ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 20 ವರ್ಷದ ಯುವಕನನ್ನು ಬರ್ಬರ ಕೊಲೆ ಮಾಡಿರುವ ಘಟನೆ ಕಮಲಾನಗರದ ಶಂಕರ್ನಾಗ್ ಬಸ್ ನಿಲ್ದಾಣದ ಬಳಿ ನಡೆದಿದೆ.
ಹಿತೇಶ್ (20) ಮೃತ ಯುವಕ. ಹೆಗ್ಗನಹಳ್ಳಿ ನಿವಾಸಿಯಾದ ಈತ ಹಳೆ ಏರಿಯಾ ಎಂದು ಕಮಲಾನಗರಕ್ಕೆ ಹೋಗಿದ್ದನು. ಕಮಲಾನಗರದ ಶಂಕರ್ನಾಗ್ ಬಸ್ಸ್ಟಾಪ್ ಬಳಿ ನಿಂತಿದ್ದ ವೇಳೆ ದುಷ್ಕರ್ಮಿಗಳು ಹಿತೇಶ್ನ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ವಿಷಯ ತಿಳಿದ ಬಸವೇಶ್ವರನಗರ ಪೊಲೀಸ್ ಇನ್ಸ್ ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿದ್ದು, ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತ ಸ್ರಾವದಿಂದ ಹಿತೇಶ್ ಕೊನೆಯುಸಿರೆಳೆದಿದ್ದಾನೆ. ವರ್ಷದ ಹಿಂದಷ್ಟೇ ಕಮಲಾನಗರದ ಮನೆ ಖಾಲಿ ಮಾಡಿ ಹಿತೇಶ್ನ ಪೋಷಕರು ಹೆಗ್ಗನಹಳ್ಳಿ ಸೇರಿದ್ದರು.
ಹಣ ಹಂಚಿಕೆಗಾಗಿ ಕೊಲೆ!
ಹಿತೇಶ್ ಕೊಲೆಯಾದ ಸಮಯದಲ್ಲಿ ಇಬ್ಬರು ಹುಡುಗರ ಜೊತೆ ಮಹಿಳೆಯೊಬ್ಬರು ಇದ್ದರು ಎಂದು ಸ್ಥಳೀಯರು ಮಾತಾಡುತ್ತಿದ್ದಾರೆ. ಯಾವುದೋ ವೇಶ್ಯಾವಾಟಿಕೆ ವಿಚಾರದಲ್ಲಿ ಹಣಕಾಸಿನ ಹಂಚಿಕೆಯಲ್ಲಿ ಮಾತಿಗೆ ಮಾತು ಬೆಳೆದು ಹಿತೇಶ್ನನ್ನ ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಇನ್ಸ್ ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡ ಕೊಲೆ ಆರೋಪಿಗಳಿಗಾಗಿ ಬಲೆ ಬೀಸಿದೆ.