ಸಚಿವ ರೇವಣ್ಣ ಆರೋಪಿಸಿದ್ದು, ಶೀಘ್ರವಾಗಿ ಈ ಕುರಿತು ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ, ವಿದೇಶಿ ಬ್ಯಾಂಕ್ ನಿಂದ ನೂರು ಕೋಟಿ ಸಾಲ ಪಡೆದಿರುವ ಉದ್ಯಮಿಯೊಬ್ಬ ಕೈಗಾರಿಕಾ ಉದ್ದೇಶಕ್ಕಾಗಿ ಜಮೀನು ಪಡೆದು ಈವರೆಗೂ ಕೈಗಾರಿಕೆಯನ್ನು ಆರಂಭಿಸಿಲ್ಲ. ಈ ಭೂಮಿಗೆ ಸಿಗಬಹುದಾದ ಸಾಲ ಕೇವಲ 7 ಕೋಟಿ ರೂಪಾಯಿ. ಆದರೆ ಉದ್ಯಮಿ ಪಡೆದ ಸಾಲ ನೂರು ಕೋಟಿ ರೂಪಾಯಿ. ಆದರೂ ಜನರಿಗೆ ಉದೋಗ್ಯವಕಾಶಕೊಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಾಸನದ ವಿಶೇಷ ಆರ್ಥಿಕ ವಲಯ ಹೆಸರಿನಲ್ಲಿ ಮಹಾಮೋಸ ನಡೆಯುತ್ತಿದ್ದು, ಆಪ್ಟೋ ಇನ್ಫಾಸ್ಟ್ರಕ್ಚರ್ ಹೆಸರಿನ ಕಂಪನಿ ಮತ್ತು ಹಿಮ್ಮತ್ಸಿಂಕಾ ಎನ್ನುವ ಕಂಪನಿಗಳ ವಿರುದ್ಧ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.
ಕಳೆದ 8 ವರ್ಷಗಳಿಂದ 300 ಎಕರೆ ಭೂಮಿಯನ್ನು ಪಡೆದು ತರಬೇತಿ ನೀಡುವುದಾಗಿ ಸರ್ಕಾರದಿಂದ 500 ಕೋಟಿ ಸಹಾಯಧನ ಪಡೆದು ವಂಚಿಸಲಾಗಿದೆ. ಅಧಿಕಾರಿಗಳೂ ಇಲ್ಲಿ ಕಣ್ಣು ಮುಚ್ಚಿ ಕುಳಿತಿದ್ದಾರೆ. ಪ್ರಮುಖ ಇಲಾಖೆಯ ಅಧಿಕಾರಿ, ಕೈಗಾರಿಕಾ ಇಲಾಖೆಯಲ್ಲೇ ದಂಧೆ ನಡೆಯುತ್ತಿದೆ. ಸೂಕ್ತ ತನಿಖೆ ನಡೆಸಿ ಎಲ್ಲರನ್ನ ಬಲಿಹಾಕುತ್ತೇನೆ ಎಂದ ಸಚಿವರು, ಅಧಿಕಾರ ಇರುತ್ತದೆ ಹೋಗುತ್ತದೆ. ಆದರೆ ತಮ್ಮ ಜಮೀನು ಕಳೆದುಕೊಂಡವರಿಗೆ ನ್ಯಾಯ ಸಿಗಬೇಕು ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv