20 ಲಕ್ಷ ರೂ. ಚಿನ್ನಾಭರಣ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪಿಎಸ್‍ಐ

Public TV
1 Min Read

– ಪಿಎಸ್‍ಐ ನವೀನ್ ಮಠಪತಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ಶಿವಮೊಗ್ಗ: ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಜಿಲ್ಲೆಯ ಕುಂಸಿ ಠಾಣೆಯ ಪಿಎಸ್‍ಐ ನವೀನ್ ಮಠಪತಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಮೇ 23 ರಂದು ಜಿಲ್ಲೆಯ ಕುಂಸಿ ಠಾಣೆ ವ್ಯಾಪ್ತಿಯ ಚೋರಡಿ ಬಳಿ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದರು. ಮೃತಪಟ್ಟ ಮಹಿಳೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಭಾರತಿ ಎಂದು ಗುರುತಿಸಲಾಗಿತ್ತು. ದಂಪತಿ ಕಾರಿನಲ್ಲಿ ತುಪ್ಪೂರಿನಿಂದ ಕಡೂರಿಗೆ ವಾಪಸ್ ಹೋಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿತ್ತು.

ಪತ್ನಿ ಕಳೆದುಕೊಂಡು ದುಃಖದಲ್ಲಿದ್ದ ಸುಬ್ಬಯ್ಯನವರಿಗೆ ಕುಂಸಿ ಠಾಣೆ ಪೊಲೀಸರು ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಪೊಲೀಸರು ಯಾಕೋ ಕರೆಯುತ್ತಿದ್ದಾರೆ ಏನಿರಬಹುದು ಎಂದು ಸುಬ್ಬಯ್ಯನವರ ಜೊತೆಗೆ ಕುಟುಂಬದ ಐದು ಜನ ಭಯದಿಂದಲೇ ಠಾಣೆಗೆ ಹೋಗಿದ್ದಾರೆ. ಈ ವೇಳೆ ಪಿಎಸ್‍ಐ ನವೀನ್ ಮಠಪತಿ ಅವರು ಅಪಘಾತವಾದ ಸ್ಥಳದಲ್ಲಿ ಸಿಕ್ಕಿತ್ತು ತೆಗೆದುಕೊಳ್ಳಿ ಎಂದು ಸುಮಾರು 15-20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ನೀಡಿದ್ದಾರೆ. ಈ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಮೃತ ಭಾರತಿ ಬಂಗಾರದ ಒಡವೆ ತೆಗೆದುಕೊಂಡು ಬಂದಿರುವುದನ್ನು ಪತಿ ಸುಬ್ಬಯ್ಯ ಅವರಿಗೆ ಹೇಳಿರಲಿಲ್ಲ. ಪತ್ನಿ ಕಳೆದುಕೊಂಡ ದುಃಖದಲ್ಲಿದ್ದ ಸುಬ್ಬಯ್ಯ ಚಿನ್ನಾಭರಣದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಪಿಎಸ್‍ಐ ಸ್ವಯಂ ಪ್ರೇರಿತರಾಗಿ ಹಿಂದಿರುಗಿಸಿ, ಇತರರಿಗೆ ಪ್ರೇರಣೆ ಆಗಿದ್ದಾರೆ. ಪಿಎಸ್‍ಐ ನವೀನ್ ಮಠಪತಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *