ಮೋದಿ ಮೇಲೆ ರಾಸಾಯನಿಕ ದಾಳಿ- ಎಚ್ಚರಿಕೆ ನೀಡಿದ 22ರ ಯುವಕನ ಬಂಧನ

Public TV
1 Min Read

ಮುಂಬೈ: ನ್ಯಾಷನಲ್ ಸೆಕ್ಯುರಿಟಿ ಗಾರ್ಡ್(ಎಸ್‍ಎಸ್‍ಜಿ) ಗೆ ಕರೆ ಮಾಡಿ ಮೋದಿ ಮೇಲೆ ರಾಸಾಯನಿಕ ದಾಳಿ ನಡೆಯುತ್ತದೆ ಅಂತ ಎಚ್ಚರಿಕೆ ನೀಡಿದ 22 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ.

ಕಾಶಿನಾಥ್ ಮಂದಲ್ ಬಂಧಿತ ಯುವಕನಾಗಿದ್ದು, ಈತ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಸದ್ಯ ಯುವಕನನ್ನು ಜುಲೈ 27ರಂದು ಮುಂಬೈ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:
ಮಂದಲ್ ದೆಹಲಿಯಲ್ಲಿರೋ ಎನ್‍ಎಸ್‍ಜಿ ಕಂಟ್ರೋಲ್ ರೂಮ್ ನ ನಂಬರ್ ಪಡೆದುಕೊಂಡು ಶುಕ್ರವಾರ ಕರೆ ಮಾಡಿದ್ದಾನೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇಂದು ರಾಸಾಯನಿಕ ದಾಳಿ ನಡೆಯತ್ತದೆ ಎಚ್ಚರಿಕೆ ನೀಡಿದ್ದನು. ಕೂಡಲೇ ಅಧಿಕಾರಿಗಳು ಆ ನಂಬರ್ ಟ್ರ್ಯಾಕ್ ಮಾಡಿದ್ದಾರೆ. ನಂತರ ಮುಂಬೈ ಪೊಲೀಸರಿಗೆ ಕರೆ ಮಾಡಿ ಮಾಹಿತಿ ರವಾನಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಆ ನಂಬರ್ ಟ್ರೇಸ್ ಮಾಡಿದ್ದಾರೆ. ವ್ಯಕ್ತಿಯನ್ನು ಮಂದಲ್ ಎಂದು ಗುರುತಿಸಿ, ಜಾರ್ಖಂಡ್ ಮೂಲದವನು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಕೂಡಲೇ ಅವರು ಮುಂಬೈ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ತೆರಳಿ ಆತನನ್ನು ಸೆರೆಹಿಡಿದಿದ್ದಾರೆ. ಪೊಲೀಸರು ಬಂಧಿತನ ವಿಚಾರಣೆ ನಡೆಸಿದಾಗ, ಓಂ ಸೆಕ್ಯುರಿಟಿ ಸರ್ವಿಸ್ ನಲ್ಲಿ ಸುಮಾರು 7 ತಿಂಗಳಿಂದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದೆ. ಕಳೆದ ರಾತ್ರಿಯಷ್ಟೇ ನಾನು ಕೆಲಸ ಬಿಟ್ಟಿದ್ದೇನೆ ಎಂದು ಹೇಳಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ತಂಡ(ಎಟಿಎಸ್) ಬಂಧಿತ ಮಂದಲ್ ನನ್ನು ವಿಚಾರಣೆ ನಡೆಸಿದಾಗ, ಗೂಗಲ್ ಸರ್ಚ್ ಮಾಡಿ ನಾನು ಎನ್‍ಎಸ್‍ಜಿ ನಂಬರ್ ಪಡೆದುಕೊಂಡೆ. ಸಮಾರಂಭದಲ್ಲಿ ಭಯ ಹುಟ್ಟಿಸುವಂತಹ ಕೆಲಸ ಮಾಡುವ ಉದ್ದೇಶದಿಂದ ಈ ರೀತಿ ಮಾಡಿದ್ದೇನೆ. ಅಲ್ಲದೇ ಪೊಲೀಸರು ನನ್ನನ್ನು ಟ್ರೇಸ್ ಮಾಡುತ್ತಾರೆ ಅಂತ ಗೊತ್ತಿತ್ತು ಅಂತ ಹೇಳಿದ್ದಾನೆ.

ಮಂದಲ್ ತಾನು ನೆಲೆಸಿದ್ದ ಗ್ರಾಮವನ್ನು ಬಿಟ್ಟು ಬೇರೆ ಕಡೆ ಹೋಗಲು ಮುಂಬೈ ರೈಲ್ವೇ ನಿಲ್ದಾಣದಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ. ಸದ್ಯ ಬಂಧಿತ ಮಂದಲ್ ನಿಂದ ಮೊಬೈಲ್ ವಶಪಡಿಸಿಕೊಂಡು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *