ಕರ್ನಾಟಕ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗಲ್ಲ, ಸಮ್ಮಿಶ್ರ ಸರ್ಕಾರ ವರ್ಷದೊಳಗೆ ಬಿದ್ದೋಗುತ್ತೆ: ಉಡುಪಿ ಜ್ಯೋತಿಷಿ

Public TV
3 Min Read

ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಇಲ್ಲ. ಎರಡು ಪಕ್ಷಗಳು ಒಂದಾದ್ರೆ ವರ್ಷದೊಳಗೆ ದೋಸ್ತಿ ಕಡಿದು ಬೀಳುವುದು ಖಂಡಿತ. ಹೇವಿಳಂಬಿ ಸಂವತ್ಸರದಲ್ಲಿ ಕರ್ನಾಟಕ ಮತ್ತೊಂದು ಗೋದ್ರಾವಾಗುತ್ತೆ, ನಾಯಕರೆಲ್ಲ ಸೈಲೆಂಟಾಗಿದ್ರೆ ಬಚಾವ್. ಇನ್ನು ಏಳು ವರ್ಷ ನರೇಂದ್ರ ಮೋದಿಯನ್ನು ಮುಟ್ಟೋದಕ್ಕೂ ಆಗೋದಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗೋ ಕನಸು ಕಾಣೋದನ್ನು ಬಿಟ್ಟು ಬಿಡಿ ಎಂದು ಗುಜರತಾ ಫಲಿತಾಂಶ ಪ್ರಕಟವಾಘುವ ಮುನ್ನ ನಿಖರ ಭವಿಷ್ಯ ನುಡಿದಿದ್ದ ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

ಸಿಎಂ ಮತ್ತು ಬಿಜೆಪಿಯ ಜಟಾಪಟಿಗಳ ಬಗ್ಗೆ ಶಾಸ್ತ್ರದ ಪ್ರಕಾರ ಮಾತನಾಡಿದ್ದಾರೆ. ಜೆಡಿಎಸ್ ಪಾತ್ರ ಬಿಚ್ಚಿಟ್ಟಿದ್ದಾರೆ. ಮೋದಿಯನ್ನು 7 ವರ್ಷ ಅಲುಗಾಡಿಸಲು ಅಸಾಧ್ಯ. ಮಣ್ಣಿನ ವಾಸನೆಗೆ ವಿರುದ್ಧವಾದ ಪಕ್ಷ ಮತ್ತೊಂದು ರೈತರ ಪರವಾದ ಪಕ್ಷ ರಾಜ್ಯದಲ್ಲಿ ಸಮ್ಮಿಶ್ರವಾಗಿ ಸರ್ಕಾರ ರಚಿಸುತ್ತದೆ. ಆದರೆ ಆ ಸರ್ಕಾರ ವರ್ಷದೊಳಗೆ ಕುಸಿದು ಬೀಳುತ್ತದೆ. ಭಾರತದಲ್ಲಿ ಹಿಂದುತ್ವಕ್ಕೆ ಬೆಲೆಕೊಡುವ ಪಕ್ಷಕ್ಕೆ ಭವಿಷ್ಯವಿದೆ. ರಾಜಕೀಯ ವಿಶ್ಲೇಷಕರು ರಾಜಕಾರಣಿಗಳಿಗೆ ಕಿವಿಮಾತು ಹೇಳಬೇಕು. ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ ಬೆಲೆ ಸಿಗದಿದ್ದರೆ ಬಹುಸಂಖ್ಯಾತರು ಒಂದಲ್ಲ ಒಂದು ದಿನ ತಿರುಗಿ ಬೀಳದೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

ರಾಜ್ಯದಲ್ಲಿ ಸಣ್ಣ ಘಟನೆಗಳು ಆದಾಗ ಅದಕ್ಕೆ ಸರ್ಕಾರ ಒಂದು ಕೋಮಿಗೆ ಬೆಂಬಲ ಕೊಡುತ್ತದೆ. ಇದೇ ದೊಡ್ಡಮಟ್ಟದ ಗಲಾಟೆಗೆ ಕಾರಣವಾಗುತ್ತದೆ. ರಾಜ್ಯ ಸರ್ಕಾರ ಮಾಡಿದ ಕೆಲಸವನ್ನು ನನ್ನ ಕಾಲಾವಧಿಯಲ್ಲಿ ಆಯ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಂಡು ಬೀಗುತಿದ್ದಾರೆ. ಒಂದು ಧರ್ಮದ ಬಗ್ಗೆ ತುಷ್ಟೀಕರಣ ಮಾಡುತ್ತಿದ್ದಾರೆ. ಪ್ರೀತಿಸುವ- ಗೆಳೆತನದಿಂದ ಇರುವ ಮುಸ್ಲಿಮರನ್ನು ದ್ವೇಷಿಸುವ ಮಟ್ಟಿಗೆ ತಂದಿದ್ದು ಸಿಎಂ ಸಿದ್ದರಾಮಯ್ಯ. ಅವರಿಂದಲೇ ಸಮಾಜದ ವಿಭಜನೆ ಆಗುತ್ತಿದೆ. ಕರ್ನಾಟಕ ಮತ್ತೊಂದು ಗೋದ್ರಾ ಆದ್ರೆ ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್‍ಡಿಡಿ ವಿರುದ್ಧ ರಫ್&ಟಫ್ ವರ್ತನೆ ಬೇಡ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

ಮಹಾದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ಇಲ್ವಾ? ಮಹಾದಾಯಿ ವಿಚಾರದಲ್ಲಿ ಬಿಜೆಪಿ ಅವಸರ ಮಾಡಿದೆ. ಒಳ್ಳೆಯ ವಾತಾವರಣವನ್ನು ಯಡಿಯೂರಪ್ಪ ಹಾಳು ಮಾಡಿಕೊಂಡಿದ್ದಾರೆ. ಈ ಎಲ್ಲಾ ರಾಜಕೀಯ ಏರುಪೇರುಗಳಿಗೆ ಕಾರಣ ವಿಳಂಬಿ ಸಂವತ್ಸರ. ಎಲ್ಲಾ ರಾಜಕೀಯ ನಾಯಕರು ಚುನಾವಣೆಗಾಗಿ- ಅಧಿಕಾರಕ್ಕಾಗಿ ಪರಿಸ್ಥಿತಿಯನ್ನು ಉಪಯೋಗ ಮಾಡಿಕೊಳ್ಳಬಾರದು. ಅದರಿಂದ ದುಷ್ಪರಿಣಾಮವೇ ಹೆಚ್ಚು. ಜನ ಬುದ್ಧಿವಂತರು ಅಂತಾ ಅಂದ್ರು. ಇದನ್ನೂ ಓದಿ: ಗುಜರಾತ್ ಭವಿಷ್ಯ 20 ಗಂಟೆ ಮೊದಲೇ ಬರೆದಿದ್ದ ಉಡುಪಿ ಜ್ಯೋತಿಷಿ

ರಾಜಕೀಯ ಪಕ್ಷಗಳು ನಮ್ಮ ರಾಜ್ಯವನ್ನು ಮೂರು ವಿಭಾಗ ಮಾಡಿ ಜನರನ್ನು ಒಲಿಸಲು ಪ್ರಯತ್ನ ಮಾಡಬೇಕು. ಕರಾವಳಿ ಹಿಂದುತ್ವ ವಿರುದ್ಧ ಹೋಗದೆ ಸಮಸ್ಯೆಗಳ ಪರಿಹಾರ ಮಾಡಬೇಕು. ಉತ್ತರ ಕರ್ನಾಟಕದ ಲಿಂಗಾಯತ- ಮಹಾದಾಯಿ- ಗಡಿ ಸಮಸ್ಯೆ ಬಗ್ಗೆ, ಮಧ್ಯೆ ಕರ್ನಾಟಕದ ಕನ್ನಡ ಪ್ರೇಮಿಗಳು. ರೈತರು ಸ್ವಾಭಿಮಾನಿಗಳು ಹೀಗಾಗಿ ಆಯಾಯ ಭಾಗಕ್ಕೆ ತಕ್ಕುದಾದಂತೆ ಸಮಸ್ಯೆ ಬಗೆಹರಿಸಿದರೆ ಜನ ಹರಸುತ್ತಾರೆ. ಅದಕ್ಕೆ ವಿರುದ್ಧವಾಗಿ ನಡೆದರೆ ತಕ್ಕ ಪಾಠಕಲಿಸುತ್ತಾರೆ ಅಂತಾ ತಿಳಿಸಿದ್ದಾರೆ.

ನಿಖರ ಭವಿಷ್ಯ ಹೇಳಿದ್ರು:
ನಾಳೆಯ ಗುಜರಾತಿನಲ್ಲಿ 7.17 ಕ್ಕೆ ಧನುರ್ಲಗ್ನದಲ್ಲಿ ಸೂರ್ಯೋದಯ ಆಗಲಿದೆ. ಲಗ್ನಾಧಿಪತಿ ಲಾಭಸ್ಥಾನದಲ್ಲಿ ಪಂಚಮಾಧಿಪತಿ ಜತೆಗೆ. ಆದರೆ ಲಗ್ನದಲ್ಲಿ ರವಿ ಶನಿ ಗ್ರಹ ಯುದ್ಧ ಸ್ಥಿತಿ. ಪರಿಣಾಮ- ಬಹಳ ಯುದ್ಧಸ್ಥಿತಿ ಸುಮಾರು ಹತ್ತುಗಂಟೆಯ ವರೆಗಿದೆ. ಬಿಜೆಪಿಯ ಹಿನ್ನಡೆಗಳೇ ಎದ್ದು ಕಾಣಬಹುದು. ಹತ್ತುಗಂಟೆ ನಂತರ ಎಲ್ಲಾ ಮಾಧ್ಯಮಗಳ ಲೆಕ್ಕಾಚಾರ ಬುಡಮೇಲಾಗಬಹುದು. ಪೊರಕೆಗಳಿಗೆ ಡಿಮಾಂಡ್ ಹೆಚ್ಚಾದೀತು. ಕೊನೆಗೆ ಬಿಜೆಪಿಗೆ ಗೆಲುವು ಸಿಗಲಿದೆ ಎಂದು ಬರೆದು ಡಿಸೆಂಬರ್ 17 ರ 7 ಗಂಟೆ 59 ನಿಮಿಷಕ್ಕೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ರು.

https://youtu.be/c3mf0ZAIGVM

https://youtu.be/SJA_KziC9i4

Share This Article
Leave a Comment

Leave a Reply

Your email address will not be published. Required fields are marked *