ಗೋಹತ್ಯೆ ಮಾಡಿದ್ದೀರೆಂದು ಮನೆಗೆ ನುಗ್ಗಿ ಇಬ್ಬರು ಆದಿವಾಸಿಗಳ ಮೇಲೆ ಹಲ್ಲೆ ನಡೆಸಿ ಕೊಲೆ

Public TV
1 Min Read

ಭೋಪಾಲ್: ಗೋಹತ್ಯೆ ಮಾಡಿದ್ದಾರೆಂದು ಆರೋಪಿಸಿ ಆದಿವಾಸಿಗಳ ಮನೆಗೆ ನುಗ್ಗಿ ಗುಂಪೊಂದು ಇಬ್ಬರು ಆದಿವಾಸಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ.

20 ಮಂದಿಯಿರುವ ಗುಂಪೊಂದು ಆದಿವಾಸಿಗಳ ಮನೆಗೆ ನುಗ್ಗಿದೆ. ನೀವು ಗೋಹತ್ಯೆ ಮಾಡಿದ್ದೀರಿ ಎಂದು ಆರೋಪಿಸಿ ಏಕಾಏಕಿ ಆದಿವಾಸಿಗಳ ಮೇಲೆ ದಾಳಿ ನಡೆಸಿದೆ. ಮಾರಣಾಂತಿಕ ಹಲ್ಲೆಗೆ ಒಳಗಾದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಅರೆನಗ್ನವಾಗಿ ಓಡಾಡಿದ ಹೆಡ್‍ಕಾನ್‍ಸ್ಟೇಬಲ್

ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಕಕೋಡಿಯಾ ಅವರು ಜಬಲ್‌ಪುರ-ನಾಗ್ಪುರ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಿಯೋನಿ ಪೊಲೀಸರು ಆದಿವಾಸಿಗಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸ್ ತಂಡಗಳು ಆರೋಪಿಗಳಿಗಾಗಿ ಶೋಧ ನಡೆಸುತ್ತಿವೆ. ಆರೋಪಿಗಳಲ್ಲಿ ಕೆಲವರ ಹೆಸರು (ದೂರಿನಲ್ಲಿ) ಮತ್ತು ಇನ್ನೂ ಕೆಲವರು ಗುರುತು ಪತ್ತೆಯಾಗಿಲ್ಲ. ಎರಡು-ಮೂರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಸುಮಾರು 12 ಕೆಜಿ ಮಾಂಸ ಸಂತ್ರಸ್ತರ ಮನೆಯಲ್ಲಿ ಪತ್ತೆಯಾಗಿದೆ ಎಂದು ಎಸ್‌ಪಿ ಮಾರವಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್‌ ಮದುವೆಯಲ್ಲಿ ಭಾಗವಹಿಸಿದ್ರೆ ಸಂಘಿಗಳಿಗೆ ಭಯ ಯಾಕೆ: ಕಾಂಗ್ರೆಸ್‌ ಪ್ರಶ್ನೆ

ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಸೂಚಿಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡಬೇಕು. ಗಾಯಗೊಂಡಿರುವ ವ್ಯಕ್ತಿಗೆ ಸರ್ಕಾರ ಚಿಕಿತ್ಸೆ ವೆಚ್ಚ ಭರಿಸಬೇಕು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ ನಾಥ್‌ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *