– 2013ರಲ್ಲಿ ನಡೆದಿದ್ದ ಕೊಲೆ ಪ್ರಕರಣ ಬೆಳಕಿಗೆ
ಬೆಂಗಳೂರು: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಆರು ವರ್ಷದಿಂದ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನು ಕೊಲೆ ಮಾಡಿದ್ದ ಗ್ಯಾಂಗ್ ಸದಸ್ಯನನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2013 ರಲ್ಲಿ ನಡೆದಿದ್ದ ಮಹಿಳೆಯ ಕೊಲೆಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕೆಂಪೇಗೌಡ ನಗರದ ಮಾನಸರನ್ನು 2013 ರಲ್ಲಿ ಮನೆಯಲ್ಲಿ ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದರು. ಅಂದು ಒಂದೇ ಒಂದು ಸುಳಿವು ಸಹ ಸಿಕ್ಕಿರಲಿಲ್ಲ. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಣ್ಣ ಸುಳಿವು ಸಿಕ್ಕಿತ್ತು. ಆ ಮಾಹಿತಿ ಬೆನ್ನತ್ತಿದ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
2013ರಲ್ಲಿ ಕೆಂಪೇಗೌಡನಗರದಲ್ಲಿ ಮಾನಸರನ್ನು ಯಾರೋ ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿಬಿಟ್ಟಿದ್ದರು. ಯಾವುದೇ ಬಲವಂತದ ಪ್ರವೇಶ ಇಲ್ಲದೆ ಮನೆಯೊಳಗೆ ನುಗ್ಗಿದ್ದ ಆರೋಪಿಗಳು ಮಾನಸರನ್ನು ಹತ್ಯೆ ಮಾಡಿ ಬರೋಬ್ಬರಿ 400 ಗ್ರಾಂ ಚಿನ್ನ 1 ಲಕ್ಷ ನಗದನ್ನು ಕಳವು ಮಾಡಿದ್ದರು. ಶಾಲೆಗೆ ಹೋಗಿದ್ದ ಮಗು ಮನೆಗೆ ಬಂದ ಬಳಿಕ ಮಾನಸ ಹತ್ಯೆ ಬಗ್ಗೆ ಗೊತ್ತಾಗಿತ್ತು. ಆದರೆ ಯಾವುದೇ ಸುಳಿವು ಕೂಡ ಪ್ರಕರಣದಲ್ಲಿ ಪತ್ತೆಯಾಗಿರಲಿಲ್ಲ.
ಪ್ರಕರಣವನ್ನೇ ಕೈಬಿಟ್ಟಿದ್ದ ಪೊಲೀಸರಿಗೆ ಬೇರೊಂದು ಕೊಲೆ ಪ್ರಕರಣವನ್ನು ತನಿಖೆ ಮಾಡುವಾಗ ಸುಳಿವು ಸಿಕ್ಕಿತ್ತು. ನಂತರ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ 6 ವರ್ಷದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಗ್ಯಾಂಗ್ ಚಿನ್ನಕ್ಕಾಗಿ ಸಾಕಷ್ಟು ಕೊಲೆಗಳನ್ನು ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಇವರು ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿದ್ದರು. ಇಬ್ಬರು ಕೊಲೆ ಮಾಡಿದ್ದ ಆರೋಪಿಗಳಾಗಿದ್ದು, ಅವರಲ್ಲಿ ಒಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಸದ್ಯಕ್ಕೆ ನಾವು ಆರೋಪಿ ರಾಘವೇಂದ್ರನನ್ನು ಬಂಧಿಸಿದ್ದೇವೆ. ಇವರಿಬ್ಬರು ರಾಜರಾಜೇಶ್ವರಿನಗರದಲ್ಲಿ ವಯೋವೃದ್ಧೆ ಸೇರಿದಂತೆ ನಗರದ ಅನೇಕ ಕಡೆ ಸಾಕಷ್ಟು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv