ಪೊಲೀಸ್‌ ಜೀಪನ್ನೇ ಪಲ್ಟಿ ಮಾಡಿದ್ದ ಹುಬ್ಬಳ್ಳಿ ಗಲಭೆಕೋರರು ಅಮಾಯಕರೇ? – ಕೇಸ್ ವಾಪಸ್‌ಗೆ ಸರ್ಕಾರದ ಅರ್ಜಿ

Public TV
2 Min Read

– ಮತಾಂಧರ ಮೇಲ್ಯಾಕೆ ಪ್ರೀತಿ : ಬಿಜೆಪಿ ಆಕ್ರೋಶ

ಬೆಂಗಳೂರು: ಹುಬ್ಬಳ್ಳಿ ಗಲಭೆ (Hubballi Violence) ಪ್ರಕರಣ ಸೇರಿ 43 ಕೇಸ್‌ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ (Karnataka Government) ಮುಂದಾಗಿದೆ. ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದ 7 ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ.

ರಾಷ್ಟ್ರೀಯ ತನಿಖಾ ದಳದ (NIA) ನ್ಯಾಯಾಲಯಕ್ಕೆ ಕೇಸ್‌ ವಾಪಸಾತಿ ಅರ್ಜಿಯನ್ನು ಎಸ್‌ಪಿಪಿ ಮೂಲಕ ಸಲ್ಲಿಸಿದೆ. ಪ್ರಕರಣದ ವಿಚಾರಣೆ ಏಪ್ರಿಲ್ 7ಕ್ಕೆ ಮುಂದೂಡಿಕೆಯಾಗಿದೆ. ಕೇಸ್ ಹಿಂಪಡೆಯುವ ಸರ್ಕಾರದ ತೀರ್ಮಾನ ಆಕ್ಷೇಪಿಸಿ ಇಬ್ಬರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆ ಮಾರ್ಚ್ 17ರಂದು ನಡೆಯಲಿದೆ.

ಸರ್ಕಾರದ ನಡೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಹುಬ್ಬಳ್ಳಿ ಠಾಣೆ ಮೇಲೆ ದಾಳಿ ಮಾಡಿರುವವರು ದೇಶ ಪ್ರೇಮಿಗಳಾ? ಇವರಿಗೆ ಯಾವುದರಲ್ಲಿ ಹೊಡಿಯಬೇಕು ಎಂದು ಸಿಟಿ ರವಿ ಸಿಟ್ಟಾಗಿದ್ದಾರೆ.

Hubballi Riot
ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ತೂರುತ್ತಿರುವ ಕಿಡಿಗೇಡಿಗಳು

ಸರ್ಕಾರದ ಕಾರಣ ಏನು?
ಸುಳ್ಳು ಕೇಸ್ ಹಾಕಿದ್ರೆ ಪರಿಶೀಲಿಸಿ ವಾಪಸ್ ಪಡೆಯಲು ಸರ್ಕಾರಕ್ಕೆ ಅವಕಾಶ ಇದೆ. ಅಷ್ಟೊಂದು ಜನರ ಮೇಲೆ ಹಾಕುವ ಅಗತ್ಯವಿಲ್ಲ ಎಂದು ಸಂಪುಟ ಉಪಸಮಿತಿ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲ, ವಿದ್ಯಾರ್ಥಿಗಳು, ರೈತರು ಇದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೂ ಹಲವು ಕೇಸ್ ವಾಪಸ್ ಪಡೆದಿತ್ತು. ಉತ್ತರ ಪ್ರದೇಶದಲ್ಲೂ ಅಲ್ಲಿನ ಸಿಎಂ ವಿರುದ್ಧದ ಹಲವು ಕೇಸ್ ಹಿಂಪಡೆಯಲಾಗಿದೆ.  ಇದನ್ನೂ ಓದಿ: ಕರ್ನಾಟಕ, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ – ಬೆನ್ನು ತಟ್ಟಿಕೊಂಡ ಪರಮೇಶ್ವರ್

ಏನಿದು ಪ್ರಕರಣ?
ಏಪ್ರಿಲ್ 16, 202 ರಂದು ಯುವಕನೊಬ್ಬ ವಿವಾದಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಗಲಭೆ ನಡೆದು ಉದ್ರಿಕ್ತರು ಹಳೆ ಹುಬ್ಬಳ್ಳಿ ಠಾಣೆ ಎದುರು ಪೊಲೀಸರು ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಸಂಬಂಧ 11 ಎಫ್‌ಐಆರ್‌ ದಾಖಲಾಗಿ 155 ಮಂದಿ ಮೇಲೆ ಕೇಸ್‌ ದಾಖಲಾಗಿತ್ತು. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಪೊಲೀಸ್‌ ವಾಹನಗಳಿಗೆ ಹಾನಿಯಾಗಿದ್ದರೆ ಇಬ್ಬರು ಪೊಲೀಸ್‌ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಕೈಬಿಡುವಂತೆ ಡಿಸಿಎಂ ಡಿಕೆ ಶಿವಕುಮಾರ್‌ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಡಿಕೆಶಿ ಅವರ ಪತ್ರ ಆಧರಿಸಿ ಪ್ರಕರಣದ ಮಾಹಿತಿಯನ್ನು ಸಲ್ಲಿಸುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತರಿಗೆ ಎಡಿಜಿಪಿ ಸೂಚಿಸಿದ್ದರು.   2023 ಸೆಪ್ಟೆಂಬರ್‌ನಲ್ಲಿ ಎಲ್ಲಾ ಜಿಲ್ಲೆಗಳ ಎಸ್ಪಿ, ಕಮೀಷನರ್ ಗಳಿಗೆ ಡಿಜಿ-ಐಜಿ ಪತ್ರ ಬರೆದು ನಿಮ್ಮ ಜಿಲ್ಲೆಗಳಲ್ಲಿ ಕೇಸ್ ವಾಪಸ್ ಪಡೆಯುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು.

Share This Article