2019ರ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಉದ್ದೇಶ ಪೂರ್ವಕವಾಗಿ ಸೋತಿತ್ತು: ಪಾಕ್ ಕ್ರಿಕೆಟಿಗ

Public TV
2 Min Read

ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧ 2019ರ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಉದ್ದೇಶ ಪೂರ್ವಕವಾಗಿ ಸೋತಿತ್ತು ಎಂಬ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಪಾಕಿಸ್ತಾನ ಮಾಜಿ ಆಲ್‍ರೌಂಡರ್ ಅಬ್ದುಲ್ ರಜಾಕ್ ಆರೋಪಿಸಿದ್ದಾರೆ.

ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದರೆ ಪಾಕಿಸ್ತಾನಕ್ಕೆ ಸೆಮಿ ಫೈನಲ್ ಪ್ರವೇಶಿಸುವ ಅವಕಾಶವಿತ್ತು. ಆದರೆ ಭಾರತ ಸೋಲುವ ಮೂಲಕ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರ ನಡೆಯುವಂತೆ ಮಾಡಿತ್ತು ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.

ಅಂದು ಪಂದ್ಯದ ವೀಕ್ಷಕ ವಿಶ್ಲೇಷಣೆ ಮಾಡುತ್ತಿದ್ದ ಎಲ್ಲರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನಾನು ಈ ಬಗ್ಗೆ ಐಸಿಸಿಗೂ ಮನವಿ ಸಲ್ಲಿಸಿದ್ದೆ. ಐಸಿಸಿ, ಆಟಗಾರರ ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತದೆ. ಆದರೆ ತಂಡವೊಂದು ಮತ್ತೊಂದು ತಂಡವನ್ನು ಸೆಮಿ ಫೈನಲ್‍ಗೆ ತಲುಪದಂತೆ ಮಾಡಲು ಉದ್ದೇಶ ಪೂರ್ವಕವಾಗಿ ಸೋತರೆ ದಂಡ ತೆರಬೇಕು ಎಂದು ತಿಳಿಸಿದ್ದಾರೆ.

ಕ್ರಿಕೆಟ್ ಆಡಿದ ಯಾವುದೇ ಆಟಗಾರ ಇಂತಹ ಅಂಶಗಳನ್ನು ಸುಲಭವಾಗಿ ಅರಿತುಕೊಳ್ಳಬಹುದು. ಯಾವುದೇ ಒಬ್ಬ ಉತ್ತಮ ಬೌಲರ್ ಲೈನ್ ಅಂಡ್ ಲೆಂಥ್ ತಪ್ಪಿಸಿ ಬೌಲ್ ಮಾಡಲು ಪ್ರಯತ್ನಿಸುವುದು. ವಿಕೆಟ್ ಪಡೆಯಲು ಯತ್ನಿಸದೆ ಸುಲಭವಾಗಿ ರನ್ ಬಿಟ್ಟುಕೊಡುವುದು ನೋಡಿದರೆ ಅದು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾರೆ ಎಂದು ಹೇಳಬಹುದು. ಇದು ಕೂಡ ಐಸಿಸಿ ನಿಯಮಗಳ ಭಾಗಬೇಕು. ಅಲ್ಲದೇ ಐಸಿಸಿ ಲೆವೆಲ್ 1,2..5ರ ಉಲ್ಲಂಘನೆ ಅಡಿ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಈ ವೇಳೆ ಭಾರತ ಉದ್ದೇಶವಾಗಿ ಪಂದ್ಯದಲ್ಲಿ ಸೋಲುಂಡಿತ್ತಾ ಎಂಬ ಪ್ರಶ್ನೆಗೆ ಉತ್ತರಿಸುವ ಅಬ್ದುಲ್ ರಜಾಕ್, ಖಂಡಿತ ಇದರಲ್ಲಿ ಯಾವುದೇ ಸಂದೇಹವಿಲ್ಲ. ಸಿಕ್ಸರ್ ಸಿಡಿಸುವ ಸಾಮರ್ಥ್ಯವಿರೋ ಆಟಗಾರ, ಬೌಂಡರಿ ಅಥವಾ ಚೆಂಡನ್ನು ಬ್ಲಾಕ್ ಮಾಡುತ್ತಿದ್ದರೆ ಸುಲಭವಾಗಿ ಇದನ್ನು ಆರ್ಥೈಸಬಹುದಾಗಿದೆ. ನಾನು ಮಾತ್ರವಲ್ಲದೇ ಹಲವು ಕ್ರಿಕೆಟ್ ಆಟಗಾರರು ಇದನ್ನೇ ಹೇಳಿದ್ದಾರೆ. ಐಸಿಸಿ ಉದ್ದೇಶ ಪೂರ್ವಕವಾಗಿ ಸೋಲುವವರ ವಿರುದ್ಧ ನಿಯಮಗಳನ್ನು ರೂಪಿಸಬೇಕಿದೆ ಎಂದು ಹೇಳಿದ್ದಾರೆ.

ಅಂದು ಪಂದ್ಯದಲ್ಲಿ ಗೆಲ್ಲಲು 338 ರನ್ ಗುರಿ ಪಡೆದಿದ್ದ ಟೀಂ ಇಂಡಿಯಾ ಅಂತಿಮ 5 ಓವರ್ ಗಳಲ್ಲಿ 71 ರನ್ ಗಳಿಸುವ ಗುರಿಯನ್ನು ಹೊಂದಿತ್ತು. ಆ ವೇಳೆ ಧೋನಿ ಹಾಗೂ ಕೇಧಾರ್ ಜಾಧವ್ ಬ್ಯಾಟ್ ಬೀಸುತ್ತಿದ್ದರು. ಆದರೆ ಅಂದು ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 306 ರನ್ ಕಲೆ ಹಾಕಿ 31 ರನ್ ಅಂತರದಲ್ಲಿ ಸೋಲುಂಡಿತ್ತು. ಅಂತಿಮ 5 ಓವರ್ ಗಳಲ್ಲಿ ಟೀಂ ಇಂಡಿಯಾ ಆಟಗಾರರು 39 ರನ್ ಕಲೆ ಹಾಕಲು ಮಾತ್ರ ಸಾಧ್ಯವಾಗಿತ್ತು. ಧೋನಿ 31 ಎಸೆತಗಳಲ್ಲಿ 42 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಟೀಂ ಇಂಡಿಯಾ ಆಟಗಾರರು ಇನ್ನಿಂಗ್ಸ್ ನಲ್ಲಿ ಕೇವಲ 1 ಸಿಕ್ಸರ್ ಸಿಡಿಸಿದ್ದರು. ಇಂಗ್ಲೆಂಡ್ ಆಟಗಾರು 13 ಸಿಕ್ಸರ್ ಸಿಡಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ನಾಯಕ ಕೊಹ್ಲಿ, ಧೋನಿ ನಿಧಾನ ಗತಿ ಬ್ಯಾಟಿಂಗ್ ಶೈಲಿಗೆ ಸ್ಪಷ್ಟನೆ ನೀಡಿದ್ದರು. ಅನುಭವಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗಿದ್ದ ಧೋನಿ ಬೌಂಡರಿ ಸಿಡಿಸಲು ಸಾಕಷ್ಟು ಪ್ರಯತ್ನಿಸಿದ್ದರು ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *