ಮುಂಬೈ: ನವ ವಿವಾಹಿತೆಯೊಬ್ಬರು 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಟರ್ಡೆಯಲ್ಲಿ ನಡೆದಿದೆ.
ಛಾಯಾ ಕೈಲಾಶ್ ಭುಟಿಯಾ,(20) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಕಟ್ಟಡದಿಂದ ಬಿದ್ದ ತಕ್ಷಣ ಛಾಯಾ ಅವರನ್ನ ಸಮೀಪದ ನಾಯರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಿಯೇ ಆಕೆ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಟರ್ಡೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?: ಛಾಯಾ, ಟರ್ಡೆಯ 16 ಮಹಡಿಯ ಗಣೇಶ್ ಕಟ್ಟಡದ ನಿವಾಸಿಯಾಗಿದ್ದರು. ಕಟ್ಟಡವು ಸ್ಲಂ ಪುನರ್ ಅಭಿವೃದ್ಧಿಯ ಯೋಜನೆಯ ಭಾಗವಾಗಿತ್ತು. ಛಾಯಾರಿಗೆ 45 ದಿನಗಳ ಹಿಂದೆ ವಿವಾಹವಾಗಿದ್ದು, ಅವಿಭಕ್ತ ಕುಟುಂಬದೊಂದಿಗೆ ವಾಸಿಸುತ್ತಿದ್ದರು.
ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಛಾಯ ಬಾತ್ ರೂಮಿಗೆ ತೆರಳಿದ್ದಾರೆ. ಆದರೆ ಕೆಲ ಸಮಯವಾದರೂ ಆಕೆ ಹೊರಬರಲಿಲ್ಲ. ಇದರಿಂದ ಗಾಬರಿಗೊಳಗಾದ ಕುಟುಂಬದ ಸದಸ್ಯರು ಬಾಗಿಲು ತಟ್ಟಿದ್ದಾರೆ. ಆದ್ರೆ ಒಳಗಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಛಾಯಾ ಬಾತ್ ರೂಮ್ ಕಿಟಕಿಯನ್ನು ತೆಗೆದು ಹಾಕಿದ್ದು, ದುರಸ್ಥಿ ಕಾಮಗಾರಿಗಾಗಿ ನಿರ್ಮಿಸಲಾಗಿದ್ದ ಬಿದಿರಿನ ಮೇಲೆ ನಿಂತಿದ್ರು.
ಇತ್ತ ಕುಟುಂಬದವರು 4 ಗಂಟೆಯ ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಬಾಗಿಲನ್ನು ಮುರಿದು ಒಳಗೆ ಹೋಗಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಛಾಯಾ 14ನೇ ಮಹಡಿಯ ಬಿದಿರಿನ ಮೇಲೆ ನಿಂತಿದ್ದರು. ಪೊಲೀಸರು ಆಕೆಯ ಮನವೊಲಿಸಲು ಪ್ರಯತ್ನಿಸಿದರೂ ಆಕೆ 14ನೇ ಮಹಡಿಯಿಂದ ಜಿಗಿದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಛಾಯಾ ಬಿದ್ದ ತಕ್ಷಣ ನಾಯರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ಪರೀಕ್ಷೆ ಮಾಡಿ ಅದಾಗಲೇ ಆಕೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ ಎಂದು ಉಪ ಪೊಲೀಸ್ ಆಯುಕ್ತರಾದ ವೀರೇಂದ್ರ ಶರ್ಮಾ ತಿಳಿಸಿದ್ದಾರೆ.