– ಜ.20ರಂದು ಮೋದಿ ಜೊತೆ ಸಂವಾದ
ತುಮಕೂರು: ಪ್ರಧಾನಿ ಮಂತ್ರಿಯ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಶಿರಾ ತಾಲೂಕಿನ ಚಿಕ್ಕನಹಳ್ಳಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಾಗರ್ ಹಾಗೂ ಚಂಗಾವರ ಪ್ರೌಢ ಶಾಲೆಯ ವಿದ್ಯಾರ್ಥಿನಿ ದೀಪಿಕಾ.ಆರ್ ಆಯ್ಕೆಯಾಗಿದ್ದು. ಪ್ರಧಾನಿ ಭೇಟಿ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ವಿದ್ಯಾರ್ಥಿ ಸಾಗರ್ ತಂದೆ ಆಟೋ ಚಾಲಕರಾಗಿದ್ದು, ವಿದ್ಯಾರ್ಥಿನಿ ದೀಪಿಕಾ ಅವರ ತಂದೆ ರೈತರಾಗಿದ್ದಾರೆ. ಇಬ್ಬರಿಗೂ ಜಿಲ್ಲೆಯಿಂದ ಅವಕಾಶ ಸಿಕ್ಕಿರುವುದರಿಂದ ಕುಟುಂಬದವರಲ್ಲಿ ಸಂತಸ ಮನೆ ಮಾಡಿದೆ. ಜ.19 ರಂದು ಇಬ್ಬರು ವಿದ್ಯಾರ್ಥಿಗಳು ದೆಹಲಿಗೆ ಹಾರಲಿದ್ದು, ಜ.20 ರಂದು ನಡೆಯುವ ಪ್ರಧಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವಿದ್ಯಾರ್ಥಿ ಸಾಗರ್ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳಿಗೆ ಮೊಬೈಲ್ ಬಳಸದಂತೆ ಕರೆ ನೀಡಬೇಕೆಂದು ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ವಿದ್ಯಾರ್ಥಿನಿ ದೀಪಿಕಾ ಗ್ರಾಮೀಣ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿಕೊಳ್ಳಲು ತಯಾರಿಸಿ ನಡೆಸಿದ್ದಾರೆ.
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೆರವಾಗಿ ಪ್ರಧಾನಿ ನರೇಂದ್ರ ಮೋದಿರೊಂದಿಗೆ ಚರ್ಚೆ ನಡೆಸಲು ಅವಕಾಶ ನೀಡಲಾಗುತ್ತದೆ. ಆಯ್ಕೆಯಾದ ಮಕ್ಕಳಿಗೆ ಪ್ರಧಾನಿಗಳು ಕೆಲ ಸಲಹೆಗಳನ್ನು ನೀಡುತ್ತಾರೆ. 10ನೇ ತರಗತಿಯ ವಿದ್ಯಾರ್ಥಿಗಳಾಗಿರುವುದರಿಂಧ ಪರೀಕ್ಷಾ ಸಮಯದಲ್ಲಿ ಹೇಗೆಲ್ಲಾ ತಯಾರಿ ನಡೆಸಬೇಕು. ಯಾವ ರೀತಿ ಪರೀಕ್ಷೆಗೆ ಸಿದ್ಧರಾಗಬೇಕು ಎಂಬ ಸಲಹೆಗಳನ್ನು ನೀಡಲಾಗುತ್ತದೆ.
ಪ್ರಧಾನಿ ಮೋದಿ ಅವರ ಸಂವಾದ ಕಾರ್ಯಕ್ಕೆ ಆಯ್ಕೆಯಾಗುತ್ತೇನೆ ಎಂದು ಸಾಗರ್ ನಿರೀಕ್ಷೆಯನ್ನೇ ಮಾಡಿರಲಿಲ್ಲ. ನಮ್ಮ ಶಾಲೆಯಲ್ಲಿ 10 ವಿದ್ಯಾರ್ಥಿಗಳ ಪಟ್ಟಿ ಮಾಡಿ ಕಳಿಸಿದ್ದರು. ಅದರಲ್ಲಿ ನಾನು ಆಯ್ಕೆ ಆಗಿರುವುದು ತುಂಬಾ ಸಂತೋಷ ತಂದಿದ್ದು, ಎಕ್ಸೈಟ್ ಮೆಂಟ್ ಹೆಚ್ಚಾಗಿದೆ ಎಂದು ಸಾಗರ್ ಹೇಳಿದ್ದಾರೆ. ನಾನು ಪ್ರಧಾನ ಮಂತ್ರಿಗಳ ಎದುರು ಮಕ್ಕಳು ಮೊಬೈಲ್ ಬಳಕೆ ಮಾಡುವುದು ಎಷ್ಟು ಸರಿ? ಮಕ್ಕಳ ಕೈಗೆ ಮೊಬೈಲ್ ನೀಡದಂತೆ ನೋಡಿಕೊಳ್ಳುವುದು ಹೇಗೆ? ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.
ವಿದ್ಯಾರ್ಥಿನಿ ದೀಪಿಕಾ ಕೂಡ ಆಯ್ಕೆ ಕುರಿತು ಖುಷಿ ಹಂಚಿಕೊಂಡಿದ್ದು, ಪ್ರಧಾನಿ ಭೇಟಿಗೆ ಅವಕಾಶ ಸಿಕ್ಕಿರುವುದು ಪುಣ್ಯ ಎಂದು ದೀಪಾ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ‘ಬೇಟಿ ಪಡಾವೋ ಬೇಟಿ ಬಚಾವೋ’ ಕಾರ್ಯಕ್ರಮದಂತೆ ಹೆಣ್ಣು ಮಕ್ಕಳಿಗಾಗಿ ಮತ್ತಷ್ಟು ಕಾರ್ಯಕ್ರಮ ರೂಪಿಸುವಂತೆ ಪ್ರಧಾನಿಗಳ ಬಳಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.